ರಾಣೇಬೆನ್ನೂರು `ವರ್ಲ್ಡ್ ಸ್ಪೇಸ್ ವೀಕ್’ ಸೆಮಿನಾರ್ನಲ್ಲಿ ಇಸ್ರೋ ವಿಜ್ಞಾನಿ ರಮೇಶ್ ನಾಯ್ಡು
ರಾಣೇಬೆನ್ನೂರು,ಅ.5- ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಅಂತರರಾಷ್ಟ್ರೀಯ ಸಂಭ್ರಮಾಚರಣೆ ಸಮಯ ಬಂದಿದೆ. ಮಾನವಕುಲದ ಒಳಿತಿಗೆ ವಿಜ್ಞಾನ ನೀಡಿರುವ ಕೊಡುಗೆಗಳನ್ನು ಸ್ಮರಿಸಲು ಮತ್ತು ಗುರುತಿಸಲು ವರ್ಲ್ಡ್ ಸ್ಪೇಸ್ ವೀಕ್ ಅನ್ನು `ಬಾಹ್ಯಾಕಾಶ ಮತ್ತು ಉದ್ಯಮಶೀಲತೆ’ ಎಂಬ ಥೀಮ್ ನೊಂದಿಗೆ ಆಚರಿಸಲಾಗುತ್ತಿದೆ. ಬಾಹ್ಯಾಕಾಶ ಮತ್ತು ಉದ್ಯಮಶೀಲತೆ ಸಾಧಿಸುವತ್ತ ಈ ವಾರ ಗಮನ ಹರಿಸಲಾಗುವುದು ಎಂದು ಇಸ್ರೋ ಮತ್ತು ಯು. ಆರ್. ರಾವ್ ಸೆಟಲೈಟ್ ಸೆಂಟರ್ ವಿಜ್ಞಾನಿ ವಿ. ರಮೇಶ್ ನಾಯ್ಡು ತಿಳಿಸಿದರು.
ಇಲ್ಲಿನ ತರಳಬಾಳು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಒಂದು ದಿನದ `ವರ್ಲ್ಡ್ ಸ್ಪೇಸ್ ವೀಕ್’ ಸೆಮಿನಾರ್ ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶವನ್ನು ಹೇಗೆ ಉಪಯೋಗಿಸುತ್ತಾರೆ ಎಂಬುದರ ಮೇಲೆ ಬಾಹ್ಯಾಕಾಶ ಸುಸ್ಥಿರತೆ ಅವಲಂಬಿತವಾಗಿದೆ. ಅದರಲ್ಲೂ ಭೂಮಿಯ ಸುತ್ತ ಇರುವ ಕಕ್ಷೆಯ ಪ್ರದೇಶವನ್ನು ಮನುಷ್ಯರು ಹೇಗೆ ಬಳಸುತ್ತಾರೆ ಎಂಬುದು ಮುಖ್ಯ ಎಂದು ಹೇಳಿದರು.
ಇಸ್ರೋ ವಿಜ್ಞಾನಿ ಡಾ.ರಾಘವೇಂದ್ರ ಕುಲ್ಕರ್ಣಿ, ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್. ಸಣ್ಣಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ. ಶಿವಕುಮಾರ ಮಾತನಾಡಿ, ಇಸ್ರೋ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮಹತ್ವದ ಕೊಡುಗೆ ನೀಡಿರುವ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿದೆ. ಮುಂಬ ರುವ ವರ್ಷಗಳಲ್ಲಿ ಪ್ರಮುಖ ಪ್ರಗತಿಯನ್ನು ಮುಂದುವರೆಸಲು ಇಸ್ರೋ ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದರು.
ಡಾ. ಎಂ. ಇ. ಶಿವಕುಮಾರ ಹೊನ್ನಾಳಿ ಸ್ವಾಗತಿಸಿದರು. ಡಾ.ಬಿ. ಮಹೇಶ್ವರಪ್ಪ ವಂದಿಸಿದರು. ಪ್ರೊ. ಭಾವನಾ ಎಸ್. ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.