ಸ್ವಾತಂತ್ರ್ಯ ಚಳವಳಿಯಲ್ಲಿ ರಂಗಭೂಮಿ ಕಲಾವಿದರ ಕೊಡುಗೆ ಅನನ್ಯ

ಸ್ವಾತಂತ್ರ್ಯ ಚಳವಳಿಯಲ್ಲಿ ರಂಗಭೂಮಿ ಕಲಾವಿದರ ಕೊಡುಗೆ ಅನನ್ಯ

 ಆವರಗೊಳ್ಳದ  ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಶ್ಲ್ಯಾಘನೆ

ದಾವಣಗೆರೆ, ಅ. 4 – ಕಲೆ ಈ ನಾಡಿನ ಸಾಂಸ್ಕೃತಿಕ ಸಂಪತ್ತು. ಟಿ.ವಿ. ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ರಂಗಭೂಮಿ ಕಲೆ ನಶಿಸುತ್ತಿದ್ದು, ಕಲೆಯನ್ನೇ ನಂಬಿದ ಕಲಾವಿದರ ಬದುಕು ಶೋಚನೀಯವಾಗಿದೆ. ಆದ್ದರಿಂದ ಕಲಾಭಿಮಾನಿಗಳು, ಸಂಘ – ಸಂಸ್ಥೆಗಳು ನಾಟಕ ಪ್ರದರ್ಶನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದರ ಮೂಲಕ, ಪಾರಂಪರಿಕ ರಂಗಕಲೆಯನ್ನು ಉಳಿಸಿ- ಬೆಳೆಸಲು ಮುಂದಾಗಬೇಕೆಂದು ಆವರಗೊಳ್ಳ ಪುರವರ್ಗ ಹಿರೇ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶಯ ನುಡಿಗಳನ್ನಾಡಿದರು.

ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ದುರ್ಗಾಂಬಿಕಾ ನಾಟಕ ಸಂಘದ 47ನೇ ವರ್ಷದ ವಾರ್ಷಿ ಕೋತ್ಸವ ಹಾಗೂ `ಕಂಬನಿ’ ನಾಟಕ ಪ್ರದ ರ್ಶನದ ಉದ್ಘಾಟನಾ ಸಮಾರಂಭದ  ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ಕಲೆ, ರಂಜನೆಯೊಂದಿಗೆ ಮೌಲ್ಯಯುತ ಸಂದೇಶವನ್ನು ನೀಡಿ, ಸಮಾಜ ಸುಧಾರಣೆಗೆ ಹಾಗೂ ಜನರ ಮನ ಪರಿವರ್ತನೆಗೆ ಪ್ರೇರಣೆಯಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲೂ ರಂಗಭೂಮಿ ಕಲಾವಿದರ ಕೊಡುಗೆ ಅನನ್ಯವಾಗಿದೆ.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ, ನಾಟಕಗಳು ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ನೀತಿ ಬೋಧನೆಯನ್ನು ಹೇಳುತ್ತಾ, ಇತಿಹಾಸಕಾರರ ಸಾಧನೆಗಳನ್ನು ಬಿಂಬಿಸುತ್ತ ಜನಮನ ಸೆಳೆಯುತ್ತಿವೆ ಎಂದರು. 

ಮರಾಠ ಸಮಾಜದ ಅಧ್ಯಕ್ಷ ಡಿ. ಮಾಲತೇಶರಾವ್ ಜಾಧವ್, ಶ್ರೀ ಅಂಬಾಭವಾನಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಗೋಪಾಲರಾವ್ ಮಾನೆ, ಕಲಾವಿದರ ಸಂಘದ ಗೌರವ ಅಧ್ಯಕ್ಷ ತಿಪ್ಪೇಶರಾವ್ ಚವಾಣ್, ಪ್ರಭಾಕರ್ ಸಾಳಂಕಿ, ಹಿರಿಯ ಕಲಾವಿದ ಕಾಳೆ ನಾಗೇಶ್ ರಾವ್, ಶ್ರೀ ದುರ್ಗಾಂಬಿಕಾ ನಾಟಕ ಸಂಘದ ಅಧ್ಯಕ್ಷ ಜಿ . ಹನುಮಂತರಾವ್ ಪವಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಹಿರಿಯ ಪತ್ರಕರ್ತ, ಕಲಾವಿದ ಬಸವರಾಜ ಐರಣಿ ಅವರು ಸಂಘದ ಬೆಳವಣಿ ಗೆಯ ಕುರಿತು ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಸಂಘದ ವತಿಯಿಂದ ಹಿರಿಯ ರಂಗ ಕಲಾವಿದ ಕಾಳೆ ನಾಗೇಶ್‌ರಾವ್‌ ಅವ ರನ್ನು ಸನ್ಮಾನಿಸಲಾಯಿತು. ನಾಟಕದ ಎಲ್ಲಾ ಕಲಾವಿದರಿಗೂ ಹಾಗೂ ತಂತ್ರಜ್ಞರಿಗೂ `ಅಭಿ ನಂದನಾ ಪತ್ರ’ದೊಂದಿಗೆ ಸತ್ಕರಿಸಲಾಯಿತು. 

ಸಮಾರಂಭದ ನಂತರ ಬೇಲೂರು ಕೃಷ್ಣಮೂರ್ತಿ ವಿರಚಿತ `ಕಂಬನಿ’ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಕಲಾವಿದರಾದ ಪಿ. ಮಲ್ಲಿಕಾರ್ಜುನ ಐರಣಿ, ಕಂಚಿಕೆರೆ ಕೊಟ್ರೇಶ್, ಕಾರ್ಯಕ್ರಮ ನಿರ್ವಹಿಸಿದರು.

error: Content is protected !!