ರಾಣೇಬೆನ್ನೂರು, ಅ.3- ಚಾತುರ್ಮಾಸದ ಪುಣ್ಯ ದಿನಗಳ ಈ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಜೈನ ಮುನಿ ಆಚಾರ್ಯ ಅಭಯಶೇಖರ ಸುರೀಶ್ವರಜೀ ಅವರ ಜನ್ಮ ದಿನವನ್ನು ಇಲ್ಲಿನ ಜೈನ ಶ್ವೇತಾಂಬರ ಸಂಘದವರು ಜೈನ್ ಧರ್ಮಶಾಲೆಯಲ್ಲಿ ಆಚರಿಸಿದರು.
ಉಪವಾಸ ವ್ರತಗಳ ಆಚರಣೆಯಿಂದ ಮನಶ್ಯಾಂತಿಯೊಂದಿಗೆ ಉತ್ತಮ ಆರೋಗ್ಯಶಾಲಿಗಳಾಗಿ ಬದುಕು ನಡೆಸಬಹುದು ಎಂದು ಹೇಳಿದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವಿಜಯದೇವ ಸುರೀಶ್ವರಜೀ ಮುನಿಗಳು, ಮುಂದೆ 5 ದಿನ ನಡೆಯುವ ಲಕ್ಷ್ಮಿ, ಸರಸ್ವತಿ ವ್ರತಗಳ ಆಚರಣೆಯಲ್ಲಿ ಸಮಾಜದ ಎಲ್ಲ ಬಂಧುಗಳು ಭಾಗವಹಿಸಿ, ಒತ್ತಡದ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆದುಕೊಳ್ಳಬೇಕು ಎಂದರು. ಮೇರು ಪದ್ಮರಾಜ ಮುನಿಗಳು ಜೊತೆಗಿದ್ದರು.
ಮುನಿಗಳ ಹುಟ್ಟುಹಬ್ಬ ಕಾರ್ಯಕ್ರಮಕ್ಕಾಗಿ ತಯಾರಿಸಿದ ಅಂಬಲ್ (ಉಪ್ಪು, ಹುಳಿ, ಖಾರ ರಹಿತ ಸಪ್ಪೆ) ಅಡುಗೆಯ ಊಟದಲ್ಲಿ ಇಬ್ಬರು ಇತರೆ ಸಮಾಜದ ಮಹಿಳೆಯರು, ಜೈನ್ ಸಮಾಜದ ಮಹಿಳೆಯರು, ಪುರುಷರು ಪಾಲ್ಗೊಂಡಿದ್ದರು. ಸಮಾಜದ ಅಧ್ಯಕ್ಷ ಪ್ರಕಾಶ ಜೈನ್, ಸುರೇಶ ಜೈನ್, ಕಿಶೋರ ಗಾಂಧಿ, ಮಹೇಶ ಜೈನ್, ರಾಜೇಶ ಜೈನ್, ಚಂದನ ಜೈನ್ ಮತ್ತಿತರರಿದ್ದರು.