ಶಾಲಾ ಶಿಕ್ಷಣವು ಜೀವನ ಪರೀಕ್ಷೆಗೂ ಬೇಕು

ಶಾಲಾ ಶಿಕ್ಷಣವು ಜೀವನ ಪರೀಕ್ಷೆಗೂ ಬೇಕು

ಹಿಮಾಲಯನ್ ಅಡ್ವೆಂಚರ್‌ನಿಂದ ಶಿಕ್ಷಕರ ಸನ್ಮಾನದಲ್ಲಿ ಹೆಚ್.ಬಿ. ಮಂಜುನಾಥ್

ದಾವಣಗೆರೆ, ಸೆ.26- ಶಾಲಾ ಶಿಕ್ಷಣವನ್ನು ಕೇವಲ ವಾರ್ಷಿಕ  ಪರೀಕ್ಷೆಗಷ್ಟೇ ಬಳಸದೆ ಜೀವನ ಪರೀಕ್ಷೆಯಲ್ಲೂ ಬಳಸಿದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.

ನಗರದ ಸಂತಪೌಲರ ಪದವಿ ಪೂರ್ವ ಕಾಲೇಜಿನಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ನೆರವೇರಿದ ಶಿಕ್ಷಕರ ದಿನಾಚರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

ಬುದ್ಧಿಮತ್ತೆಯಲ್ಲಿ ಭಾರತದವರು ಜಗತ್ತಿನಲ್ಲೇ ಮುಂದೆಂಬುದು ಅನಾದಿ ಕಾಲದಿಂದಲೂ ತಿಳಿದುಬಂದ್ದದ್ದು, ಈಚಿನ ಚಂದ್ರಯಾನದ ಯಶಸ್ಸು ಇದನ್ನು ಮತ್ತಷ್ಟು ಪುಷ್ಟಿಗೊಳಿಸಿದೆ. ಶೀಘ್ರದಲ್ಲೇ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಪ್ರಕಟಗೊಳ್ಳಲಿರುವ ಭಾರತದ ಯುವಶಕ್ತಿಯು ವಿಶ್ವವನ್ನಾಳುವ ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ಪೂರಕವಾದ ಶಿಕ್ಷಣವನ್ನು ಸಹ ಪಠ್ಯೇತರವಾಗಿ ಶಾಲಾ ಕಾಲೇಜುಗಳು ನೀಡಬೇಕಾದ ಅವಶ್ಯಕತೆ ಇದೆ. 

ಶಿಕ್ಷಕರು ಈ ನಿಟ್ಟಿನಲ್ಲೂ ಕಾರ್ಯನಿರ್ವಹಿಸಬಹುದಾಗಿದೆ ಎಂದ  ಅವರು, ವಿದ್ಯಾರ್ಥಿಗಳು ಸಹ ಶಾಲಾ ಪರೀಕ್ಷೆಯ ಅಂಕ ಗಳಿಕೆಗೆ  ಕೊಡುವಷ್ಟೇ ಪ್ರಾಶಸ್ತ್ಯವನ್ನು ಜೀವನ ಪರೀಕ್ಷೆಯ ಯಶಸ್ಸಿಗೂ ಕೊಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ರಿಸರ್ವ್  ಪೊಲೀಸ್ ಇನ್‌ಸ್ಪೆಕ್ಟರ್ ಹೆಚ್.ವಿ. ಸೋಮಶೇಖರ್ ಮುಗ್ಧ ಮನದಲ್ಲಿ ಅಕ್ಷರಗಳನ್ನು ಬಿತ್ತಿ ಜ್ಞಾನದ ಬೆಳೆ ಬೆಳೆದು ಸುಂದರ ನಾಡ ನಿರ್ಮಾಣಕ್ಕೆ ಕಾರಣರಾಗು ವವರೇ ಶಿಕ್ಷಕರು, ನಮ್ಮ ಚಂದ್ರಯಾನದ ಯಶಸ್ಸಿಗೆ  ಕಾರಣರಾದ ವಿಜ್ಞಾನಿಗಳ ಸಾಧನೆಯಲ್ಲಿ ಅವರ ಶಿಕ್ಷಕರುಗಳ ಪಾತ್ರವೂ ಮಹತ್ತರವಾಗಿದೆ ಎಂದರು. 

ಮುಖ್ಯ ಅತಿಥಿಯಾಗಿದ್ದ ಸಂತಪೌಲರ  ಶೈಕ್ಷಣಿಕ ಸಂಸ್ಥೆಯ ಸ್ಥಳೀಯ  ವ್ಯವಸ್ಥಾಪಕಿಯವರಾದ ಸಿಸ್ಟರ್ ಮಾರ್ಜರಿ ಮಾತನಾಡಿ, ಜ್ಞಾನ ದಾನ ಮಾಡುವ ಶಿಕ್ಷಕರಲ್ಲಿ ತಾಳ್ಮೆಯೂ ಬಹಳವಾಗಿ ಬೇಕು. ರೂಪ, ಅಂತಸ್ತು, ಅಧಿಕಾರಗಳಿಂದ ಆಚೆಯ ಜ್ಞಾನಕ್ಕೆ ಬೆಲೆ ಕೊಡಬೇಕು ಎಂದರು. 

ಪ್ರಾಚಾರ್ಯ ಕೆ.ಟಿ. ಮೇಘನಾಥ್   ಮಾತನಾಡಿ, ಎಲ್ಲಾ ಸದ್ವಿದ್ಯೆಗಳಲ್ಲಿ  ಪಾರಂಗತರಾದವರನ್ನೇ ಹಿಂದಿನ ಗುರುಕುಲಗಳಲ್ಲಿ ಶಿಕ್ಷಕರೆಂದು ಗೌರವಿಸಲಾಗುತ್ತಿತ್ತು ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷ ಹಾಗೂ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎನ್.ಕೆ.  ಕೊಟ್ರೇಶ್ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಜೀವ ರಕ್ಷಣೆಯ ಪ್ರಯೋಜನಕ್ಕೆ ಬರುವ ಸಾಹಸ ಕ್ರೀಡೆಗಳ ಶಿಕ್ಷಣವೂ ಅವಶ್ಯ ಎಂದರು. 

ಪತ್ರಕರ್ತ ಚನ್ನಬಸವ ಶೀಲವಂತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಆರ್. ವಿಶ್ವನಾಥ, ನೂರ್ ಜಹಾನ್, ಡೆಬೋರಾ ಪಿಯರ್ಸನ್, ರಮೇಶ್ ಎಲಿಗಾರ್, ಶ್ವೇತಾ ಹೆಚ್.ಎನ್., ಎಂ. ಮೇಘನಾ, ಹೆಚ್.ಎಂ. ಸಿಂಧು, ಪಿ.ವಿ. ರೇಗಿನಾ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವಿಶೇಷ ಆಹ್ವಾನಿತರಾಗಿ ಅಶೋಕ್ ಭಟ್,  ದೀಪು, ನಾಗರಾಜ್, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ವಿಶ್ವನಾಥ್ ಸ್ವಾಗತಿಸಿದರು. ಸಿಂಧು ವಂದಿಸಿದರು.

error: Content is protected !!