ದಾವಣಗೆರೆ, ಸೆ. 7 – ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹರಿಹರ ತಾಲ್ಲೂಕಿನ ಗಂಗನರಸಿ ಹಾಗೂ ದಾವಣಗೆರೆ ತಾಲ್ಲೂಕಿನ ಹಳೆಬಾತಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ್ ಬಿ. ಓ. ರವರು ಮಾತನಾಡಿ, ಯಾಂತ್ರೀಕೃತ ಭತ್ತದ ಬೆಳೆಯಲ್ಲಿ ಸಮಗ್ರ ಪೋಷಕಾಂ ಶಗಳ ನಿರ್ವಹಣೆ ಹಾಗೂ ವಾತಾವರಣದ ವೈಫಲ್ಯದಿಂದಾಗಿ ರೋಗ ಮತ್ತು ಕೀಟಗಳು ಹೆಚ್ಚಾಗಬಹುದು ಎಂದರು.
ಎಕರೆಗೆ ನಾಲ್ಕರಿಂದ ಐದರಂತೆ ಮೋಹಕ ಬಲೆಗಳನ್ನು ಭತ್ತದ ಬೆಳೆಯಲ್ಲಿ ನಾಟಿ ಮಾಡಿ 25 ದಿವಸಗಳ ನಂತರ ಹಳದಿ ಕಾಂಡ ಕೊರಕ ನಿರ್ವಹಣೆಗಾಗಿ ಅಳವಡಿಸಬೇಕು ಎಂದರು. ಮೋಹಕ ಬಲೆ ಹಾಕುವುದರಿಂದ ಗಂಡು ಚಿಟ್ಟೆಗಳು ಬಲೆಗಳಲ್ಲಿ ಬಿದ್ದು ಸಂತಾನೋತ್ಪತ್ತಿ ಕಡಿಮೆಯಾಗುವುದರಿಂದ ಭತ್ತದಲ್ಲಿ ಬಿಳಿ ತೆನೆಯಾಗುವುದನ್ನು ನಿಯಂತ್ರಿಸಬಹುದು ಎಂದು ಕೇಂದ್ರದ ಕೀಟ ಮತ್ತು ರೋಗ ತಜ್ಞ ಡಾ. ಟಿ. ಜಿ. ಅವಿನಾಶ್ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಹರಿಹರದ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ನಾರಾಯಣಗೌಡ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.