ದಾವಣಗೆರೆ, ಆ. 31- ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಸಂಪೂರ್ಣ ಹಾಳಾಗಿರುವ ಪ್ರದೇಶಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಮಾಯಕೊಂಡ ಸೇರಿದಂತೆ, ಇನ್ನಿತರೆ ಗ್ರಾಮಗಳಿಗೆ ಉಪತಹಶೀಲ್ದಾರ್ ಹಾಲೇ ಶಪ್ಪ, ಕೃಷಿ ಅಧಿಕಾರಿ ತೇಜುವರ್ಧನ್ ಅವರೊಂದಿಗೆ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಶಾಸಕರು, ಮುಂಗಾರು ಆರಂಭದ ಲ್ಲಿಯೇ ಮಳೆ ಅಭಾವದಿಂದ ರೈತರನ್ನು ನಿದ್ದೆಗೆಡಿಸಿತ್ತು. ಬಳಿಕ ಬಂದ ಮಳೆ ರೈತರಲ್ಲಿ ಮಂದಹಾಸ ಬೀರಿಸಿ, ಬಿತ್ತನೆ ಮಾಡಲು ಕಾರಣವಾಗಿತ್ತು. ಆದರೆ ಬಿತ್ತನೆ ಮಾಡಿ ಫಸಲು ಬೆಳೆಯುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿದ್ದು, ರೈತರನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾ ರ್ಜುನ್ ಅವರೊಂದಿಗೆ ಚರ್ಚಿಸಿ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಮಳೆ ಆಶ್ರಿತ ಪ್ರದೇಶವನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಹಾಲೇಶಪ್ಪ, ಕೃಷಿ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರಾದ ಬಿ.ಟಿ.ಹನುಮಂತಪ್ಪ, ರುದ್ರೇಶ್, ಗೋಪಾಲ್, ಜಗದೀಶ್, ಮಂಜು ಸೇರಿದಂತೆ ರೈತರು ಹಾಜರಿದ್ದರು.