ಬಸವಾದಿ ಶರಣರ ವಚನಗಳ ಪ್ರಸಾರದಲ್ಲಿ ಸುತ್ತೂರು ಮಠದ ಶ್ರೀಗಳ ಸೇವೆ ಅನನ್ಯ

ಬಸವಾದಿ ಶರಣರ ವಚನಗಳ ಪ್ರಸಾರದಲ್ಲಿ  ಸುತ್ತೂರು ಮಠದ ಶ್ರೀಗಳ ಸೇವೆ ಅನನ್ಯ

ಜಗಳೂರಿನ ಕಾರ್ಯಕ್ರಮದಲ್ಲಿ ಬಸವ ಭಾರತಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಪ್ರಭಾಕರ್ ಲಕ್ಕೋಳ್

ಜಗಳೂರು, ಆ.30- ಧರ್ಮ ಸಮನ್ವಯ, ಕಾಯಕ, ದಾಸೋಹ ಸೇವೆ, ಶಿಕ್ಷಣ ಪ್ರಸಾರ ಮೂರು ಮಹತ್ತುಗಳ ಮಹಾಮನೆಯಾಗುವುದರ ಜೊತೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಸ್ಥಾಪಿಸಿದ ಕೀರ್ತಿ ಮೈಸೂರಿನ ಸುತ್ತೂರು ಮಠದ  ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗೆ ಸಲ್ಲುತ್ತದೆ ಎಂದು ಬಸವ ಭಾರತಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಪ್ರಭಾಕರ್ ಲಕ್ಕೋಳ್ ತಿಳಿಸಿದರು.

ಪಟ್ಟಣದ ನಾಲಂದ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್‌, ಕದಳಿ ಮಹಿಳಾ ವೇದಿಕೆ ಹಾಗೂ ದಿವ್ಯ ಭಾರತಿ ಪ್ರೌಢಶಾಲೆ ಸಹಯೋಗದಲ್ಲಿ ನಡೆದ ಸಂಸ್ಥಾಪಕ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾಮೀಜಿಗಳ ಒಡನಾಟವನ್ನು ಮೆಲುಕು ಹಾಕಿದ ಅವರು ಬಸವಾದಿ ಶರಣರ ವಚನಗಳ ಪ್ರಸಾರ ಹಾಗೂ ಪ್ರಚಾರದಲ್ಲಿ ಸ್ವಾಮೀಜಿಗಳ ಸೇವೆ ಶ್ಲ್ಯಾಘನೀಯ ಎಂದು ಅವರು ಬಣ್ಣಿಸಿದರು.

`ಶರಣರ ಚಿಂತನೆ ಮತ್ತು ಜೆ.ಎಂ.ಇಮಾಂ’ ವಿಷಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಎನ್.ಟಿ. ಎರಿಸ್ವಾಮಿ, ಜೆ.ಎಂ. ಇಮಾಮ್‌ ಅವರು ಹುಟ್ಟಿನಿಂದ ಮುಸ್ಲಿಮರಾದರೂ ಬದುಕಿನಿಂದ ಭಾರತೀಯರು. ಅವರು ಜಾತಿಯ ಸೋಂಕಿಲ್ಲದ ವ್ಯಕ್ತಿ. ಧರ್ಮವನ್ನು ಮೀರಿದ ಹೃದಯವಂತ. ಭಕ್ತಿಯಲ್ಲಿ ಹನುಮಂತ, ಭಾವೈಕ್ಯತೆಯಲ್ಲಿ ಧೀಮಂತ. ಮೈಸೂರು ಸಂಸ್ಥಾನದ ಆಡಳಿತದಲ್ಲಿ ಮಂತ್ರಿಯಾಗಿ, ವಿಧಾನಸಭೆ, ಲೋಕಸಭೆಯ ಹಿರಿಯ ಸದಸ್ಯರಾಗಿ, ಹಂಗಾಮಿ ದಿವಾನರು, ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಅವರು ಸರಳ, ಸಜ್ಜನಿಕೆಯ,  ಸಚ್ಚಾರಿತ್ರ್ಯದ ವ್ಯಕ್ತಿಯಾಗಿ ಬದುಕಿದವರು. ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯ ಎಂದು ಹೇಳಿದರು. 

ನಾಲಂದ ಪದವಿ ಪೂರ್ವ ಕಾಲೇಜಿನ  ಪ್ರಾಂಶುಪಾಲ ಸಿ. ತಿಪ್ಪೇಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, `ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು’ ಎಂದು ಚಿಂತಿಸಿದವರು  ಶರಣರು. ಅವರ ಆದರ್ಶಗಳ ಬೆಳಕಿನಲ್ಲಿ ಬಾಳಿದವರ ಜೆ.ಎಂ. ಇಮಾಂ. ಅವರು ಆಕಾರದಲ್ಲಿ ಮಾತ್ರವಲ್ಲ, ವ್ಯಕ್ತಿತ್ವದಲ್ಲಿಯೂ ಎತ್ತರವಾದ ವ್ಯಕ್ತಿ ಎಂದು ವಿವರಿಸಿದರು.

ಮುಖ್ಯೋಪಾಧ್ಯಾಯರಾದ  ಜಿ.ಬಿ. ಬಾಲರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ದತ್ತಿದಾನಿಗಳಾದ ಜೆ.ಕೆ. ಹುಸೇನ್‌ಮಿಯಾ ಸಾಬ್, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಜೆ.ಆರ್. ಗೌರಮ್ಮ, ನಿವೃತ್ತ ಉಪನ್ಯಾಸಕರಾದ ಡಿ.ಸಿ. ಮಲ್ಲಿಕಾರ್ಜುನ, ಉಪನ್ಯಾಸಕ  ಬಿ.ಎನ್.ಎಂ ಸ್ವಾಮಿ
ಪತ್ರಕರ್ತರಾದ ಮರೇನಹಳ್ಳಿ ಬಾಬು, ಪರಿಷತ್‌ನ ಲೀಲಾವತಿ, ರೇವತಿ, ನಾಗರತ್ನ, ಮಂಜುನಾಥ್ ಮತ್ತಿತರರು ಇದ್ದರು.

error: Content is protected !!