ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ ಅಭಿಮತ
ದಾವಣಗೆರೆ, ಆ. 28- ಮಣ್ಣು, ನೀರು ಮತ್ತು ಮರ ಜೀವನದ ಆಧಾರ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ ಹೇಳಿದರು.
ಅತ್ತಿಗೆರೆ ಗ್ರಾಮದ ಶ್ರೀ ಅರವಿಂದ ವಿದ್ಯಾಸಂಸ್ಥೆಯ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಇಂದು ಏರ್ಪಾಡಾಗಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಾನವನ ಉಳಿವು ಮತ್ತು ಸಸ್ಯಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಅವರು, ಗಿಡ-ಮರಗಳನ್ನು ಬೆಳೆಸಿ, ಪರಿಸರ ರಕ್ಷಣೆಗೆ ಮುಂದಾಗಬೇಕಾಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮತ್ತೋರ್ವ ಮುಖ್ಯ ಅತಿಥಿ ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ.ಎನ್.ಕೆ.ಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆ ಕೌಶಲ್ಯಾಧಾರಿತ ಕಲಿಕೆಗೆ ಒತ್ತು ನೀಡುವ ಕುರಿತು ಮಾರ್ಗದರ್ಶನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಪ್ರೊ. ಹೆಚ್. ಚನ್ನಪ್ಪ ಪಲ್ಲಾಗಟ್ಟೆ ಮಾತನಾಡಿ, ತಮ್ಮ ಕಾಲೇಜು ಬಡ ಮಕ್ಕಳ, ವಿದ್ಯಾಭ್ಯಾಸ ವಂಚಿತ ಮಕ್ಕಳಿಗೆ ಅತ್ತಿಗೆರೆಯ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಚಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಸುಭಾಷ್ ಶಿಂಧೆ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಗುಡ್ಡಪ್ಪ ಓಲೇಕಾರ, ಕೆ.ಎನ್. ನಾಗವೇಣಿ, ಬಿ.ಎಸ್. ಸಲ್ಮಾ, ಸೌಮ್ಯ, ಆರ್. ಶಿವಶಂಕರ್, ಡಿ. ಭೋಜರಾಜಪ್ಪ ಉಪಸ್ಥಿತರಿದ್ದರು.