ದಾವಣಗೆರೆ, ಆ.22- ಇಸ್ರೋದ ಮಹತ್ವಾಂಕಾಂಕ್ಷಿ ಚಂದ್ರಯಾನ-3 ನೌಕೆಯಲ್ಲಿ ಕಳುಹಿಸಲಾಗಿರುವ ಲ್ಯಾಂಡರ್ ನಾಳೆ ದಿನಾಂಕ 23 ರ ಸಂಜೆ 6 ಗಂಟೆಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ. ಭಾರತೀಯ ವಿಜ್ಞಾನಿಗಳ ಮಹತ್ಸಾಧನೆಯ ಈ ಪ್ರಯೋಗ ಯಶಸ್ಸು ಕಾಣಲಿ, ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಲಿ ಎಂದು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮಕ್ಕಳು ಶುಭ ಹಾರೈಸಿದರು.
ಚಂದ್ರನ ದಕ್ಷಿಣ ಧ್ರುವಕ್ಕೆ ಭೂಮಿಯಿಂದ ಕಳಿಸಲ್ಪಟ್ಟ ಲ್ಯಾಂಡರ್ ತಳವೂರಿ ವಿಶ್ವದ ಬಾಹ್ಯಾಕಾಶ ಇತಿಹಾಸದಲ್ಲಿ ಭಾರತ ತನ್ನ ಹಿರಿಮೆ ಸಾಧಿಸಲಿ ಎಂದು ತ್ರಿವರ್ಣ ಧ್ವಜ ಹಿಡಿದು ಹರ್ಷೋದ್ಘಾರದಿಂದ ಸಂದೇಶ ರವಾನಿಸಿದರು. ಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು ಆಡಳಿತ ಮಂಡಳಿಯ ಡಾ. ಜಯಂತ್, ಹೇಮಂತ್ ಜೊತೆಗಿದ್ದರು.