ಬಯಕೆ ಒಳ್ಳೆಯದಾದರೆ ಬದುಕು ಉಜ್ವಲ

ಬಯಕೆ ಒಳ್ಳೆಯದಾದರೆ ಬದುಕು ಉಜ್ವಲ

ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು, ಮೇ 11 – ಸ್ವಾರ್ಥ ರಹಿತ ಬದುಕಿಗೆ ಬೆಲೆ ನೆಲೆಯಿದೆ. ಅಷ್ಟೇ ಅದ್ಭುತ ಶಕ್ತಿಯಿದೆ. ಮನುಷ್ಯನ ಬಯಕೆಗಳು ಒಳ್ಳೆಯದು ಇದ್ದರೆ ಬದುಕು ಉಜ್ವಲಗೊಳ್ಳುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಮನುಷ್ಯನ ಕೈ ಸ್ವಚ್ಛವಿದ್ದರೆ ವ್ಯವಹಾರಕ್ಕೆ ತೊಂದರೆಯಿಲ್ಲ. ನಾಲಿಗೆ ಶುದ್ಧವಿದ್ದರೆ ಸ್ನೇಹ ಸಂಬಂಧಗಳಿಗೆ ತೊಂದರೆಯಿಲ್ಲ. ಮನಸ್ಸು ಸ್ವಚ್ಛವಿದ್ದರೆ ಪ್ರೀತಿ ವಾತ್ಸಲ್ಯಕ್ಕೆ ತೊಂದರೆಯಿಲ್ಲ. ಈ ಮೂರು ಸ್ವಚ್ಛವಿದ್ದರೆ ಜೀವನದಲ್ಲಿ ಯಾವುದಕ್ಕೂ  ತೊಂದರೆಯಿಲ್ಲ. ಒಂದು ನಿಮಿಷದಲ್ಲಿ ಬದುಕು ಬದಲಾವಣೆ ಆಗುವುದಿಲ್ಲ. ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸುತ್ತದೆ.   ಮನುಷ್ಯನ ಬಯಕೆಗಳು ರಚನಾತ್ಮಕವಾಗಿರಬೇಕೇ ವಿನಃ ವಿನಾಶಕಾರಿಯಾ ಗಿರಬಾರದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಸ್ಪಷ್ಟವಾಗಿ ಬೋಧಿಸಿದ್ದಾರೆ. 

ವೀರಶೈವ ಧರ್ಮ ಮನುಷ್ಯ ಜೀವನದ ವಿಕಾಸಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಅರಿವು ಆದರ್ಶ ಮತ್ತು ಆಚರಣೆಗಳಿಂದ ಮನುಷ್ಯ ಜೀವನ ಉಜ್ವಲಗೊಳ್ಳುತ್ತದೆ ಎಂದರು.

ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಸುಮಾರು 15 ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷೆಯಿತ್ತು ಪಂಚಾಕ್ಷರ ಮಂತ್ರವನ್ನು ಬೋಧಿಸಿದರು. ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯರು, ಓಂಕಾರ ಬೆನ್ನೂರಿನ ಶ್ರೀ ಸಿದ್ಧರೇಣುಕ ಶಿವಾಚಾರ್ಯರು, ಸೇಡಂ ವಿರಕ್ತಮಠದ ಪಂಚಾಕ್ಷರ ಶ್ರೀಗಳು, ಮಳಖೇಡದ ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು, ಚಿಪ್ಪಲಕಟ್ಟಿ ಶ್ರೀ ಕಲ್ಲಯ್ಯಸ್ವಾಮಿ ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.

error: Content is protected !!