ಜಗಳೂರು, ಏ.28- ನಾಡಿದ್ದು ದಿನಾಂಕ 30 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಪಟ್ಟಣದ ಬಯಲು ರಂಗಮಂದಿರದ ಆವರಣದ ವೇದಿಕೆ ಕಾರ್ಯಕ್ರಮದಲ್ಲಿ ನನ್ನ ಪರ ಚುನಾವಣೆ ಪ್ರಚಾರ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಸಿದ ಪತ್ರಿಕಾಗೋಷ್ಠಿಯ ನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿ ಅಧಿಕಾರ ಪಡೆದು, ಎರಡನೇ ಬಾರಿಯೂ ಟಿಕೆಟ್ ಪಡೆದು ಸೋಲು ಅನುಭವಿಸಿ ಕಾಂಗ್ರೆಸ್ ತೊರೆದು ಸ್ವಾರ್ಥಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್.ಪಿ.ರಾಜೇಶ್ ಅವರ ಬಂಡಾಯದ ಬಿಸಿ ತಟ್ಟುವುದಿಲ್ಲ ಎಂದರು.
ಕ್ಷೇತ್ರದಲ್ಲಿ ಈಗಾಗಲೇ 7 ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರಚಾರ ನಡೆಸಲಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರೇ ನೇರ ಪ್ರತಿಸ್ಪರ್ಧಿ. ಪಕ್ಷೇತರ ಅಭ್ಯರ್ಥಿಯಲ್ಲ ಎಂದು ಹೇಳಿದರು.
ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಕಾಂಗ್ರೆಸ್ ಬಾವುಟ ಹಿಡಿದಿರಲಿಲ್ಲ. ಪಕ್ಷ ಸಂಘಟನೆ ಮಾಡಿರಲಿಲ್ಲ. ಆದರೂ ಎರಡು ಬಾರಿ ಟಿಕೇಟ್ ನೀಡಿತ್ತು. ಪಕ್ಷದಿಂದ ಮೋಸವಾಗಿದೆ ಎಂಬ ಹೇಳಿಕೆಗಳು ಸತ್ಯಕ್ಕೆ ದೂರವಾದದ್ದು. ಪಕ್ಷ ಸಿದ್ದಾಂತಕ್ಕೆ ಬದ್ದವಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ತಾಲ್ಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಮುಖಂಡರಾದ ಶ್ಯಾಮ್ ರೆಡ್ಡಿ, ವಾಸಣ್ಣ, ರಂಗನಾಥ್ ರೆಡ್ಡಿ, ವೆಂಕಟೇಶ್, ಪ್ರಕಾಶ್, ಅಹಮ್ಮದ್ ಅಲಿ ಉಪಸ್ಥಿತರಿದ್ದರು.