ದಾವಣಗೆರೆ, ಫೆ.11- ಹೂವಿನ ಹಡಗಲಿ ತಾಲ್ಲೂಕಿನ ಶ್ರೀ ಕ್ಷೇತ್ರ ಮೈಲಾರದಲ್ಲಿ ಇದೇ ದಿನಾಂಕ 14ರಂದು ನಡೆಯುವ ಕಾರಣಿಕೋತ್ಸವ ನಿಮಿತ್ತ ನಗರದ ಶಿಬಾರ ಮೈಲಾರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ 14ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಕೇಸರಿ ಟೀ-ಶರ್ಟ್ ಧರಿಸಿದ ಪಾದಯಾತ್ರಿಗಳು ಭಂಡಾರದ ಒಡೆಯ ಮೈಲಾರ ಲಿಂಗೇಶ್ವರನಿಗೆ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿ, ಏಳು ಕೋಟಿ.. ಏಳು ಕೋಟಿಗೋ.. ಚಾಂಗ್ ಮಲೋ.. ಎಂಬ ಘೋಷಣೆ ಮೂಲಕ ದೇವರನ್ನು ಸ್ಮರಿಸಿದರು.
ಗಾಂಧಿ ನಗರ ಪೊಲೀಸ್ ಠಾಣೆಯ ಪಿಎಸ್ಐ ರವಿನಾಯ್ಕ್ ಅವರು ಪಾದಯಾತ್ರೆಗೆ ಕೇಸರಿ ಭಾವುಟ ಪ್ರದರ್ಶಿಸುವ ಮೂಲಕ ಮಂಗಳವಾರ ಸಂಜೆ ವಿಧ್ಯುಕ್ತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪಾದಯಾತ್ರೆ ಯಲ್ಲಿ ತೊಡಗಿದ ಭಕ್ತರು ಒಗ್ಗಟ್ಟಿನಿಂದ ದೇವರ ಸನ್ನಿಧಿಗೆ ಹೋಗಬೇಕು. ಯಾತ್ರೆಯ ವೇಳೆ ರಸ್ತೆಯಲ್ಲಿ ಹೋಗುವಾಗ ಸಂಚಾರಿ ನಿಯಮ ಪಾಲಿಸುವ ಮೂಲಕ ಸುರಕ್ಷಿತವಾಗಿ ದೇವರ ದರ್ಶನ ಪಡೆಯಿರಿ ಎಂದು ಹೇಳಿದರು.
ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಮೈಲಾರಲಿಂಗಪ್ಪನ ಭಕ್ತರು ಭಕ್ತಿಯಲ್ಲಿ ಶ್ರೀಮಂತರು. ಎಲ್ಲಾ ಸಮುದಾಯದವರು ಸೇರಿ ಮೈಲಾರ ಜಾತ್ರೆಯನ್ನು ವಿಜೃಂಭಣೆಯಿಂದ ಮಾಡು ತ್ತಾರೆ. ಇಂತಹ ಧಾರ್ಮಿಕ ಸಂಪ್ರದಾಯಗಳು ನಡೆಯುವುದರಿಂದಲೇ ಹಿಂದೂ ಧರ್ಮ ಉಳಿಯಲಿದೆ ಎಂದು ಹೇಳಿದರು.
ಈ ವೇಳೆ ಮಾಲತೇಶ್ ಜಾಧವ್, ಗುಡ್ಡಪ್ಪ, ವೈ. ಮಲ್ಲೇಶ್, ವೀರಣ್ಣ, ಕೆ. ಮಲ್ಲೇಶ್, ಮಲ್ಲಿಕಾರ್ಜುನ್, ಗೋಪಾಲ್ ಸಾವಂತ್, ಮೈಲಾರಲಿಂಗೇಶ್ವರ ದೇವಸ್ಥಾನ ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಭಕ್ತರು ಇದ್ದರು.