ಏಳು ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಏಳು ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

ದಾವಣಗೆರೆಯಲ್ಲಿ ಬಿಜೆಪಿಯರ ದುರಾಡಳಿತ ಅಂತ್ಯ  

– ಸಚಿವ ಎಸ್ಸೆಸ್ಸೆಂ

ದಾವಣಗೆರೆ, ಆ. 13 – ನಗರ ಮತ್ತು ಜಿಲ್ಲೆಯಲ್ಲಿ ಬಿಜೆಪಿಗರ ದುರಾಡಳಿತ ಕಳೆದ ವರ್ಷದಿಂದ ಅಂತ್ಯಗೊಳ್ಳುತ್ತಾ ಬಂದಿದ್ದು, ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಿದೆ. ಅವರ ದುರಾಡಳಿತಕ್ಕೆ ಬ್ರೇಕ್ ಬಿದ್ದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಹೇಳಿದರು. 

ಮಹಾನಗರ ಪಾಲಿಕೆಯ 16, 38, 30, 41 ಮತ್ತು 31 ನೇ ವಾರ್ಡುಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯ ಜನತೆ, ಬಿಜೆಪಿಗರ ದುರಾಡಳಿತವನ್ನು ಸಹಿಸಲು ಸಾಕಾಗದೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದು, ಕಾಂಗ್ರೆಸ್ ಪಕ್ಷ ಈ ಹಿಂದೆ ನೀಡಿದ ಭರವಸೆಯಂತೆ ನಡೆದುಕೊಂಡು ಬರುತ್ತಿದೆ. ಇಂದೂ ಸಹ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ ಚಿಂತನೆ ನಡೆಸಿದ್ದು ಬಿಜೆಪಿಗರು ಮಾಡಿರುವ ಎಲ್ಲಾ ಅಕ್ರಮಗಳನ್ನು ಬಯಲು ಮಾಡುವುದಾಗಿ ತಿಳಿಸಿದರು.

ಕಳೆದ ಐದು ವರ್ಷದಲ್ಲಿ ಬಿಜೆಪಿಗರು ದಾವಣಗೆರೆ ಉತ್ತಮ ರಸ್ತೆಗಳನ್ನು ಹಾಳು ಮಾಡಿದ್ದು, ಇಂದು ಮತ್ತೆ ನಾವು ಅಧಿಕಾರಕ್ಕೆ ಬಂದ ನಂತರ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಪ್ರಮುಖ ರಸ್ತೆಗಳನ್ನು ಆಧುನಿಕರಣಕ್ಕೆ ಚಾಲನೆ ನೀಡಲಾಗಿದ್ದು, ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಬಿಜೆಪಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪಕ್ಷದಲ್ಲಿ ಬಿದ್ದಿರುವ ಹೆಗ್ಗಣಗಳನ್ನು ನೋಡದೆ ಬೇರೆ ಪಕ್ಷಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ಪಟ್ಟ ಭದ್ರ ಹಿತಾಸಕ್ತಿಗಳ ಯೋಗ್ಯತೆ ನನಗೆ ಗೊತ್ತಿದ್ದು ಅವರಿಗೆ ಸಮಯ ಬಂದಾಗ ಪಾಠ ಕಲಿಸುತ್ತೇನೆ ಎಂದು ಎಚ್ಚರಿಸಿದರು. 

ಇದೇ ವೇಳೆ ಆಯಾ ಭಾಗದ ನಾಗರಿಕರು ಮತ್ತು ಸಾರ್ವಜನಿಕರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಾಗ ಸಚಿವರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. 

ಅನುದಾನ ನೀಡಿದ ಸಚಿವರನ್ನು ಅಭಿನಂದಿಸಿ ಮಾತನಾಡಿದ ಪಾಲಿಕೆ ಸದಸ್ಯ ಎ.ನಾಗರಾಜ್, ಈ ಹಿಂದೆ ಇದ್ದ 25 ವರ್ಷಗಳ ಕಾಲ ಸಂಸದರು ಒಂದೇ ಒಂದು ದಿನ ಅಧಿವೇಶನದಲ್ಲಿ ಮಾತನಾಡಲಿಲ್ಲ. ಕಳೆದ ಒಂದು ತಿಂಗಳಲ್ಲಿ ನೂತನ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಅವರು  ದಾವಣಗೆರೆ ಕ್ಷೇತ್ರದ ಜಲ್ವಂತ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿ ಅದಷ್ಟು ಶೀಘ್ರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಇಂತಹ ಸಂಸದರನ್ನು ಪಡೆದ ನಾವು ಧನ್ಯರು ಎಂದರು.

ನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಮಾತನಾಡಿ, ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಈ ಭಾಗಕ್ಕೆ ಯಾವುದೇ ಅನುದಾನ ನೀಡದೆ ವಂಚಿಸಲಾಗಿತ್ತು. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಶಾಸಕರಾಗಿ, ಮಂತ್ರಿಗಳಾದ ನಂತರ 5 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ನೀಡಿದ್ದು, ಈ ಭಾಗದ ನಾಗರಿಕರು ಇದನ್ನು ತಿಳಿದು ಮತ ಚಲಾಯಿಸುವಾಗ ಅಭಿವೃದ್ಧಿಪರ ಬೆಂಬಲ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದರು.

ಮಹಾನಗರ ಪಾಲಿಕೆಯ ಮಹಾಪೌರರಾದ ವಿನಾಯಕ ಪೈಲ್ವಾನ್, ಆಯುಕ್ತರಾದ ಶ್ರೀಮತಿ ರೇಣುಕಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಜಗದೀಶ್, ಸದಸ್ಯರುಗಳಾದ  ಶ್ರೀಮತಿ ಜಯಮ್ಮ ಗೋಪಿ ನಾಯಕ್, ಪಾಮೇನಹಳ್ಳಿ ನಾಗರಾಜ್, ಕೆ.ಬಿ. ರುದ್ರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!