ಸ್ಥಾನಮಾನಗಳು ಸಮಾಜ ಸೇವೆಗೆ ದೊರೆತ ಅವಕಾಶ

ಸ್ಥಾನಮಾನಗಳು ಸಮಾಜ ಸೇವೆಗೆ ದೊರೆತ ಅವಕಾಶ

ಜಿಲ್ಲಾ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ಜೂ.28- ಸಾರ್ವಜನಿಕ ಜೀವನದಲ್ಲಿ ಸ್ಥಾನಮಾನಗಳು, ಸಮಾಜ ಸೇವೆಗೆ ದೊರೆತ ಅವಕಾಶ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ವಕೀಲ ಎನ್. ಜಯದೇವನಾಯ್ಕ ಅವರನ್ನು ಸನ್ಮಾನಿಸಲು ಜಿಲ್ಲಾ ವಕೀಲರ ಸಂಘದ ವತಿಯಿಂದ  ವಕೀಲರ ಭನದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ವ್ಯಕ್ತಿಗೆ ಅಧಿಕಾರ ದೊರೆತಾಗ ಹೆಚ್ಚು ವಿನಯವಂತರಾಗಬೇಕು ಜತೆಗೆ ಸಾರ್ವಜನಿಕರ ಸಮಸ್ಯೆ ಆಲಿಸಿ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆ ಹೊಂದಿದಾಗ ಮಾತ್ರ ಸ್ಥಾನಮಾನದ ಜತೆಗೆ ವ್ಯಕ್ತಿಯ ವ್ಯಕ್ತಿತ್ವ ಬೆಳಗಲು ಸಾಧ್ಯ ಎಂದರು.

ಸಾರ್ವಜನಿಕ ರಂಗದಲ್ಲಿ ನಿಸ್ವಾರ್ಥತೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಯುವ ಜನತೆಗೆ ಆದರ್ಶ ಹೇಳಿಕೊಡುವ, ಆದರ್ಶವಾದ ವ್ಯಕ್ತಿತ್ವದ ಅವಶ್ಯಕತೆ ಇದೆ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎನ್. ಜಯದೇವನಾಯ್ಕ ಅವರು, ರಾಜಕಾರಣದಲ್ಲಿ ಪ್ರಾಮಾಣಿಕತೆ, ಬದ್ದತೆ ಮತ್ತು ತತ್ವ ಸಿದ್ದಾಂತಗಳು ಕಣ್ಮರೆ ಆಗುತ್ತಿವೆ, ಜನತೆ ರಾಜಕೀಯದಿಂದ ವಿಮುಖರಾಗುತ್ತಿದ್ದಾರೆ ಎಂದ ಅವರು, ನನಗೆ ದೊರೆತ ಸ್ಥಾನಮಾನವನ್ನು ಶೋಷಿತರ ಅಭಿವೃದ್ಧಿ ಮತ್ತು ಸಾರ್ವಜನಿಕರ ಒಳಿತಿಗಾಗಿ ಮೀಸಲಿಡುತ್ತೇನೆ ಎಂದು ಹೇಳಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್‍ಕುಮಾರ್ ಮಾತನಾಡಿ, ಜೂನ್ 28, 1922ರಂದು ಅಂಬೇಡ್ಕರ್ ಅವರು ವಕೀಲರಾದ ದಿನವಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನದ ಎಲ್ಲಾ ಅಂಗಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.

ಸಂವಿಧಾನದ ಸಹಾಯದಿಂದ ಸಾಮಾನ್ಯರೂ ದೇಶದ ಉನ್ನತ ಹುದ್ದೆ ಅಲಂಕರಿಸುವ ಅವಕಾಶಗಳು ದೊರೆತಿವೆ.  ಜಯದೇವನಾಯ್ಕರು ಸಂವಿಧಾನದ ಆದರ್ಶಗಳಿಗೆ ಅನುಗು ಣವಾಗಿ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯೋ ನ್ಮುಖರಾಗುವ ಅಚಲವಾದ ನಂಬಿಕೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಹಾವೀರ ಮ. ಕರೆಣ್ಣವರ್, ಹಿರಿಯ ವಕೀಲ ಎಚ್.ಎನ್.ರಾಜಶೇಖರಪ್ಪ, ರಾಮಚಂದ್ರ ಕಲಾಲ್, ಡಿ.ಪಿ. ಬಸವರಾಜ್, ಎನ್.ಎಂ.ಆಂಜನೇಯ, ಮಲ್ಲೇಶ್ ನಾಯ್ಕ, ಟಿ.ಎಚ್.ಸಿದ್ದಪ್ಪ ಲೋಕಿಕೆರೆ, ತಿಪ್ಪೇಶ್ ರಾಥೋಡ್ ಮಾತನಾಡಿದರು.

ಈ ವೇಳೆ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್, ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪ ನಾಳು, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಂ. ನೀಲಕಂಠಯ್ಯ, ಟಿ.ಎಚ್. ಮಧುಸೂದನ್, ವಾಗೀಶ್ ಕಟ್ಟಿಗಿಹಳ್ಳಿ ಮಠ, ಎಂ. ಚೌಡಪ್ಪ, ಎಲ್. ನಾಗರಾಜ್ ಇತರರಿದ್ದರು.

error: Content is protected !!