ವೀರಶೈವ ಸಮಾಜ ರಕ್ಷಿಸಿದ ಕುಟುಂಬಕ್ಕೆ ಬೆಂಬಲಿಸಿ

ವೀರಶೈವ ಸಮಾಜ ರಕ್ಷಿಸಿದ ಕುಟುಂಬಕ್ಕೆ ಬೆಂಬಲಿಸಿ

ವೀರಶೈವ – ಲಿಂಗಾಯತ ಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ

ದಾವಣಗೆರೆ, ಏ.30- ವೀರಶೈವ ಸಮಾಜ ಒಡೆಯುವ ಸಂದರ್ಭದಲ್ಲಿ ಪಕ್ಷವನ್ನು ಲೆಕ್ಕಿಸದೇ ಸಮಾಜಕ್ಕೆ ಬೆನ್ನೆಲುಬಾಗಿ ನಿಂತ ಶಾಮನೂರು ಶಿವಶಂಕರಪ್ಪನವರ ಕುಟುಂಬಕ್ಕೆ ಚುನಾವಣೆಯಲ್ಲಿ ಬೆಂಬಲಿಸೋಣ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹೇಳಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಮಾಜಿಕ ಕಳಕಳಿ ಹೊಂದಿರುವ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಪಂಚಮಸಾಲಿ ಸಮಾಜ ಸಂಪೂರ್ಣ ಬೆಂಬಲ ನೀಡಿದರೆ ಈ ಸಮಾಜಕ್ಕೆ ಇನ್ನೂ ಹೆಚ್ಚಿನ ಬಲ ಬರಲಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಗರು ಮೋದಿ ಹೆಸರಿನಿಂದ ಮತ ಕೇಳುತ್ತಿದ್ದಾರೆ. ಸ್ಥಳೀಯವಾಗಿ ಕೆಲಸ ಮಾಡಲು ಮೋದಿ ಅವರು ಬರಲ್ಲ. ಆದ್ದರಿಂದ ನಮ್ಮ ಸಮಸ್ಯೆಗೆ ಸ್ಪಂದಿಸುವ ಪ್ರಭಾ ಅವರನ್ನು ಗೆಲ್ಲಿಸೋಣ ಎಂದರು. 

ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಈ ಬಾರಿ ನಾವು ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು. 

ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೋರ್ವರು ನಮ್ಮದೇ ಚುನಾವಣೆ ಎಂದು ಭಾವಿಸಿ ಪ್ರಭಾ ಅವರ ಗೆಲುವಿಗೆ ಶ್ರಮಿಸೋಣ ಎಂದರು.

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್‌ ಪಾಟೀಲ್‌ ಮಾತನಾಡಿ, ಪಂಚಮಸಾಲಿ ಸಮಾಜದ ಹಿತ ಕಾಪಾಡುವ ಶಾಮನೂರು ಕುಟುಂಬಕ್ಕೆ ನಾವು ಬೆಂಬಲ ನೀಡೋಣ ಎಂದು ಕರೆ ನೀಡಿದರು.

ಶೋಷಿತರ ಚಿಂತನೆ ಹಾಗೂ ಜನರ ಆರೋಗ್ಯ ಕಾಳಜಿ ಹೊಂದಿರುವ ಡಾ. ಪ್ರಭಾ ಅವರನ್ನು ಗೆಲ್ಲಿಸಿದರೇ ಸಂಸತ್‌ನಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಭಾಷಾ ಸಾಮರ್ಥ್ಯ ಅವರಲ್ಲಿದೆ ಎಂದರು.

ಮೋದಿ ಅವರ ಹೆಸರಿನಲ್ಲಿ ವೋಟು ಪಡೆದು ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಆದ್ದರಿಂದ  ಸಮಾಜದ ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್‌ ಮುಖಂಡ ಅರಸಿಕೆರೆ ಕೊಟ್ರೇಶ್‌, ನಾಗರಾಜ್‌, ಸಮಾಜದ ಮುಖಂಡರಾದ ಅಶೋಕ್‌ ಗೋಮನಾಳ್‌, ಭರಮಸಾಗರ ತಿಪ್ಪೇಸ್ವಾಮಿ, ನೀಲಗುಂದ ಸಿದ್ಲಿಂಗಪ್ಪ, ಜಗಳೂರಿನ ಶಿವಕುಮಾರ್‌, ಅಜ್ಜಣ್ಣ, ಐಗೋಳ್ ಚಿದಾನಂದಪ್ಪ ಸೇರಿದಂತೆ ಸಮಾಜದ ಮುಖಂಡರು ಇದ್ದರು.

error: Content is protected !!