ಸಂಸದರಾಗಿ ಮಾಡಿದ ಸಾಧನೆಗಳಿಂದ ಸುಲಲಿತ ಜಯ

ಸಂಸದರಾಗಿ ಮಾಡಿದ ಸಾಧನೆಗಳಿಂದ ಸುಲಲಿತ ಜಯ

ಸಿದ್ದೇಶ್ವರ ವಿಶ್ವಾಸ

ದಾವಣಗೆರೆ, ಏ.15 – ಕೇಂದ್ರದ ಮೋದಿ ಸರ್ಕಾರದ ಸಾಧನೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸಾಧನೆ ಹಾಗೂ ತಾವು ಸಂಸದರಾಗಿ ಮಾಡಿರುವ ಸಾಧನೆಗಳಿಂದಾಗಿ ಬಿಜೆಪಿಗೆ ಜಯ ಸಿಗಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ಗಾಯತ್ರಿ ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆರು ಬಾರಿ ಚುನಾವಣೆ ಗೆದ್ದಿದ್ದೇವೆ. ಈ ಬಾರಿಯ ಚುನಾವಣೆಯನ್ನೂ ಸರಳ ಹಾಗೂ ಸುಲಲಿತವಾಗಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರುವ ಏ.19ರಂದು ಇನ್ನೊಂದು ಸೆಟ್ ನಾಮಪತ್ರವನ್ನು ಮೆರವಣಿಗೆ ಮೂಲಕ ಸಲ್ಲಿಸಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಬೈರತಿ ಬಸವರಾಜ್, ಮುರುಗೇಶ್ ನಿರಾನಿ, ಜನಾರ್ದನ ರೆಡ್ಡಿ, ಶ್ರೀರಾಮುಲು, ಮಾಧುಸ್ವಾಮಿ ಹಾಗೂ ನಟಿ ಶ್ರುತಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಿದ್ದೇಶ್ವರ ಇದೇ ಸಂದರ್ಭದಲ್ಲಿ ಹೇಳಿದರು.

ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಜನರ ಸ್ಪಂದನೆ ಚೆನ್ನಾಗಿದೆ. ಗೆಲುವಿನಲ್ಲಿ ಯಾವುದೇ ಸಂದೇಹ ಇಲ್ಲ. ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ತೆರೆ ಮುಂದೆ ಬಂದಿದ್ದೇನೆ. ಜನರ ಬೆಂಬಲ ಇನ್ನೂ ಹೆಚ್ಚಾಗಿದೆ. ಇನ್ನೂ ಉತ್ತಮ ಕೆಲಸ ಮಾಡುವ ವಿಶ್ವಾಸ ಜನರಲ್ಲಿದೆ ಎಂದು ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಪುತ್ರಿ ಜಿ.ಎಸ್.ಅಶ್ವಿನಿ, ಜಿ.ಎಲ್.ರಾಜೀವ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಜೊತೆಯಲ್ಲಿ ತೆರಳಿ ಗಾಯತ್ರಿ ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಸಿದರು.

error: Content is protected !!