ಎಸ್.ಎ. ರವೀಂದ್ರನಾಥ್ಗೆ ಗಾಯತ್ರಿ ಸಿದ್ದೇಶ್ವರ ಗೆಲುವಿನ ನೇತೃತ್ವ
ದಾವಣಗೆರೆ, ಮಾ. 26 – ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಉಂಟಾಗಿದ್ದ ಭಿನ್ನಮತಕ್ಕೆ ಬಿಜೆಪಿ ವರಿಷ್ಠರು ಸುದೀರ್ಘ ಚರ್ಚೆ ನಡೆಸುವ ಮೂಲಕ ತೇಪೆ ಹಚ್ಚಿದ್ದು, ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ ಗೆಲ್ಲಿಸುವ ನೇತೃತ್ವವನ್ನು ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ವಹಿಸಲಾಗಿದೆ.
ನಗರದ ಹೊರ ವಲಯದ ಅಪೂರ್ವ ರೆಸಾರ್ಟ್ನಲ್ಲಿ ನಡೆದ ಸಭೆಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಪಕ್ಷದ ಸದಸ್ಯರೂ ಆಗಿರುವ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಂಡಾಯ ಮುಖಂಡರು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಬಣದ ಮುಖಂಡರ ಜೊತೆ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಅವರೂ ಉಪಸ್ಥಿತರಿದ್ದರು.
ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ಉಭಯ ಬಣದವರೂ ತಮ್ಮ ಮನಸ್ಸಿನಲ್ಲಿದ್ದ ಅಸಮಾಧಾನ ಹೊರ ಹಾಕಿದರು. ಕಳೆದ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಲು ಸಂಸದ ಸಿದ್ದೇಶ್ವರ ಅವರು ಶ್ರಮಿಸಲಿಲ್ಲ ಎಂದು ದೂರಿದರು.
ಬಂಡಾಯ ಮುಖಂಡರ ವರ್ತನೆಯ ಬಗ್ಗೆಯೂ ಸಿದ್ದೇಶ್ವರ ಬಣದವರು ತಮ್ಮ ಅಸ ಮಾಧಾನ ಹೊರ ಹಾಕಿದರು. ಒಂದು ಹಂತದಲ್ಲಿ ಉಭಯ ಬಣಗಳ ಕೆಲ ಮುಖಂಡರು ತೀವ್ರ ವಾಗ್ವಾದದ ಹಂತಕ್ಕೂ ಹೋದರು ಎಂದು ಮೂಲಗಳು ತಿಳಿಸಿವೆ.
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗಾಯತ್ರಿ ಸಿದ್ದೇಶ್ವರ ಅವರನ್ನು ಐತಿಹಾಸಿಕ ಬಹುಮತದಿಂದ ಗೆಲ್ಲಿಸಲು ಕಾರ್ಯಕರ್ತರು ಹಾಗೂ ಮುಖಂಡರು ಸಾಮೂಹಿಕ ನಿರ್ಧಾರ ತೆಗೆದುಕೊಂಡಿದ್ದಾರೆ.
– ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯ ಬಿಜೆಪಿ ಉಸ್ತುವಾರಿ
ಒಡಕಿನ ಮಾತುಗಳಿಗೆ ಅವಕಾಶವಿಲ್ಲ. ಆಲ್ ಈಸ್ ವೆಲ್. (ಎಲ್ಲವೂ ಸರಿ ಆಗಿದೆ) ಯಾವುದೇ ಷರತ್ತಿಲ್ಲದೇ, ಈಗಿನ ಅಭ್ಯರ್ಥಿ ಗೆಲ್ಲಿಸಲು ಸರ್ವಾಮನುಮತದಿಂದ ತೀರ್ಮಾನವಾಗಿದೆ.
– ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಮಾತನಾಡದೇ ಇದ್ದದ್ದೇ ತೊಂದರೆಯಾಗಿತ್ತು. ಈಗ ಮಾತನಾಡಿ ಸರಿ ಮಾಡಿಕೊಂಡಿದ್ದೇವೆ. ಸಣ್ಣ ಪುಟ್ಟ ದೋಷಗಳನ್ನು ಸರಿ ಮಾಡಿದ್ದೇವೆ. ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಏನು ಮಾಡಬೇಕೋ, ಅದನ್ನು ಮಾಡಿ ಗೆಲ್ಲಿಸುತ್ತೇವೆ.
– ಎಸ್.ಎ. ರವೀಂದ್ರನಾಥ್, ಮಾಜಿ ಸಚಿವ
ಪಕ್ಷದಲ್ಲಿ ಎಲ್ಲ ಚೆನ್ನಾಗಿದೆ, ಎಲ್ಲವೂ ಚೆನ್ನಾಗಿ ಮಾಡುತ್ತೇವೆ. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗೆಲ್ಲಿಸುತ್ತೇವೆ. ಬಿಜೆಪಿ ಗೆಲ್ಲಿಸುವ ಮೂಲಕ ಮತ್ತೆ ನರೇಂದ್ರ ಮೋದಿ ಪ್ರಧಾನಿ ಮಾಡಲು ದಾವಣಗೆರೆಯಿಂದ ಕಮಲ ಕಳಿಸುತ್ತೇವೆ.
– ಜಿ.ಎಂ. ಸಿದ್ದೇಶ್ವರ, ಸಂಸದ
ಇನ್ನೂ ತಣಿಯದ ಅಸಮಾಧಾನ?
ಸಭೆಯ ನಂತರ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ, ಗಾಯತ್ರಿ ಸಿದ್ದೇಶ್ವರ ಬೆಂಬಲಿಸುತ್ತೀರಾ? ಎಂದು ಪ್ರಶ್ನಿಸಿದಾಗ ನಾವು ಬಿಜೆಪಿ ಬೆಂಬಲಿಸುವವರು ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು. ಗಾಯತ್ರಿ ಸಿದ್ದೇಶ್ವರ ಬೆಂಬಲಿಸುವ ಬಗ್ಗೆ ರೇಣುಕಾಚಾರ್ಯ ಯಾವುದೇ ಪ್ರತಿಕ್ರಿಯೆ ನೀಡಲು ಬಯಸಲಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಬಿ.ಪಿ. ಹರೀಶ್, ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬ ಮಾತಿದೆ. ಒಂದೇ ಸಲಕ್ಕೆ ಎಲ್ಲವೂ ಆಗುವುದಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಮನಸ್ಸುಗಳು ಒಂದಾಗಲಿವೆ ಎಂದರು.
ಅಭ್ಯರ್ಥಿ ಯಾರೇ ಆಗಿದ್ದರೂ ಬಿಜೆಪಿ ಹಾಗೂ ನರೇಂದ್ರ ಮೋದಿ ಮುಖ್ಯ. ಏನೇ ವ್ಯತ್ಯಾಸ ಇದ್ದರೂ ಚುನಾವಣೆಯ ನಂತರ ಮಾತನಾಡುತ್ತೇವೆ ಎಂದು ತಿಳಿಸಿದರು.
ಗಾಯತ್ರಿ ಸಿದ್ದೇಶ್ವರ ಅವರನ್ನು ಅಭ್ಯರ್ಥಿ ಮಾಡಿರುವುದನ್ನು ಕೈ ಬಿಡಬೇಕು. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲಾಗುವುದು ಎಂದು ರವೀಂದ್ರನಾಥ್ ನೇತೃತ್ವದ ಬಣ ಎಚ್ಚರಿಕೆ ನೀಡಿತ್ತು. ಬಂಡಾಯ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಈಗ ತಪ್ಪಿದಂತಾಗಿದೆ. ಆದರೆ, ಪಕ್ಷದಲ್ಲಿ ಒಗ್ಗಟ್ಟು ಮೂಡುವ ಬಗ್ಗೆ ಕಾದು ನೋಡಬೇಕಿದೆ.
ಬಂಡಾಯ ಶಮನಕ್ಕೆ ಮುಖಂಡರ ದೌಡು
ದಾವಣಗೆರೆ ಲೋಕಸಭಾ ಕೇತ್ರದಲ್ಲಿ ಉಂಟಾಗಿರುವ ಬಂಡಾಯ ಶಮನಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದರು. ಆದರೆ, ಸಭೆಗೆ ಹಿರಿಯ ನಾಯಕ ಎಸ್.ಎ. ರವೀಂದ್ರನಾಥ್ ಬಣ ಗೈರಾಗಿತ್ತು.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೇ ನಗರಕ್ಕೆ ಆಗಮಿಸಿ ಬಂಡಾಯ ಶಮನ ಮಾಡಲು ಮುಂದಾದರು. ಈ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಪರಿಷತ್ ಸದಸ್ಯರಾದ ನವೀನ್, ರವಿಕುಮಾರ್, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಂಕರ ಮುನೇನಕೊಪ್ಪ ಮತ್ತಿತರರು ಆಗಮಿಸಿದ್ದರು.
ನಂತರ ಉಭಯರನ್ನೂ ಸಮಾಧಾನ ಪಡಿಸಿದ ವರಿಷ್ಠರು, ಅಭ್ಯರ್ಥಿಗಿಂತ ಪಕ್ಷ ಮುಖ್ಯ ಹಾಗೂ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನ ಮಂತ್ರಿ ಯಾಗುವುದು ಮುಖ್ಯ. ಈ ದಿಸೆಯಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಅಲ್ಲದೇ, ಅಭ್ಯರ್ಥಿಯಾಗಿರುವ ಸಂಸದ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸುವ ಹೊಣೆಯನ್ನು ಬಂಡಾಯ ಗುಂಪಿನ ಮುಂಚೂಣಿ ನಾಯಕರಾದ ಎಸ್.ಎ. ರವೀಂದ್ರನಾಥ್ ಅವರಿಗೇ ವಹಿಸಲಾಯಿತು. ರವೀಂದ್ರನಾಥ್ ಅವರು ಈ ಚುನಾವಣೆಯ ನೇತೃತ್ವ ವಹಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಲೋಕಸಭಾ ಚುನಾವಣಾ ಉಸ್ತುವಾರಿ ಭೈರತಿ ಬಸವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಬಸವರಾಜ ನಾಯ್ಕ, ಗುರುಸಿದ್ದನಗೌಡ, ಹೆಚ್.ಪಿ. ರಾಜೇಶ್, ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಜಿ ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಶಿವಕುಮಾರ್, ಮುಖಂಡರಾದ ಡಾ. ರವಿಕುಮಾರ್, ಯಶವಂತರಾವ್ ಜಾಧವ್ ಮತ್ತಿತರರು ಉಪಸ್ಥಿತರಿದ್ದರು.