ಶಾಲೆ-ಆಸ್ಪತ್ರೆ ವೈಭವೀಕರಣದಿಂದ ಅಭಿವೃದ್ಧಿ – ವಿಶ್ವ ಮಾನವ ದಿನಾಚರಣೆಯಲ್ಲಿ ಶಾಸಕ ಬಸವಂತಪ್ಪ

ಶಾಲೆ-ಆಸ್ಪತ್ರೆ ವೈಭವೀಕರಣದಿಂದ ಅಭಿವೃದ್ಧಿ – ವಿಶ್ವ ಮಾನವ ದಿನಾಚರಣೆಯಲ್ಲಿ ಶಾಸಕ ಬಸವಂತಪ್ಪ

ದಾವಣಗೆರೆ, ಡಿ. 29 – ಕನ್ನಡ ಸಾಹಿತ್ಯ ವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪುರವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿಶ್ವಮಾನವ ರಾಗಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್ ಬಸವಂತಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರು ವೈಚಾರಿಕವಾಗಿ ಯೋಚಿಸದೆ ಮೌಢ್ಯತೆ ಕಡೆಗೆ ವಾಲುತ್ತಿದ್ದಾರೆ. ನಮ್ಮ ದೇಶದಲ್ಲಿ ದೇವಸ್ಥಾನ, ಮಸೀದಿ, ಚರ್ಚ್‍ಗ ಳನ್ನು ವೈಭವೀಕರಿಸದೇ ಶಾಲಾ-ಕಾಲೇಜು ಹಾಗೂ ಆಸ್ಪತ್ರೆಗಳನ್ನು ವೈಭವೀಕರಿಸಿದಾಗ ಮಾತ್ರ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ. ಕುವೆಂಪುರವರನ್ನು ಕೇವಲ ದಿನಾಚರಣೆಗೆ ಮಾತ್ರ ಸೀಮಿತಗೊಳಿಸದೇ ಅವರ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಒಬ್ಬರು ಇನ್ನೊಬ್ಬರ ಮೇಲೆ ದ್ವೇಷ ಸಾಧಿಸುವುದರಿಂದ ವಿಶ್ವ ಮಾನವರಾಗಲು ಸಾಧ್ಯವಿಲ್ಲ. ಬದಲಾಗಿ ಜೀವನದಲ್ಲಿ ಮಾನವೀಯತೆ ಗುಣಗಳನ್ನು ಅಳವಡಿಸಿಕೊಂಡು ದೊಡ್ಡತನವನ್ನು ತೋರ್ಪಡಿಸಬೇಕಾಗಿದೆ. ಯಾವ ದೇಶ ಮಾನವೀಯತೆಯ ಗುಣಗಳನ್ನು ಅಳವಡಿಸಿಕೊಂಡಿದೆಯೋ ಆ ದೇಶ ಪ್ರಪಂಚದಲ್ಲಿ ಉನ್ನತ ಸ್ಥಾನವನ್ನೇರಲಿದೆ ಎಂದು ಹೇಳಿದರು.

ಕುವೆಂಪುರವರು ಮೌಢ್ಯತೆಗಳನ್ನು ನಿರ್ಮೂಲನೆ ಮಾಡಲು ಹಲವಾರು ವೈಚಾರಿಕ ಕಾದಂಬರಿ, ಕಾವ್ಯ ಹಾಗೂ ವಿಮರ್ಶೆಗಳನ್ನು ರಚಿಸಿದರೂ ಸಹ ಪೋಷಕರು ಮಕ್ಕಳನ್ನು ಮೌಢ್ಯತೆ ಕಡೆಗೆ ತಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮತನಾಡಿ ಕುವೆಂಪುರವರು ನಮ್ಮ ರಾಜ್ಯ ಹಾಗೂ ದೇಶ ಕಂಡ ಶ್ರೇಷ್ಠ ಕವಿ. ಕನ್ನಡ ಭಾಷೆ, ಕನ್ನಡ ನಾಡು ಹಾಗೂ ಕನ್ನಡಿಗರಿಗೆ ಸಾಹಿತ್ಯದ ಮೂಲಕ ಅದ್ಭುತ ಕೊಡುಗೆ ನೀಡಿದ್ದಾರೆ ಎಂದರು.

ಮೊಟ್ಟ ಮೊದಲನೇ ಜ್ಞಾನಪೀಠ ಪ್ರಶಸ್ತಿಯು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಸಂದಿರುವುದು ಕನ್ನಡ ಸಾಹಿತ್ಯದ ಹಿರಿಮೆಯಾಗಿದೆ. ಇವರು ರಚಿಸಿರುವಂತಹ ಕಾವ್ಯ, ಕೃತಿ, ನಾಟಕ, ವಿಮರ್ಶೆಗಳಲ್ಲಿ  ವಿಜ್ಞಾನ, ತತ್ವಜ್ಞಾನ, ಮನೋವಿಜ್ಞಾನ ಹಾಗೂ ಜೀವ ವಿಜ್ಞಾನವನ್ನು ಕಾಣಬಹುದು ಎಂದರು.

ಪಾಲಿಕೆಯ ಉಪ ಮಹಾಪೌರರಾದ ಯಶೋಧ ಹೆಗ್ಗಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಾಮದೇವಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಷಣ್ಮುಖಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕರಿಸಿದ್ದಪ್ಪ, ಹಿರಿಯ ಪತ್ರಕರ್ತ  ಬಿ.ಎನ್ ಮಲ್ಲೇಶ್, ಆವರಗೆರೆ ರುದ್ರಮುನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!