ಲಿಂ. ಶ್ರೀಗಳವರ 31ನೇ ಶ್ರದ್ಧಾಂಜಲಿಯ ಮೂರನೆಯ ದಿನದ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರುಗಳ ಶ್ಲ್ಯಾಘನೆ
ಸಿರಿಗೆರೆ, ಸೆ.22- ಭಾರತದ ಭೂಪಟವನ್ನು ಚಂದ್ರಲೋಕದವರೆಗೆ ವಿಸ್ತರಿಸಿ, ಭಾರತದ ಹಿರಿಮೆಯನ್ನು ಹೆಚ್ವಿಸಿದ ಕೀರ್ತಿ ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ. ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯ ಗುರುಶಾಂತೇಶ್ವರ ಭವನದ ಮುಂಭಾಗದ ವಿಶಾಲ ವೇದಿಕೆಯಲ್ಲಿ ಶುಕ್ರವಾರ ಜರುಗಿದ ಲಿಂ.ಶ್ರೀಗಳ 31ನೆಯ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಡೀ ಜಗತ್ತು ಚಂದ್ರಯಾನವನ್ನು ಕುತೂಹಲದಿಂದ ವೀಕ್ಷಿಸಿತು. ತಾಯಂದಿರು ಮಕ್ಕಳಿಗೆ ಹಾಲು ಕುಡಿಸುವಾಗ ಚಂದ್ರನನ್ನು ತೋರಿಸುತ್ತಿದ್ದರು. ಅದರಿಂದ ಪ್ರೇರಣೆ ಪಡೆದ ನಮ್ಮ ವಿಜ್ಞಾನಿಗಳು ಚಂದ್ರನಿಗೆ ಲಗ್ಗೆ ಹಾಕಿ ಚಂದ್ರಯಾನವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಶ್ಲ್ಯಾಘಿಸಿದರು.
ಭೂಮಿ ಮೇಲೆ ಬದುಕುವವರಿಗೆ ಪ್ರಜ್ಞೆ ಬೇಕಿದೆ. ಹೇಗೆ ಜೀವಿಸಬೇಕೆಂಬ ಪ್ರಜ್ಞೆ ಇರಬೇಕು. ಅಂತಹ ಪ್ರಜ್ಞೆ ಮೂಡಿಸುವುದೇ ಧರ್ಮ ಹಾಗೂ ಭಾರತೀಯ ಸಂಸ್ಕೃತಿ. ಲಿಂ.ಜಗದ್ಗುರುಗಳು ಅಂತಹ ಪ್ರಜ್ಞಾವಂತರನ್ನಾಗಿ ನಿಮ್ಮನ್ನು ಮಾಡಬೇಕೆಂದು ಸ್ವಾತಂತ್ರ್ಯ ಪೂರ್ವ ದಿಂದ ಅವರು ಮಾಡಿದ ಪ್ರಯತ್ನ, ಶಾಲೆಗಳು ಇಂದು ಬೃಹತ್ತಾಗಿ ಬೆಳೆದಿವೆ. ನಿಮ್ಮ ಮೇಲೆ ತುಂಬಾ ಆಶಾಭಾವನೆ ಇದೆ ಎಂದು ಹೇಳಿದರು.
ಚಂದ್ರಯಾನದ ಯಶಸ್ಸು ಕಾಪಿಟ್ಟುಕೊಳ್ಳಬೇಕಿದೆ: ವಿಜ್ಞಾನಿ ದಾರುಕೇಶ್
ಭಾರತೀಯರು ಸ್ವತಂತ್ರವಾಗಿ, ಸೃಜನ ಶೀಲರಾಗಿ ಯೋಚಿಸಬಲ್ಲರು ಎಂಬುದನ್ನು ಚಂದ್ರಯಾನ-3ರ ಯಶಸ್ಸು ನಿರೂಪಿಸಿದೆ ಎಂದು ಬೆಂಗಳೂರು ಇಸ್ರೋ ವಿಜ್ಞಾನಿ ಡಾ. ಬಿ.ಎಚ್.ಎಂ.ದಾರುಕೇಶ್ ಹೇಳಿದರು.
ಚಂದ್ರಯಾನ-3ರ ಯಶಸ್ಸನ್ನು ಮುಂದೆಯೂ ಕಾಪಿಟ್ಟುಕೊಳ್ಳಬೇಕಿದೆ. ಈ ಯಶಸ್ಸಿನ ಮೇಲೆ ಮುಂದಿನ ದಿನಗಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ಜಗತ್ತಿನ ಲೀಡರ್ ಆಗಬೇಕಿದೆ ಎಂದು ಹೇಳಿದರು.
ಆರಂಭದಲ್ಲಿ ಇಸ್ರೋ ಯೋಜನೆ ಯಾಗಿದ್ದ ಚಂದ್ರಯಾನ ನಂತರ ಇಡೀ ದೇಶದ ಹಾಗೂ ವಿಶ್ವದ ಯೋಜನೆಯಗಿ ರೂಪುಗೊಂಡಿತು. 130 ಕೋಟಿ ಜನರು ಭಾರತೀಯರು ಹೆಮ್ಮೆಯಿಂದ ತಲೆ ಎತ್ತಿ ನೋಡುವ ಸ್ಥಿತಿಯನ್ನು ಚಂದ್ರಯಾನ-3 ನಿರ್ಮಾಣ ಮಾಡಿದೆ ಎಂದರು.
ನಮ್ಮ ದೇಶ ವಿಜ್ಞಾನವನ್ನು ಸಂಭ್ರಮಿಸಿದ ರೀತಿ ಜಗತ್ತಿಗೆ ಮಾದರಿ. ನಮ್ಮ ಭಾರತೀಯರು ವಿಜ್ಞಾನವನ್ನು ಎಷ್ಟರ ಮಟ್ಟಿಗೆ ತನ್ನದಾಗಿಸಿಕೊಂಡರು ಎಂಬುದನ್ನು ಚಂದ್ರಯಾನ ತೋರಿಸಿಕೊಟ್ಟಿದೆ. ಯು ಟ್ಯೂಬ್ ಮೂಲಕ ಅತಿ ಹೆಚ್ಚು ಅಂದರೆ 80 ಲಕ್ಷ ಜನರು ನೇರವಾಗಿ ವೀಕ್ಷಿಸಿದ ಪ್ರಥಮ ಚಂದ್ರಯಾನದ್ದು.
ವೈಜ್ಞಾನಿಕ ಕ್ಷೇತ್ರದ ಒಂದು ಘಟನೆ ಜನರನ್ನು ಎಷ್ಟರ ಮಟ್ಟಿಗೆ ಆಕರ್ಷಿಸಬಲ್ಲದು. ಅಂತಹ ಆಕರ್ಷಣೆಗೆ ಜನರು ಎಷ್ಟರ ಮಟ್ಟಿಗೆ ತಯಾರಾಗಿದ್ದರು ಎಂಬುದು ಭಾರತದ ಮಟ್ಟಿಗೆ ವಿಶೇಷವಾದದ್ದು. ತಕ್ಷಶಿಲಾ, ನಳಂದ ಸಮಯದಲ್ಲಿ ಜಗತ್ತಿಗೆ ಜ್ಞಾನ ಹಂಚಿದ್ದ ಭಾರತ ನಂತರ ಕೈಕಾರಿಕಾ ಉದ್ಯಮ ಹಾಗೂ ಸೆಮಿ ಕಂಡಕ್ಟರ್ ತಂತ್ರಜ್ಞಾನ ವಂಚಿತವಾಗಿ ಇಂದು ಮತ್ತೆ ಯಶಸ್ಸು ಕಂಡಿದೆ ಎಂದು ಹೇಳಿದರು. ಅಮೇರಿಕಾದಲ್ಲಿ ನಾಸಾ ಸಂಸ್ಥೆಯಲ್ಲಿ ಅನೇಕ ಭಾರತೀಯ ವಿಜ್ಞಾನಿಗಳಿದ್ದಾರೆ. ಆದರೆ ಭಾರತೀಯ ಇಸ್ರೋದಲ್ಲಿ ಯಾವ ಒಬ್ಬ ಅಮೆರಿಕಾದವರೂ ಇಲ್ಲ. ಇದು ನಮ್ಮ ಸಾಧನೆ ಎಂದು ಹೇಳಿದರು.
ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ತಾಲ್ಲೂಕಿನ ಏತ ನೀರಾವರಿ ಯೋಜನೆ ಸಂಬಂಧಿಸಿದ ಗರ್ಭಗುಡಿ ಬ್ಯಾರೇಜ್ ಕಾಮಗಾರಿ ಪೂರ್ಣಗೊಳಿಸಲು ಸಿರಿಗೆರೆ ಶ್ರೀಗಳವರ ಮಾರ್ಗದರ್ಶನ ಅಗತ್ಯವಾಗಿದ್ದು, ಮುಂದಿನ ವರ್ಷಗಳಲ್ಲಿ ಹರಪನಹಳ್ಳಿ ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಆಚರಿಸಲು ಅವಕಾಶ ಮಾಡಿಕೊಡಿ ಎಂದರು.
ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಸ್ಪೋಕನ್ ಇಂಗ್ಲೀಷ್ ಮುಖ್ಯ. ಹಿರಿಯ ಶ್ರೀಗಳವರು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ ಮುನ್ನುಡಿಯಾಗಿದ್ದಾರೆ ಎಂದರು.
ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಮಾತನಾಡಿ,. ಶ್ರೀ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಮಾ ಜದ ಪರಿವರ್ತಕರಾಗಿ ಜೀವನದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಸಿರಿಗೆರೆ ಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಭವ್ಯ ಭಾರತದ ಮಾದರಿ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾದ ಜರ್ಮನಿಯ ಆನಿ ಫಿಟ್ಜರ್ ಕನ್ನಡದಲ್ಲಿಯೇ ಮಾತನಾಡಿ ಮೆಚ್ಚುಗೆ ಗಳಿಸಿದರು. ಕೊಪ್ಪಳ ವಿಶ್ವವಿದ್ಯಾನಿಲಯ ಕುಲಪತಿ ಡಾ. ಬಿ.ಕೆ.ರವಿ ಮಾತನಾಡಿದರು. ಕಲಾವಿದರಾದ ಆನಂದ ಎಸ್.ಪಾಟೀಲ್ ಅವರ ತಂಡ ವಚನಗೀತೆ ಹಾಡಿದರು. ಬರ್ಗಿ ಕುಮುಟಾದ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷ ಮಿತ್ರ ಮಂಡಳಿ ಯಕ್ಷಗಾನ ಹಾಗೂ ತರಳಬಾಳು ಕಲಾಸಂಘದ ತಂಡದವರು ಸೋಲಿಗರ ನೃತ್ಯ, ಕರಗ ಕೋಲಾಟ ನೃತ್ಯಪ್ರದರ್ಶನ ಪ್ರದರ್ಶಿಸಿದರು.
ಇಸ್ರೋ ವಿಜ್ಞಾನಿಗಳಾದ ರಾಮನಗೌಡ ವಿ ನಾಗನಗೌಡ, ಗೋವಿಂದರಾಜ್ ಶೆಟ್ಟಿ, ಹೇಮಲತಾ ಶ್ರೀ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್, ಹೆಚ್.ವಿ.ವಾಮದೇವಪ್ಪ ಉಪಸ್ಥಿತರಿದ್ದರು.