ಕೊಡಗನೂರು ಕೆರೆ ಏರಿ ಭದ್ರತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಕೊಡಗನೂರು ಕೆರೆ ಏರಿ ಭದ್ರತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ದಾವಣಗೆರೆ, ಮೇ 24- ತಾಲ್ಲೂಕಿನ ಕೊಡಗನೂರು ಕೆರೆ ಏರಿಯು ಕಳೆದ ವರ್ಷ ಭಾರೀ ಮಳೆಗೆ ಕುಸಿದು ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಏರಿಗೆ ಲಕ್ಷ ಮರಳಿನ ಚೀಲಗಳನ್ನು ಹಾಕುವ ಮೂಲಕ ಏರಿ ಭದ್ರ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. 

 ಈ ವರ್ಷ ಮುಂಗಾರು ಆರಂಭವಾಗುತ್ತಿದ್ದು, ಏರಿಯ ಭದ್ರತೆಯನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಇಂಜಿನಿಯರ್‍ಗಳ ತಂಡದೊಂದಿಗೆ ಬುಧವಾರ ಸ್ಥಳಕ್ಕೆ ಭೇಟಿ, ನೀಡಿ ಸ್ಥಳ ಪರಿಶೀಲನೆ ನಡೆಸಿದರು. 

 ಕೊಡಗನೂರು ಕೆರೆ ಎರಡು ಕಡೆಯ ಕೋಡಿಯನ್ನೂ ಪರಿಶೀಲನೆ ನಡೆಸಿದ ಅವರು, ಈ ಹಿಂದೆ ಬಸಿ ಹೋಗುತ್ತಿದ್ದು ದುರಸ್ತಿ ನಂತರ ಬಸಿ ನಿಂತಿರುವುದನ್ನು ಪರಿಶೀಲಿಸಿದರು. 

 ಕೆರೆ ಏರಿಯನ್ನು ಮರಳು ಮತ್ತು ಮಣ್ಣನ್ನು ಹಾಕುವ ಮೂಲಕ ಭದ್ರ ಮಾಡಿದ್ದು, ಏರಿಯನ್ನು ಹೊಸದಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೇ ಮಾರ್ಗದ ಮೂಲಕ ಚಿಕ್ಕಜಾಜೂರು, ಹೊಳಲ್ಕೆರೆ, ಹೊಸದುರ್ಗಕ್ಕೆ ಹೋಗಬೇಕಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ರಸ್ತೆಯನ್ನು ನಿರ್ಮಿಸಲು ಸಹ ಸ್ಥಳದಲ್ಲಿದ್ದ ಇಂಜಿನಿಯರ್‍ಗೆ ಸೂಚನೆ ನೀಡಿದರು.

 ಈ ವೇಳೆ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್, ಸಹಾಯಕ ಇಂಜಿನಿಯರ್ ರುದ್ರಮುನಿ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸ್ವಾಮಿ ಉಪಸ್ಥಿತರಿದ್ದರು.

error: Content is protected !!