ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಮತ್ತು ನಾಳೆ7ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವ ಜರುಗಲಿದ್ದು, ಅದಕ್ಕಾಗಿ ಗುರುಪೀಠ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.
ವಾಲ್ಮೀಕಿ ಗುರುಪೀಠ ಸ್ಥಾಪನೆಗೊಂಡು 27 ವರ್ಷ ಪೂರೈಸಿದ್ದು, ಮಠದ ಮೂಲಕ ಸಮಾಜ ಸಂಘಟನೆ ಮತ್ತು ಸಮಾಜಕ್ಕೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಹಾಗೂ ಸಮಾಜವನ್ನು ಜಾಗೃತಿಗೊಳಿಸುವುದಕ್ಕಾಗಿ ಶ್ರೀ ಡಾ.ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಪ್ರತಿವರ್ಷ ಫೆ.8 ಮತ್ತು 9 ರಂದು ವಾಲ್ಮೀಕಿ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದಾರೆ. ಬುಡಕಟ್ಟು ಜನರ ಈ ಜಾತ್ರೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿದೆ.
ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಆಸಕ್ತಿ ವಹಿಸಿ, ಈ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ಮೇಳವನ್ನು ಏರ್ಪಡಿಸಿರುವುದು ವಿಶೇಷವಾಗಿದೆ.
ಜಾತ್ರೆಯಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯ ಕ್ರಮ ಕುರಿತು ವಸ್ತು ಪ್ರದರ್ಶನವನ್ನು ಸಂಘಟಿಸಲಾಗಿದ್ದು, ಜೊತೆಗೆ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ.
ಇಂದಿನಿಂದ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವ
ದಾವಣಗೆರೆ, ಫೆ.7- ಹರಿಹರ ತಾಲ್ಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9ರಂದು ಶ್ರೀ ಮಹರ್ಷಿ ವಾಲ್ಮಿಕಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀಮಠದ 27ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 18ನೇ ವರ್ಷದ ಪುಣ್ಯಾರಾಧನೆ ಹಾಗೂ ಜಗದ್ಗುರು ಶ್ರೀ ಡಾ.ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನಾಳೆ ದಿನಾಂಕ 8ರ ಶನಿವಾರ ಬೆಳಿಗ್ಗೆ 7ಕ್ಕೆ ರಾಜನಹಳ್ಳಿ ಗ್ರಾಮದಿಂದ ಶ್ರೀ ಮಠದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಗುರುಪೀಠದ ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಶಾಸಕ ಬಿ.ಪಿ.ಹರೀಶ್, ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಧ್ಯಕ್ಷ ಬಿ.ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ, ಟಿ.ಓಬಳಪ್ಪ ಇತರೆ ಗಣ್ಯರು ಆಗಮಿಸಲಿದ್ದಾರೆ.
ನಂತರ 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. 9.30ಕ್ಕೆ ಕೃಷಿ ವಸ್ತು ಪ್ರದರ್ಶನ ಮೇಳ, ಉದ್ಯೋಗ ಮೇಳ ನಡೆಯಲಿದೆ. 10.30ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ಮೇಳ ನಡೆಯಲಿದೆ.
ಬೆಳಿಗ್ಗೆ 11ಕ್ಕೆ ಮಹಿಳಾ ಗೋಷ್ಠಿಯನ್ನು ಸಂಡೂರು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಉದ್ಘಾಟನೆ ಮಾಡುವರು. ದೇವದುರ್ಗ ಶಾಸಕ ಕರೆಮ್ಮ ಜಿ.ನಾಯಕ, ಎಂಎಲ್ಸಿ ಹೇಮಲತಾ ನಾಯಕ, ಶಾಂತಲಾ ರಾಜಣ್ಣ, ಪ್ರಿಯಾಂಕ ಸತೀಶ್ ಜಾರಕಿಹೊಳಿ, ಡಾ.ಅನುಸೂಯ ಕೆಂಪನಹಳ್ಳಿ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ. ಮಧ್ಯಾಹ್ನ 2.30ರಿಂದ ನೌಕರರ ಗೋಷ್ಠಿ ಮತ್ತು ಕಾರ್ಯಾಗಾರ ನಡೆಯಲಿದೆ. ಸಂಜೆ 5ಕ್ಕೆ ಸಂಘಟನಾ ಗೋಷ್ಠಿ ನಡೆಯಲಿದೆ.
ನಾಡಿದ್ದು ದಿನಾಂಕ 9ರಂದು ಬೆಳಿಗ್ಗೆ 9ಕ್ಕೆ ಧರ್ಮ ಸಭೆ ನಡೆಯಲಿದ್ದು, ರಾಜ್ಯದ ವಿವಿಧ ಮಠಾಧೀಶರು ಸಾನಿಧ್ಯ ವಹಿಸಲಿದ್ದಾರೆ. ಇದೇ ವೇಳೆ ಸಾಧನೆ ಮಾಡಿದ ಸಾಧಕರಿಗೆ 2024ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಲಾಗುವುದು. ಮಧ್ಯಾಹ್ನ 12.30ಕ್ಕೆ ಜನ ಜಾಗೃತಿ ಜಾತ್ರಾ ಮಹೋತ್ಸವ ನಡೆಯಲಿದೆ. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡುವರು. ಜಾತ್ರಾ ಸಮಿತಿಯ ಅಧ್ಯಕ್ಷ ಬಿ.ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರದ ಬೃಹತ್ ಕೈಗಾರಿಕಾ ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಆಹಾರ, ನಾಗರಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ ಜೋಷಿ, ಕರ್ನಾಟಕ ಸರ್ಕಾರದ ವಿಪಕ್ಷ ನಾಯಕ ಆರ್.ಅಶೋಕ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಮಾಜಿ ಸಚಿವ ಬಿ.ಶ್ರೀರಾಮುಲು, ಶ್ರೀನಿವಾಸ್ ದಾಸಕರಿಯಪ್ಪ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ, ಬಿ.ವೈ. ವಿಜಯೇಂದ್ರ, ಎಸ್. ಎಸ್. ಮಲ್ಲಿಕಾರ್ಜುನ್, ಕೆ.ಹೆಚ್. ಮುನಿಯಪ್ಪ, ಡಾ.ಜಿ.ಪರಮೇಶ್ವರ, ಹೆಚ್.ಸಿ. ಮಹಾದೇವಪ್ಪ, ಎಂ.ಬಿ.ಪಾಟೀಲ್, ಸಂತೋಷ ಲಾಡ್, ಪ್ರಿಯಾಂಕ ಖರ್ಗೆ, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಜಿ.ಕುಮಾರ ನಾಯಕ, ಈ ತುಕಾರಾಂ, ವಿ.ಎಸ್.ಉಗ್ರಪ್ಪ, ಬಿ.ನಾಗೇಂದ್ರ ಸೇರಿದಂತೆ ರಾಜ್ಯ, ಕೇಂದ್ರದ ಶಾಸಕರು, ಸಂಸದರು ಆಗಮಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಗಳಿ ಪ್ರಕಾಶ್, ವಿನಾಯಕ ಬಿ.ಹೆಚ್. ಪೈಲ್ವಾನ್, ಪ್ರವೀಣ್ ಶಾಮನೂರು, ಜಿ.ಆರ್. ನಾಗರಾಜ್, ಎಸ್.ಸತೀಶ್ ಇದ್ದರು.
ಡಿಸಿ, ಎಸ್ಪಿ ಭೇಟಿ : ವಾಲ್ಮೀಕಿ ಜಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್ ಅವರು ಶುಕ್ರವಾರ ಸಂಜೆ ಮಠಕ್ಕೆ ಆಗಮಿಸಿ, ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.
ವೇದಿಕೆ, ಮಹಾಮಂಟಪ, ಊಟದ ಸ್ಥಳ, ಹೆಲಿಪ್ಯಾಡ್ ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ಶ್ರೀಗಳ ಜೊತೆ ವೀಕ್ಷಣೆ ಮಾಡಿದ ಡಿಸಿ, ಎಸ್ಪಿ ಅವರು ಸೂಕ್ತ ಬಂದೋಬಸ್ತ್ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ನಂತರ ಅಡುಗೆ ಮನೆಯಲ್ಲಿ ಮೂರು ದಿನಗಳ ಮಹಾ ದಾಸೋಹ ಸಿದ್ಧತೆಗೆ ಡಿಸಿ ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್ ಅವರು ಪೂಜೆ ಸಲ್ಲಿಸಿ, ಚಾಲನೆ ನೀಡಿದರು.
ಈ ಬಾರಿ ಜಾತ್ರೆಯ ವೇದಿಕೆಗೆ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ ಮತ್ತು ಮಹಾಮಂಟಪಕ್ಕೆ ಶ್ರೀ ಪುಣ್ಯಾನಂದ ಪುರಿ ಶ್ರೀಗಳ ಹೆಸರನ್ನು ಇಡಲಾಗಿದೆ. ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಮಠದ ಧರ್ಮದರ್ಶಿಗಳಾದ ನಲುವಾಗಲು ನಾಗರಾಜಪ್ಪ, ಕೆ.ಬಿ.ಮಂಜುನಾಥ್, ಹೊಸಪೇಟೆ ಜಂಬಯ್ಯ ನಾಯಕ, ಜಗಳೂರಿನ ಯುವ ಮುಖಂಡ ಎಂ.ಡಿ.
ಕೀರ್ತಿಕುಮಾರ್, ಮಹಿಳಾ ಮುಖಂಡರಾದ ವಿಜಯಶ್ರೀ, ಪಾರ್ವತಿ, ಗೌರಮ್ಮ, ಕೆ.ಬೇವಿನಹಳ್ಳಿ ಹಾಲೇಶ್, ಜಿ.ಆರ್.ನಾಗರಾಜ್, ಪಾಳೇಗಾರ್ ನಾಗರಾಜ್, ರಾಜನಹಳ್ಳಿ ಭೀಮಣ್ಣ, ವಕೀಲ ರಂಗನಾಥ್, ಪತ್ರಕರ್ತ ಪ್ರಕಾಶ್ ಮತ್ತಿತರರು ಈ ವೇಳೆ ಇದ್ದರು.