ಅಂಧಕಾರವಿದ್ದರೂ ಅಲ್ಲಲ್ಲಿ ಬೆಳಕನ್ನು ಬೀರುವ ಜ್ಯೋತಿಗಳೇ ಶಿಕ್ಷಕರು

ಅಂಧಕಾರವಿದ್ದರೂ ಅಲ್ಲಲ್ಲಿ ಬೆಳಕನ್ನು ಬೀರುವ ಜ್ಯೋತಿಗಳೇ ಶಿಕ್ಷಕರು

ಶ್ರೀ ಸತ್ಯಸಾಯಿ ಗುರುವಂದನಾ ಕಾರ್ಯಕ್ರಮದಲ್ಲಿ ಡಾ.ಪಿ.ಎಂ. ಅನುರಾಧ

ದಾವಣಗೆರೆ, ಸೆ. 11- ಖಡ್ಗಕ್ಕಿಂತ ಲೇಖನಿ ಹರಿತವಾದದ್ದು, ಶಿಕ್ಷಕರ ವೃತ್ತಿ ಬಹಳ ಶ್ರೇಷ್ಠವಾದ ವೃತ್ತಿ. ಜಗತ್ತಿನಲ್ಲಿ ಕೆಟ್ಟದ್ದು ಇದ್ದರೂ, ಅಂಧಕಾರವಿದ್ದರೂ ಅಲ್ಲಲ್ಲಿ ಬೆಳಕನ್ನು ಬೀರುವ ಜ್ಯೋತಿಗಳೇ ಶಿಕ್ಷಕರು ಎಂದು ಎವಿಕೆ ಕಾಲೇಜಿನ ವಿಶ್ರಾಂತ ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಡಾ.ಪಿ.ಎಂ.ಅನುರಾಧ ಅವರು ವಿಶ್ಲೇಷಿಸಿದರು.

ನಗರದ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಯಲ್ಲಿ ನಿನ್ನೆ ಆಯೋಜಿಸಿದ್ದ ಶ್ರೀ ಸತ್ಯಸಾಯಿ ಗುರು ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹದಿಹರೆಯದಲ್ಲಿ ಇರುವ ಚೈತನ್ಯ, ಹುಮ್ಮಸ್ಸು, ಕ್ರಿಯಾಶೀಲತೆ, ಲವಲವಿಕೆ ಎಂತಹವರಲ್ಲೂ ಉತ್ಸಾಹ ತುಂಬುವಂತಹುದು. ಈ ವಯಸ್ಸಿನಲ್ಲಿ ಹಸಿ ಗೋಡೆಗೆ ಕಲ್ಲು ಒಗೆದರೂ ನಾಟುವಂತಹ ನಾಜೂಕಾದ ಅಪಾಯಕ ರವಾದ ಈ ಘಟ್ಟವನ್ನು ದಾಟಿಸುವಂತಹವರು ಎಂದರೆ  ಶಾಲೆಯಲ್ಲಿ ಗುರುಗಳು ಮತ್ತು ಮನೆಯಲ್ಲಿ ಪೋಷಕರು. ಪ್ರತಿಯೊಂದು ಹಂತದಲ್ಲೂ ನಮ್ಮ ಜೀವನದಲ್ಲಿ ಪಾಠ ಕಲಿಸಿದವರೆಲ್ಲರೂ ಗುರುಗಳೇ ಎಂದು ಬಣ್ಣಿಸಿದರು.

ಈ ಶಿಕ್ಷಣ ವ್ಯವಸ್ಥೆ ಪಾಶ್ಚಿಮಾತ್ಯರನ್ನು ಅನುಕರಿಸು ವಂತದ್ದು, ನಾಲ್ಕು ಗೋಡೆಗಳ ಮಧ್ಯೆ ಕೊಡುವ ಶಿಕ್ಷಣ ಜೀವನ್ಮುಖಿಯಾಗಿರುವುದಿಲ್ಲ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ವಿದ್ಯಾರ್ಥಿಗಳು ಕೇವಲ ವೈದ್ಯರು ಮತ್ತು ಇಂಜಿನಿಯರ್ ಆಗಬೇಕೆಂದುಕೊಳ್ಳುತ್ತಾರೆ. ಆದರೆ ಒಳ್ಳೆಯ ಶಿಕ್ಷಕರು, ವಕೀಲರು, ಆರಕ್ಷಕರು, ರೈತರು, ಸೈನಿಕರು, ರಾಜಕಾರಣಿಗಳು ನಮ್ಮ ದೇಶಕ್ಕೆ ಬೇಕಾಗಿದೆ ಎಂದರು.

ಇಂದಿನ ಮಕ್ಕಳು ತಾಂತ್ರಿಕತೆಯಿಂದ ಮೊಬೈಲ್, ಲ್ಯಾಪ್‌ಟಾಪ್ ಮೊದಲಾದವನ್ನು ಬಳಸುತ್ತಾ ಮಂಗಗಳಂತಾಗಿದ್ದಾರೆ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ಇಂದಿನ ತಂತ್ರಜ್ಞಾನದಿಂದಾಗಿ ಮಕ್ಕಳು ಸುತ್ತಮುತ್ತಲ ಪರಿಸರವನ್ನು ಗಮನಿಸುವುದಿಲ್ಲ, ಸ್ವಾರ್ಥಿಗಳಾಗುತ್ತಿ ದ್ದಾರೆ. ಸಮಾಜಕ್ಕೆ ಕೊಡುಗೆಗಳನ್ನು ಕೊಡುವಂತವರಾಗಬೇಕು ಎಂದು ಹೇಳಿದರು.

ಜಾಗತೀಕರಣ ಹೆಚ್ಚಾದಂತೆ, ನಾವು ನಮ್ಮ ದೇಶೀ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ.   ಮಕ್ಕಳು ನಮ್ಮ ಸಂಸ್ಕೃತಿಯನ್ನು ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಅವರು ಹಿತ ನುಡಿದರು.  

ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಕೆ.ಆರ್. ಸುಜಾತ ಕೃಷ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಈಶ್ವರಮ್ಮ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್, ಉಪ ಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ ಹಾಜರಿದ್ದರು. 

ವಿದ್ಯಾರ್ಥಿನಿಯರಾದ ಬಿ.ಎನ್. ಭಾವನಾ ಮತ್ತು ಎ.ಪಿ. ಭೂಮಿಕ ನಿರೂಪಿಸಿದರು. ಎಂ.ಯು. ರೋಹಿಣಿ ಸ್ವಾಗತಿಸಿದರು. ಜಿ.ಎಸ್.ಮೇಘನಾ ವಂದಿಸಿದರು.

error: Content is protected !!