ಅ.5ರಿಂದ ಮುರುಘಾ ಮಠದಲ್ಲಿ `ಶರಣ ಸಂಸ್ಕೃತಿ ಉತ್ಸವ’

ಅ.5ರಿಂದ ಮುರುಘಾ ಮಠದಲ್ಲಿ `ಶರಣ ಸಂಸ್ಕೃತಿ ಉತ್ಸವ’

ಚಿತ್ರದುರ್ಗ, ಆ.25- ಶ್ರೀ ಮುರುಘರಾಜೇಂದ್ರ ಬೃಹನ್ಮಠದಿಂದ `ಶರಣ ಸಂಸ್ಕೃತಿ ಉತ್ಸವ’ ಬರುವ ಅಕ್ಟೋಬರ್‌ 5ರಿಂದ 13ರ ವರೆಗೆ 9 ದಿನಗಳ ಕಾಲ ನಡೆಯಲಿದೆ ಎಂದು ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ತಿಳಿಸಿದರು.

ಇಲ್ಲಿನ ಶ್ರೀಮಠದಲ್ಲಿ ನಿನ್ನೆ ನಡೆದ `ಶರಣ ಸಂಸ್ಕೃತಿ ಉತ್ಸವ’ದ ಪೂರ್ವ ಸಿದ್ಧತಾ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿದರು.

ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀ ರುದ್ರೇಶ್ವರ ವಿರಕ್ತಮಠದ ಮಹಾಂತ ರುದ್ರೇಶ್ವರ ಶ್ರೀಗಳು, ಗೌರವ ಉಪಾಧ್ಯಕ್ಷರಾಗಿ ರಾವಂದೂರು ಮುರುಘಾಮಠದ ಮೋಕ್ಷಪತಿ ಶ್ರೀಗಳು ಹಾಗೂ ಗೌರವ ಕಾರ್ಯಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ಸಂಸದ ಗೋವಿಂದ ಕಾರಜೋಳ ಆಯ್ಕೆ ಆಗಿದ್ದಾರೆ.

ಉತ್ಸವ ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಆಯ್ಕೆ ಮಾಡಿದ್ದು, ಉತ್ಸವವನ್ನು ಅರ್ಥಪೂರ್ಣ ಹಾಗೂ ಸರಳ ವಾಗಿ ಆಯೋಜಿಸಲಾಗುವುದು. ಮತ್ತು ಶ್ರೀಮ ಠದ ಪರಂಪರೆಯಂತೆ ಎಲ್ಲಾ ಗೋಷ್ಠಿಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಈ ವರ್ಷಕ್ಕೆ ಪೀಠದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ ಜಯಂತಿ 150 ವರ್ಷಗಳಾಗಲಿದೆ. 52 ವರ್ಷಗಳ ಕಾಲ ಶ್ರೀಮಠದ ಪೀಠ ಅಲಂಕರಿಸಿದ ಶ್ರೀಗಳ 100ನೇ ಜಯಂತಿ ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಶ್ರೀಗಳು ಆಚರಿಸುತ್ತಾರೆ. ಜಯದೇವ ಶ್ರೀಗಳನ್ನು ಕುರಿತು ಅರ್ಥಪೂರ್ಣವಾಗಿ 150 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳು ಮಾತನಾಡಿ, ಮಧ್ಯ ಕರ್ನಾಟಕದ ನಾಡ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸ ಬೇಕು. ಈ ಬಾರಿ ಪುರುಷ ಮತ್ತು ಮಹಿಳಾ ಕ್ರೀಡಾ ಕೂಟವನ್ನು ಶ್ರೀಗಳ 150ನೇ ವರ್ಷದ ಜಯಂತಿ ಅಂಗವಾಗಿ ಜಯದೇವ ಶ್ರೀಗಳ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದರು.

ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ, ಶ್ರೀಮಠವು ಜಾತಿ, ಮತ ಮತ್ತು ಲಿಂಗ ಭೇದವಿಲ್ಲದೆ ಬಸವಾದಿ ಶರಣರ ಆಶಯಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಶೂದ್ರರಿಗೆ ಶಿಕ್ಷಣ ಕೊಡಲು ಸಾಧ್ಯವಾಗದ ಸಂದರ್ಭದಲ್ಲಿ ಬೃಹನ್ಮಠವು ಅಂತಹ ಅವಕಾಶ ವನ್ನು ಮಾಡಿಕೊಟ್ಟಿದೆ ಎಂದು ಶ್ಲ್ಯಾಘಿಸಿದರು.

ಶರಣ ಸಂಸ್ಕೃತಿ ಉತ್ಸವದಲ್ಲಿ ಗತವೈಭವದ ಚಿಂತನೆಗಳು ನಡೆಯಲಿ. ಪ್ರತಿ ದಿನವೂ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.

ವಚನಾನಂದ ಶ್ರೀಗಳು ಮಾತನಾಡಿ, ಶ್ರೀಮಠಕ್ಕೆ ನಾಡಿನಾದ್ಯಂತ ಶಾಖಾಮಠಗಳು ಮತ್ತು ಹಾಸ್ಟೆಲ್‌ಗಳಿವೆ. ಇದು ವರ್ಷದ ಕಾರ್ಯಕ್ರಮದ ಪಟ್ಟಿಗೆ ಸೇರಬೇಕು. ಜಯದೇವ ಶ್ರೀಗಳ ಹೆಸರಿನ ಅಂಚೆ ಚೀಟಿ, ನಾಣ್ಯ ಬಿಡುಗಡೆಯಾಗಲು ಕ್ರಮ ವಹಿಸಬೇಕು ಎಂದು ಹೇಳಿದರು.

ಮೋಕ್ಷರುದ್ರಸ್ವಾಮಿ, ರುದ್ರಾಣಿ ಗಂಗಾಧರ್, ಕೆಇಬಿ ಷಣ್ಮುಖಪ್ಪ, ಅನೀಸ್, ಮಂಜುನಾಥ ದಾಳಿಂಬೆ, ಪಿ. ವೀರೇಂದ್ರ ಕುಮಾರ್, ವೀರಶೈವ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಇತರೆ ಸಮಾಜಗಳ ಮುಖಂಡರು, ಶಾಲಾ-ಕಾಲೇಜುಗಳ ಮುಖ್ಯಸ್ಥರು ಇದ್ದರು.

error: Content is protected !!