ಕಳಚಿದ ಮತ್ತೊಂದು ಕಮ್ಯುನಿಸ್ಟ್ ಕೊಂಡಿ

ಕಳಚಿದ ಮತ್ತೊಂದು ಕಮ್ಯುನಿಸ್ಟ್ ಕೊಂಡಿ

ಹಿರಿಯ ಕಮ್ಯುನಿಸ್ಟ್ ಮುಖಂಡ ಕಾಮ್ರೆಡ್ ಆನಂದರಾಜ್ ನಿಧನ

ದಾವಣಗೆರೆ, ಆ. 16 – ಜಿಲ್ಲೆಯ ಹಿರಿಯ ಕಮ್ಯುನಿಸ್ಟ್  ಪಕ್ಷದ ಮುಖಂಡ ಕಾಂ. ಆನಂದರಾಜ್ ಅವರು ಇಂದು ಮುಂಜಾನೆ 6.05 ಘಂಟೆಗೆ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. 

ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸ್ಥಳೀಯ ಕೆಟಿಜೆ ನಗರದ 14 ನೇ ತಿರುವಿನಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆಯುವುದರ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಮತ್ತೊಂದು ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. 

2021 ರ ಮೇ ತಿಂಗಳಲ್ಲಿ ಕಾರ್ಮಿಕ ಮುಖಂಡರಾಗಿದ್ದ ಹೆಚ್.ಕೆ.ರಾಮಚಂದ್ರಪ್ಪ ಅವರ ಅಗಲುವಿಕೆಯ ನೋವನ್ನು ಮರೆಯುವುದರೊಳಗೆ ಮತ್ತೊಬ್ಬ ಹಿರಿಯ ಕಾರ್ಮಿಕ ನಾಯಕನ ನಿರ್ಗಮನವಾಗಿರುವುದು ಕಾರ್ಮಿಕ ವರ್ಗಕ್ಕೆ ಬರಸಿಡಿಲು ಬಡಿದಂತಾಗಿದೆ.

ಮೂಲತಃ ತಮಿಳುನಾಡಿನವರಾದ ಆನಂದರಾಜ್ ಅವರು, 1962 ರಲ್ಲಿ ಸಿದ್ಧೇಶ್ವರ ಮಿಲ್ಲಿಗೆ ಕಾರ್ಮಿಕನಾಗಿ ಸೇರಿ ಮುಂದೆ ಕಾರ್ಮಿಕ ನಾಯಕನಾಗಿ ಬೆಳೆದರು‌. ಅಲ್ಲಿ ಸರಿ ಸುಮಾರು 4 ದಶಕಗಳವರೆಗೆ ಕೆಲಸ ಮಾಡಿ ಅಲ್ಲಿ‌ನ ಯೂನಿಯನ್‌ನ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಬಹುಮುಖ್ಯ ಜವಾಬ್ದಾರಿಗಳನ್ನು ನಿಭಾಯಿಸಿದರು. 2002 ರಲ್ಲಿ ಮಿಲ್ ಮುಚ್ಚುವವರೆಗೂ ಅಲ್ಲಿ ಕೆಲಸ ಮಾಡಿದರು‌. ಮಿಲ್ ಮುಚ್ಚಿದ ತರುವಾಯವೂ ಕಾರ್ಮಿಕರಿಗೆ ಮಾಲೀಕರಿಂದ ಬರಬೇಕಾದ ಹಣವನ್ನು ಕೊಡಿಸುವಲ್ಲಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ನೋಡಲು ಕೃಶಿ ಶರೀರದ ಮೈಕಟ್ಟನ್ನು ಹೊಂದಿದ್ದರೂ ಕಮ್ಯುನಿಸಮ್ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡ ಹಾರ್ಡ್ ಕೋರ್ ಕಮ್ಯುನಿಸ್ಟ್ ಆಗಿದ್ದರು. 

ಮಾಜಿ ಶಾಸಕರಾಗಿದ್ದ ಕಾಂ. ಪಂಪಾಪತಿಯವರ ನೆರಳಿನಲ್ಲೇ ಬೆಳೆದ ಆನಂದರಾಜ್, ಕಾರ್ಮಿಕ ಸಂಘಟನೆಯ ಎಲ್ಲಾ ಪಟ್ಟುಗಳನ್ನು ಕಲಿತಿದ್ದರು.  ಪಂಪಾಪತಿಯವರ ಬಲಗೈಯಂತೆ ಕೆಲಸ ಮಾಡಿದ್ದರೂ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸದೇ ಪಕ್ಷದ ಕೆಲಸಗಳನ್ನು ಬಹು ನಿಷ್ಠೆಯಿಂದ ನಿಭಾಯಿಸಿದವರು. ಅವರು ಮನಸ್ಸು ಮಾಡಿದ್ದರೆ ಕನಿಷ್ಠ ದಾವಣಗೆರೆ ನಗರಸಭೆಯ ಸದಸ್ಯರಾದರೂ ಆಗಬಹುದಿತ್ತು. ಯಾಕೆಂದರೆ 70-80ರ ದಶಕದಲ್ಲಿ ದಾವಣಗೆರೆಯಲ್ಲಿ ಕಮ್ಯುನಿಸ್ಟರ ಪ್ರಭಾವ ಅಷ್ಟಿತ್ತು. ಆದರೆ ಎಲ್ಲರೂ ಚುನಾವಣಾ ರಾಜಕಾರಣಿಗಳಾದರೆ ಪಕ್ಷ ಮತ್ತು ಸಂಘಟನೆಯ ಕೆಲಸ ಮಾಡುವವರಾರು ಎನ್ನುವ ಸ್ಪಷ್ಟತೆ ಅವರಲ್ಲಿತ್ತು. ಹಾಗಾಗಿ ಚುನಾವಣಾ ರಾಜಕಾರಣದಿಂದ ದೂರವೇ ಉಳಿದರು. 

1970 ರಲ್ಲಿ ಮಾಲೀಕ ವರ್ಗದ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಆನಂದರಾಜ್ ಅವರು ಕಾಂ. ಸುರೇಶ್, ಕಾಂ. ಶೇಖರಪ್ಪ ಅವರಂತೆಯೇ ಕೊಲೆಯಾಗಬೇಕಾಗಿತ್ತು‌. ಆದರೆ, ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಪಂಪಾಪತಿ ಹಾಗೂ ಹೆಚ್.ಕೆ.ರಾಮಚಂದ್ರಪ್ಪ ಅವರ ಅತ್ಯಂತ ಆಪ್ತ ಒಡನಾಡಿಯಾಗಿ ದ್ದರು. ದಾವಣಗೆರೆಯಲ್ಲಿ ಕಾರ್ಮಿಕ ಯುಗದ ಉತ್ತುಂಗ ಹಾಗೂ ಬಹುತೇಕ ರಾಜಕೀಯ ಅವನತಿ ಎರಡಕ್ಕೂ ಸಾಕ್ಷಿಯಾಗಿದ್ದ ಆನಂದರಾಜ್, ಪ್ರಸ್ತುತ ಕಾಲಮಾನದ ಅತ್ಯಂತ ಅನುಭವಿ ಹಾಗೂ ಹಿರಿಯ ಕಮ್ಯುನಿಸ್ಟ್ ಆಗಿದ್ದರು. ಕಮ್ಯುನಿಸ್ಟರು ಕೋಪಿಷ್ಟರು ಎನ್ನುವ ಮಾತಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅತ್ಯಂತ ತಾಳ್ಮೆ, ಸಮಾಧಾನದಿಂದ ಸಂಘಟನೆಯ ಕೆಲಸಗಳನ್ನು ಮಾಡುತ್ತಿದ್ದರಿಂದ ಎಲ್ಲಾ ಕಾರ್ಮಿಕರಿಗೂ ಅದರಲ್ಲೂ ಬಹುಮುಖ್ಯವಾಗಿ ಮಹಿಳಾ ಕಾರ್ಮಿಕರಿಗೆ ಅಚ್ಚುಮೆಚ್ಚಿನ ನಾಯಕರಾಗಿದ್ದರು‌. ಅವರ ಸಮಸ್ಯೆಗಳನ್ನು ಸಮಾಧಾನದಿಂದ ಮತ್ತು ತಾಳ್ಮೆಯಿಂದ ಕೇಳಿಸಿಕೊಂಡು ಅವರಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ಈ ಅವರ ಗುಣ ಬಹುತೇಕರಿಗೆ ಮೆಚ್ಚುಗೆಯಾಗುತ್ತಿತ್ತು.

ಭಾರತ ಕಮ್ಯುನಿಸ್ಟ್ ಪಕ್ಷ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಜಿಲ್ಲಾ ಸಮಿತಿಗಳ ಹಾಗೂ ಕಾಂ. ಸುರೇಶ್, ಶೇಖರಪ್ಪ, ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣ ಮಂಡಳಿಗಳ ಖಜಾಂಚಿಯಾಗಿ ಪಾರದರ್ಶಕ ಆಡಳಿತವನ್ನು ನಡೆಸಿ ಮೂರೂ ಸಂಘಟನೆಗಳ ಆರ್ಥಿಕ ಶಿಸ್ತನ್ನು ಕಾಪಾಡುವುದರ ಮೂಲಕ ತಾನೊಬ್ಬ ಕಾರ್ಮಿಕ ಮುಖಂಡ ಮಾತ್ರವಲ್ಲದೆ ಒಬ್ಬ ಶಿಸ್ತಿನ ಆಡಳಿತಗಾರ ಎಂತಲೂ ಸಾಬೀತು ಪಡಿಸಿದ್ದರು. 

ಹೆಚ್.ಕೆ.ಆರ್. ಕಾಲದಲ್ಲೂ ಖಜಾಂಚಿಗಳಾಗಿದ್ದ ಆನಂದರಾಜ್‌ ಅವರು, ಹೆಚ್‌ಕೆಆರ್ ತರುವಾಯ ಅವರಿದ್ದ ಪಕ್ಷದ ಕಾರ್ಯದರ್ಶಿ ಸ್ಥಾನ, ಎಐಟಿಯುಸಿ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನವನ್ನು ಹೊಂದುವ ಎಲ್ಲ ಅವಕಾಶವಿದ್ದರೂ ಪಕ್ಷದ ಕಾರ್ಯದರ್ಶಿ ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನಕ್ಕೆ ಆವರಗೆರೆ ಚಂದ್ರು ಅವರನ್ನು, ಎಐಟಿಯುಸಿ ಅಧ್ಯಕ್ಷ ಸ್ಥಾನಕ್ಕೆ ಕೆ.ರಾಘವೇಂದ್ರ ನಾಯರಿ ಅವರನ್ನು, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹೆಚ್‌.ಜಿ.ಉಮೇಶ್ ಆವರಗೆರೆ ಅವರನ್ನು ನೇಮಕ ಮಾಡುವುದರ ಮೂಲಕ ಹೊಸ ನಾಯಕರು ಬೆಳೆಯಲು ಅವಕಾಶ ಮಾಡಿಕೊಟ್ಟು ತಾವು ಖಜಾಂಚಿಗಳಾಗಿಯೇ ಉಳಿದು ತಾನೊಬ್ಬ ಹೊಸ ತಲೆಮಾರಿನ ನಾಯಕರನ್ನು ಬೆಳೆಸುವ ಕಮ್ಯುನಿಸ್ಟ್ ನಾಯಕ ಎಂದು ಇತರರಿಗೆ ಮಾದರಿಯಾದರು. 

ಅವರು ಅತೀವ ಇಷ್ಟ ಪಡುತ್ತಿದ್ದ ಕಾಂ. ಪಂಪಾಪತಿಯವರು ಮೂರು ಬಾರಿ ಶಾಸಕರಾದರೂ ಹೇಗೆ ಅತೀ ಸರಳವಾಗಿ ಬದುಕಿದರೋ ಅದೇ ಮಾದರಿಯಲ್ಲಿ ಆನಂದರಾಜ್ ಸಹ ತಮ್ಮ ಜೀವಿತಾವಧಿಯಲ್ಲಿ ಕಮ್ಯುನಿಸ್ಟ್ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೊನೆ ತನಕವೂ ಸ್ವಾಭಿಮಾನಿ ಮತ್ತು ಶ್ರಮ ಜೀವಿ ಕಮ್ಯುನಿಸ್ಟ್ ಆಗಿಯೇ ಕೊನೆಯುಸಿರೆಳೆದರು. ಅವರ ಜೀವನವು ಈಗಿನ ತಲೆಮಾರಿನ ಕಮ್ಯುನಿಸ್ಟ್ ನಾಯಕರಿಗೆ ಮಾದರಿಯಾಗಬೇಕಾಗಿದೆ.

error: Content is protected !!