ಪ್ರೇಕ್ಷಕರನ್ನು ಆಕರ್ಷಿಸುವ ಗುಣವನ್ನು ಹವ್ಯಾಸಿ ರಂಗಭೂಮಿ ಅಳವಡಿಸಿಕೊಳ್ಳಲಿ

ಪ್ರೇಕ್ಷಕರನ್ನು ಆಕರ್ಷಿಸುವ ಗುಣವನ್ನು ಹವ್ಯಾಸಿ ರಂಗಭೂಮಿ ಅಳವಡಿಸಿಕೊಳ್ಳಲಿ

ಚಿತ್ರದುರ್ಗದಲ್ಲಿನ ಕೆ.ಬಿ.ಆರ್ ಡ್ರಾಮಾ ಕಂಪನಿಯ ನಾಟಕೋತ್ಸವದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಚಿತ್ರದುರ್ಗ, ಜು. 26 – ವೃತ್ತಿ ರಂಗಭೂಮಿ ಯಲ್ಲಿರುವ ಪ್ರೇಕ್ಷಕರನ್ನು ಹವ್ಯಾಸಿ ರಂಗ ತಂಡಗಳು ತಮ್ಮ ಪ್ರಯೋಗಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

 ದಾವಣಗೆರೆಯ ಶ್ರೀ ಗುರು ವಾದ್ಯವೃಂದ, ಕೆ.ಬಿ. ಆರ್ ಡ್ರಾಮಾ ಕಂಪನಿ, ಬೆಳಗಾವಿ ಕನ್ನಡ ಕಲಾವಿದರ ಸಂಘದ ಆಶ್ರಯದಲ್ಲಿ ನಗರದ ತರಾಸು ಮಂದಿರದಲ್ಲಿ ಮೊನ್ನೆ ಏರ್ಪಡಿಸಿದ್ದ ಸಾತ್ವಿ ಸರಸ್ವತಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

ಪ್ರೇಕ್ಷಕರನ್ನು ಆಕರ್ಷಿಸುವ ಗುಣವನ್ನು ಹವ್ಯಾಸಿ ರಂಗ ತಂಡಗಳು ಅಳವಡಿಸಿಕೊಳ್ಳಬೇಕು.  ಅದೇ ರೀತಿಯಲ್ಲಿ ಹವ್ಯಾಸಿ ರಂಗ ತಂಡ ಗಳಲ್ಲಿರುವ ಶಿಸ್ತನ್ನು ವೃತ್ತಿರಂಗ ತಂಡಗಳು ಅಳವಡಿಸಿಕೊಳ್ಳಬೇಕು.  ವೃತ್ತಿ ಮತ್ತು ಹವ್ಯಾಸಿ ರಂಗ ತಂಡಗಳು ಒಗ್ಗೂಡಿದರೆ, ನಾಟಕ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಸಾಧ್ಯವಿದೆ ಎಂದರು.

ಒಂದು ಕಾಲದಲ್ಲಿ ವೃತ್ತಿರಂಗಭೂಮಿ ಕಂಪನಿ ಕ್ಯಾಂಪ್ ಹಾಕಿದರೆ ಜನರು ಸಾಲುಗಟ್ಟಿ ನಾಟಕ ನೋಡುತ್ತಿದ್ದರು.  ಕರ್ನಾಟಕದಲ್ಲಿ ಸಾಮಾಜಿಕ ಸಂದೇಶವಿರುತ್ತಿತ್ತು.  ಸಮಸ್ಯೆಗ ಳನ್ನು ಎದುರಿಸುವ ಎಚ್ಚರಿಕೆ ಇರುತ್ತಿತ್ತು.  ಆದರಿಂದು ವೃತ್ತಿ ರಂಗಭೂಮಿ ಹೊರಳು ಹಾದಿಯಲ್ಲಿದೆ.  

ವೃತ್ತಿ ರಂಗಭೂಮಿ ನಾಟಕಗಳಲ್ಲಿ ದ್ವಂದ್ವಾರ್ಥದ ಸಂಭಾಷಣೆ,  ಕಿವಿಗಡಚಿಕ್ಕುವ ಸಂಗೀತ,  ವಿಚಿತ್ರ ನೃತ್ಯ ಹೆಚ್ಚುತ್ತಿದ್ದು,  ಸಾಮಾಜಿಕ ಸಂದೇಶವುಳ್ಳ ನಾಟಕಗಳನ್ನು ಜನ ನೋಡುವುದಿಲ್ಲ ಎಂಬಂತಹ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಸಾಣೇಹಳ್ಳಿಯಲ್ಲಿ ಶಿವಸಂಚಾರ ರಂಗ ತಂಡವನ್ನು ನಾವು ಆರಂಭಿಸಿದಾಗ ಹವ್ಯಾಸಿ ನಾಟಕಗಳನ್ನು ಯಾರು ನೋಡುತ್ತಾರೆ ಎಂದು ಕೆಲವರು ಪ್ರಶ್ನಿಸಿದರು.  ಆದರೆ,  ಈ ನಾಟಕಗಳ ಯಶಸ್ಸಿನ ನಂತರ ಎಂತಹ ಪರಿಣಾಮಕಾರಿ ನಾಟಕಗಳ ಅವಶ್ಯವಿದೆ ಎಂಬ ಅರಿವು ಸಮಾಜದಲ್ಲಿ ಜಾಗೃತವಾಯಿತು ಎಂದರು.

ಸಾಣೇಹಳ್ಳಿಯಲ್ಲಿ ಪ್ರತಿವರ್ಷ ವೃತ್ತಿರಂಗಭೂಮಿ ನಾಟಕ ಪ್ರದರ್ಶನ ಆಯೋಜಿಸುತ್ತಿದ್ದು,  ಸಮರ್ಥವಾಗಿ ಅಭಿನಯಿಸುತ್ತಿದ್ದಾರೆ. 

ವೃತ್ತಿರಂಗಭೂಮಿ ಸದಾ ಸಮಸ್ಯೆ,  ಸವಾಲುಗಳನ್ನು ಎದುರಿಸುತ್ತಿದೆ.  ಇವತ್ತಿನ ಕಂಪನಿಗಳನ್ನು ನಡೆಸುವುದೇ ಕಷ್ಟವಾಗಿದೆ ಎಂದು ತಿಳಿಸಿದರು. 

ಕೆ ಬಿ ಆರ್ ಡ್ರಾಮಾ ಕಂಪನಿ ಮಾಲೀಕರೂ ಆಗಿರುವ ಹಿರಿಯ ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ, ಕಲಾವಿದರ ಸಂಘದ ಅಧ್ಯಕ್ಷ ಕೆ. ಗಣೇಶ್,  ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಓ. ಮುರಾರ್ಜಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

error: Content is protected !!