ಮನಃಶಾಂತಿಗೆ ಆಸೆಗಳು ಕಡಿಮೆ ಆಗಬೇಕು

ಮನಃಶಾಂತಿಗೆ ಆಸೆಗಳು ಕಡಿಮೆ ಆಗಬೇಕು

ಮಲೇಬೆನ್ನೂರು : ಮನೆಯಲ್ಲಿ ಮಹಾಮನೆ ಗೋಷ್ಠಿ ಕಾರ್ಯಕ್ರಮದಲ್ಲಿ ಶರಣಾಂಬಿಕೆ ತಾಯಿ ಅಭಿಮತ

ಮಲೇಬೆನ್ನೂರು, ಜು. 24 – ಶರಣರಿಗೆ ಬಾಹ್ಯ ಆಡಂಬರ ಬೇಕಿಲ್ಲ. ಅಂತರಂಗದ ಆಸಕ್ತಿ ಅಗತ್ಯವಿದೆ ಎಂದು ಶಿಕಾರಿಪುರ ಬಸವಾಶ್ರಮದ ಶರಣಾಂಬಿಕೆ ತಾಯಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ವೈ. ನಾರೇಶಪ್ಪನವರ ಮನೆಯಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ `ಮನೆಯಲ್ಲಿ ಮಹಾಮನೆ ಗೋಷ್ಠಿ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ನಿಮ್ಮೊಳಗೆ ಆತ್ಮಚೈತನ್ಯ ಇದೆ. ಮನಃಶ್ಯಾಂತಿಗೆ ಆಸೆಗಳು ಕಡಿಮೆ ಆಗಬೇಕು. ಶರಣರ ಆತ್ಮೋದ್ಧಾರಕ್ಕೆ ವಚನ, ಲಿಂಗ ಪೂಜೆ ಅಗತ್ಯವಿದೆ. ಆಗ ಏಕಾಗ್ರತೆ ಜಾಗೃತವಾಗುತ್ತದೆ ಎಂದರು.

ಶರಣರಾಗಲು ದೇವಾಲಯ ಎಂಬ ಮರದ ಕೊಂಬೆ ಸುತ್ತದೇ ಮನಃದಲ್ಲಿನ ಲಿಂಗವನ್ನು ಅಪ್ಪಿಕೊಳ್ಳಿ. ಹಣ, ಸಮಯ ಪಾಲನೆ, ಸಾಮಾಜಿಕ ಪ್ರಜ್ಞೆ ಸದಾ ಜೊತೆಗಿಟ್ಟು ಜೀವನ ನಡೆಸಿದರೆ ಜೀವನ ಶರಣರಂತೆ ಸಾಗುತ್ತದೆ. ಹಣ ಗಳಿಸಿದರೆ ಭೂತಿ ಆಗುತ್ತೀರಿ. ವಿಭೂತಿ ಧರಿಸಿದರೆ ಶರಣರಾಗುವಿರಿ. ಯುವಕ, ಯುವತಿಯರು ದೈವಿಕ ಭಾವನೆ ಅಳವಡಿಸಿಕೊಳ್ಳಲು ಗುರುಗಳ  ಬಳಿ ತೆರಳಿ ಪಾರಮಾರ್ಥಿಕ ಜ್ಞಾನ ಪಡೆಯಬೇಕು. ಆದರೆ ಸುಲಭವಾಗಿ ಜ್ಞಾನ ಲಭ್ಯವಾಗಲ್ಲ. ಶಿವ ಇದ್ದಲ್ಲಿ ಬದುಕು ಸುಂದರವಾಗುತ್ತದೆ. ಇಲ್ಲದಿದ್ದರೆ ಶವ ಆಗುತ್ತದೆ. ಶರಣರ ಬಸವ ಮಂಟಪದ ಮಹಾಮನೆಯು ಗ್ರಾಮೀಣ ಭಾಗದಲ್ಲಿ ಹರಡಲಿ. ಅದು ಮಲೇಬೆನ್ನೂರಿಂದ ಆರಂಭವಾಗಲಿ ಎಂದು ಶುಭ ಕೋರಿದರು.

ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆವರಗೆರೆ ರುದ್ರಮುನಿ ಮಾತನಾಡಿ, ವಚನ ಮತ್ತು ಶರಣರ ಭಾವಚಿತ್ರಗಳನ್ನು ಜಿಲ್ಲಾ ದ್ಯಂತ ಮನೆ-ಮನೆಗಳಿಗೆ ತಲುಪಿಸುವ ಅಭಿಯಾ ನಕ್ಕೆ ಚಾಲನೆ ನೀಡಲಾಗುವುದು ಎಂದರು.

ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಲೋಕೇಶ್ ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಭಾಗವಹಿಸಲು ಹಿರಿಯ ಪೋಷಕರು ಗಮನ ಹರಿಸಿ ಎಂದು ಸಲಹೆ ನೀಡಿದರು.

ಷಣ್ಮುಖಪ್ಪ ಸಾಲಿ, ಶಂಭುಲಿಂಗಪ್ಪ ಅವರು ಲಿಂಗಪೂಜೆ ನಿಯಮ ಹಾಗೂ ಗುರುಲಿಂಗ ಜಂಗಮ ಉಪದೇಶ ನೀಡಿದರು. ವಿವಿಧ ಘಟಕಗಳ ಅಧ್ಯಕ್ಷರಾದ ನ್ಯಾಮತಿ ಮಹೇಶ್ವರಪ್ಪ, ಹೊನ್ನಾಳಿ ವರದರಾಜ್, ನಿಟ್ಟೂರಿನ ಎನ್ ಜಿ ಶಿವಾಜಿ ಪಾಟೀಲ್, ಕಡ್ಲೆಬಾಳು ಪ್ರಕಾಶ್, ಚಂದ್ರಯ್ಯ ಸ್ವಾಮಿ, ವೈ ನಾರೇಶಪ್ಪ, ಅನುಸೂಯಮ್ಮ, ಕವಿತಾ, ಪೂರ್ಣಿಮಾ, ಮಮತಾ, ಸದಾಶಿವ, ಬಿ ಬಸವರಾಜ್, ಸದಾನಂದ ಸೇರಿದಂತೆ ಜಿಲ್ಲೆಯ ನೂರಾರು ಶರಣರು ಭಾಗವಹಿಸಿದ್ದರು.

ಈ ವೇಳೆ ನಿವೃತ್ತ ಶಿಕ್ಷಕರಾದ ಚಿಕ್ಕಪ್ಪ, ರಾಮರಾಯ, ಪುರಸಭಾ ಸದಸ್ಯ ಸಾಬೀರ್ ಅಲಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಆಶಾ ಕಾರ್ಯಕರ್ತೆ ಸುಮಾ ಅವರನ್ನು ಬಸವ ಬಳಗದಿಂದ ಗೌರವಿಸಲಾಯಿತು.

error: Content is protected !!