ರಾಜೀ ಪಂಚಾಯ್ತಿಗೆ ಹೋದವರನ್ನೇ ಬರ್ಬರವಾಗಿ ಹತ್ಯೆಗೈದ ಅಳಿಯ

ರಾಜೀ ಪಂಚಾಯ್ತಿಗೆ ಹೋದವರನ್ನೇ  ಬರ್ಬರವಾಗಿ ಹತ್ಯೆಗೈದ ಅಳಿಯ

ಯಾದಗಿರಿಯ ಮುನಗಾಲ ಗ್ರಾಮದಲ್ಲಿ ಕೊಲೆಯಾದವರು ದಾವಣಗೆರೆ ಚಿಕ್ಕನಳ್ಳಿ ಹೊಸ ಬಡಾವಣೆ ವಾಸಿಗಳು

ದಾವಣಗೆರೆ, ಜು. 18- ಯಾದಗಿರಿ ಜಿಲ್ಲೆಯ ಮುನಗಾಲ ಗ್ರಾಮದಲ್ಲಿ ದಾವಣಗೆರೆಯ ನಿಟುವಳ್ಳಿ ಚಿಕ್ಕನಳ್ಳಿ ಹೊಸ ಬಡಾವಣೆಯ ಮೂವರನ್ನು ಗುರುವಾರ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕುಟುಂಬ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದ್ದು, ಮುನಗಾಲ ಗ್ರಾಮದ ನಿವಾಸಿ ನವೀನ್ ದೇವೇಂದ್ರಪ್ಪ (35) ಪತ್ನಿ ಹಾಗೂ ಅತ್ತೆ-ಮಾವ ಮೂವರನ್ನು ಕೊಂದ ಆರೋಪಿ. 

ಅನ್ನಪೂರ್ಣ (25) ನವೀನ್ ದೇವೇಂದ್ರಪ್ಪನ ಪತ್ನಿ, ಅತ್ತೆ ಕವಿತಾ (45) ಮಾವ ಬಸವರಾಜಪ್ಪ (52) ಕೊಲೆಯಾದ ದುರ್ದೈವಿಗಳು.

ದಾವಣಗೆರೆಯ ಅನ್ನಪೂರ್ಣಳನ್ನು ನವೀನ್ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ.

ಕಳೆದ ಒಂದು ವರ್ಷದ ಹಿಂದೆ ಗಂಡನ ಕಿರುಕುಳ ತಾಳದೇ ಅನ್ನಪೂರ್ಣ ತವರು ಮನೆಗೆ ಹಿಂದಿರುಗಿದ್ದಳು.  ಒಂದು ವರ್ಷದಿಂದ ತಂದೆ, ತಾಯಿ ಜೊತೆಗಿದ್ದ ಅನ್ನ ಪೂರ್ಣಳನ್ನು ಮತ್ತೆ ಜೊತೆಯಾಗಿ ಇರೋಣ ಎಂದು ಪತಿ ಕರೆದಿದ್ದರಿಂದ ಬುಧವಾರ ತೆರಳಿದ್ದರು.ನ್ಯಾಯ ಪಂಚಾಯಿತಿ ಮಾಡಿ ಮತ್ತೆ ಜೊತೆಗಿರಲು ಒಪ್ಪಿಗೆ ನೀಡಿದ ನಂತರ ಮಗಳನ್ನು ಗಂಡ ಮನೆಗೆ ಬಿಡಲು ದಾವಣಗೆರೆಯಿಂದ ಅನ್ನಪೂರ್ಣ ಪೋಷಕರೂ ತೆರಳಿದ್ದರು. 

ಮಗಳನ್ನು ಬಿಟ್ಟು, ಮರಳಿ ದಾವಣಗೆರೆಗೆ ಹೋಗುತ್ತೇವೆ ಎಂದಾಗ ಮಾವ, ಅತ್ತೆಯನ್ನು ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಮೂವರನ್ನು ಕಾರಿನಲ್ಲಿ ಕೂರಿಸಿಕೊಂಡು ಬಂದು ರಸ್ತೆ ಮಧ್ಯದಲ್ಲಿ ಮೂವರ ಮೇಲೆ  ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ, ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ.

ನಂತರ ಹೆಂಡತಿ, ಅತ್ತೆ ಹಾಗೂ ಮಾವ ಸೇರಿ ಮೂವರ ಮೃತದೇಹಗಳನ್ನು ವಡಗೇರ ತಾಲ್ಲೂಕಿನ ಜೋಳದಡಗಿ ಗ್ರಾಮದ ಬಳಿ ಬಿಸಾಡಿ ಬಂದಿದ್ದಾನೆ. ಯಾದಗಿರಿಯ ಅನ್ನಪೂರ್ಣಳ ಶವವನ್ನು ಪತ್ತೆ ಮಾಡಿರುವ ಪೊಲೀಸರು, ಆಕೆಯ ಗಂಡನನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ನವೀನ್  ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಮೂವರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!