ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2ನೇ ಶಾಖೆ ಆರಂಭಿಸಲು ಆಗ್ರಹ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2ನೇ ಶಾಖೆ ಆರಂಭಿಸಲು ಆಗ್ರಹ

ಹರಿಹರ, ಜು. 1 – ನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) 2ನೇ ಶಾಖೆ ಆರಂಭಿಸಲು ಆಗ್ರಹಿಸಿ, ಬ್ಯಾಂಕ್ ಗ್ರಾಹಕರ ಹಿತ ರಕ್ಷಣಾ ಸಮಿತಿಯಿಂದ ಶುಕ್ರವಾರ ತಹಶೀಲ್ದಾರ್ ಗುರುಬಸವರಾಜ್ ಇವರಿಗೆ ಮನವಿ ನೀಡಲಾಯಿತು.

ನಂತರ ಸಮಿತಿಯ ಪದಾಧಿಕಾರಿ ಜೆ. ಕಲೀಂಬಾಷಾ ಮಾತನಾಡಿ, ಈ ಹಿಂದೆ ಸ್ಟೇಟ್ ಬ್ಯಾಂಕ್ ಮೈಸೂರು ಶಾಖೆ ಎಸ್‍ಬಿಐ ಜೊತೆ ವಿಲೀನವಾಯಿತು. ಎರಡೂ ಬ್ಯಾಂಕುಗಳಲ್ಲಿ ಹಿಂದಿನಿಂದಲೇ ಗ್ರಾಹಕರ ಸಂಖ್ಯೆ ಅಧಿಕವಾಗಿತ್ತು.

ಎರಡೂ ಬ್ಯಾಂಕುಗಳ ವಿಲೀನದ ನಂತರ ಎಸ್‍ಬಿಐ ಮುಂಚಿದ್ದ ವಿಸ್ತಾರವಾದ ಕಟ್ಟಡದಿಂದ ಚಿಕ್ಕ ಕಟ್ಟಡಕ್ಕೆ ವರ್ಗಾವಣೆಯಾಯಿತು, ಜೊತೆಗೆ ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸಲಾಯಿತು. ಎರಡು ಬ್ಯಾಂಕುಗಳು ವಿಲೀನಗೊಂಡಾಗ ವಿಸ್ತಾರವಾದ ಕಟ್ಟಡಕ್ಕೆ ವರ್ಗಾವಣೆಯಾಗಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವುದು ಸಹಜ. ಆದರೆ ಬ್ಯಾಂಕಿನ ಆಡಳಿತ ಮಂಡಳಿಯವರು ಇಲ್ಲಿ ಗ್ರಾಹಕ ವಿರೋಧಿ ನಿಲುವು ತಳೆದಿದ್ದಾರೆ.

ಈ ಶಾಖೆಯಲ್ಲೀಗ ಅಂದಾಜು 5 ಸಾವಿರ ಗ್ರಾಹಕರ ಸಂಖ್ಯೆ ಇದೆ. ಬ್ಯಾಂಕಿನ ಕಟ್ಟಡ ಕಿಷ್ಕಿಂಧೆಯಾಗಿರುವುದು ಹಾಗೂ ಸಿಬ್ಬಂದಿ ಕಡಿಮೆ ಇರುವುದರಿಂದ ಬ್ಯಾಂಕಿನ ಗ್ರಾಹಕರಿಗೆ ಸೂಕ್ತವಾದ ಸೇವೆ ಸಿಗುತ್ತಿಲ್ಲ. ಇದು ಸೇವಾ ನ್ಯೂನತೆಯನ್ನು ಬಿಂಬಿಸುತ್ತದೆ.

ವ್ಯಾಪಾರಿಗಳು, ರೈತರು, ಸರ್ಕಾರಿ ಮತ್ತು ಖಾಸಗಿ ನೌಕರರು, ನಿವೃತ್ತ ನೌಕರರು ಅಪಾರ ಸಂಖ್ಯೆಯಲ್ಲಿ ಖಾತೆಯನ್ನು ಹೊಂದಿದ್ದಾರೆ. ಹರಿಹರ ನಗರದ ಜೊತೆಗೆ ಪಕ್ಕದ ಹರಪನಹಳ್ಳಿ, ರಾಣೇಬೆನ್ನೂರು ತಾಲ್ಲೂಕಿನ ಹತ್ತಾರು ಗ್ರಾಮಗಳ ಜನರೂ ಇಲ್ಲಿ ಖಾತೆ ಹೊಂದಿದ್ದಾರೆ.

ಹೂವಿನಹಡಗಲಿಯಂತಹ ಪಟ್ಟಣದಲ್ಲಿ ಈ ಬ್ಯಾಂಕಿನ ಎರಡು ಶಾಖೆಗಳಿವೆ, ಜಿಲ್ಲೆಯ 2ನೇ ದೊಡ್ಡ ನಗರವಾದ ಹರಿಹರದ ಗ್ರಾಹಕರಿಗೆ ಸೂಕ್ತ ಸೇವೆಯನ್ನು ನೀಡುವ ಸಲುವಾಗಿ ಇನ್ನೊಂದು ಶಾಖೆಯನ್ನು ಆರಂಭಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ರಮೇಶ್ ಮಾನೆ, ಮೊಹ್ಮದ್ ಇಲಿಯಾಸ್ ಬಡೇಘರ್, ಪ್ರೀತಮ್ ಬಾಬು, ಜೈ ಕರುನಾಡು ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕೊಡ್ಲಿ, ಬಿ.ಕೆ. ಅನ್ವರ್ ಬಾಷಾ, ಸೈಯದ್ ಅಹ್ಮದ್, ಸೈಯದ್ ರಿಯಾಜ್, ಐರಣಿ ಹನುಮಂತಪ್ಪ, ಕೆ.ಸಿ.ಪಟೇಲ್, ಟಿ.ಸಿ. ಉಸ್ಮಾನ್ ಅಲಿ, ಮುಕ್ತಮ್ ಬಾಷಾ, ಗೋವಿಂದರಾಜ್ ಇದ್ದರು.

error: Content is protected !!