ದಾವಣಗೆರೆ, ಜೂ.29- ನಗರದ ವಿವಿಧೆಡೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಸವಾರರಿಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಶನಿವಾರ ಹೆಲ್ಮೆಟ್ ರಹಿತ ಚಾಲನೆ, ಟ್ರಿಪಲ್ ರೈಡಿಂಗ್, ಅತಿವೇಗದ ಚಾಲನೆ, ರಸ್ತೆ ಅಡೆತಡೆ, ಕರ್ಕಶ ದ್ವನಿ ಸೂಸುವ ಸೈಲೆನ್ಸರ್, ಹಾರ್ನ್ ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗಿದೆ.
ಶಾಮನೂರು ಸಮುದಾಯ ಭವನದಿಂದ ಶಾರದಾಂಭ ವೃತ್ತದ ವರೆಗೆ ಬರುವ ರಸ್ತೆ, ಎಂಬಿಎ ಕಾಲೇಜು ಭಾಗಗಳಲ್ಲಿ ಹಾಗೂ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಜಿಎಂ ಐಟಿ ವರೆಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿದರು.
ಕರ್ಕಶ ಧ್ವನಿ ಸೂಸುವ ಹಾರ್ನ್ ಗಳಿಗೆ ಸಂಬಂಧಿಸದಂತೆ ಒಟ್ಟು 10 ಪ್ರಕರಣಗಳಲ್ಲಿ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸಿದಂತೆ ಒಟ್ಟು 60 ಪ್ರಕರಣಗಳಲ್ಲಿ 30 ಸಾವಿರ ರೂ ದಂಡ ವಿಧಿಸಲಾಗಿದೆ.
ತ್ರಿಬ್ಬಲ್ ರೈಡಿಂಗ್ಗೆ ಸಂಬಂಧಿಸಿದಂತೆ 20 ಪ್ರಕರಣಗಳಲ್ಲಿ 10 ಸಾವಿರ ರೂ ದಂಡ, ಕರ್ಕಶ ಧ್ವನಿ ಸೂಸುವ ಸೈಲೆನ್ಸರ್ಗೆ ಸಂಬಂಧಿಸಿ ದಂತೆ 10 ಪ್ರಕರಣಗಳಲ್ಲಿ 5 ಸಾವಿರ ರೂ ದಂಡ ವಿಧಿಸಲಾಗಿದೆ. ಅತಿವೇಗ ಚಾಲನೆ ಮಾಡಿದ 2 ಪ್ರಕರಣಗಳಲ್ಲಿ 1 ಸಾವಿರ ರೂ. ದಂಡ ಸೇರಿದಂತೆ ರಸ್ತೆ ಅಡೆತಡೆಗೆ ಸಂಬಂಧಿಸಿದಂತೆ 2 ಪ್ರಕರಣಗಳಲ್ಲಿ 1 ಸಾವಿರ ರೂ ದಂಡ ಸೇರಿದಂತೆ ಒಟ್ಟು 105 ಪ್ರಕರಣಗಳಿಗೆ ಸೇರಿದಂತೆ 52,500 ರೂ.ಗಳು ದಂಡ ವಿಧಿಸಲಾಗಿರುತ್ತದೆ.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ ಎಂ. ಸಂತೋಷ್ ಹಾಗು ಮಂಜುನಾಥ ಜಿ. ಮತ್ತು ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನಲವಾಗಲು ನೇತೃತ್ವದಲ್ಲಿ ದಕ್ಷಿಣ ಸಂಚಾರ ಹಾಗೂ ಉತ್ತರ ಸಂಚಾರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡಗಳು ಕಾರ್ಯಾಚರಣೆ ನಡೆಸಿವೆ. ಮುಂದೆಯೂ ಇದೇ ರೀತಿ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಯಲಿದ್ದು ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನದ ಇನ್ಶೂರೆನ್ಸ್ ಹೊಂದಿರಬೇಕು.
ವಾಹನಗಳಲ್ಲಿ ಕರ್ಕಶ ಧ್ವನಿ ಸೂಸುವ ಸೈಲೆನ್ಸರ್, ಹಾರ್ನ್ ಗಳನ್ನು ಹಾಕಬಾರದು ಹಾಗೂ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು, ವಾಹನ ಸವಾರರು ಸೀಟ್ ಬೆಲ್ಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ವಾಹನ ಚಾಲನೆ ಮಾಡಬೇಕು ಎಂದು ಎಸ್ಪಿ ಸೂಚಿಸಿದ್ದಾರೆ.