ಜಿಲ್ಲಾ ಬಿಜೆಪಿಯ ಮಹಾನ್ ನಾಯಕ ದಕ್ಷಿಣ ಬಿಟ್ಟು, ಉತ್ತರದಲ್ಲಿ ಸ್ಪರ್ಧೆ ಮಾಡಿದ್ದು ಏಕೆ ?

ಜಿಲ್ಲಾ ಬಿಜೆಪಿಯ ಮಹಾನ್ ನಾಯಕ ದಕ್ಷಿಣ  ಬಿಟ್ಟು, ಉತ್ತರದಲ್ಲಿ ಸ್ಪರ್ಧೆ ಮಾಡಿದ್ದು ಏಕೆ ?

ದಾವಣಗೆರೆ, ಜೂ. 23 – ಲೋಕಸಭೆ ಚುನಾವಣೆ ನಂತರ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಒಡಕು ಶುರುವಾಗಿದ್ದು, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ವಿರುದ್ದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಬಿಜೆಪಿ ಕೆಲವು ನಾಯಕರು, ಯಶವಂತರಾವ್ ಜಾಧವ್  ಅವರಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆ ಟಿಕೆಟ್ ಕೊಟ್ಟರೂ  ಯಾಕೆ ಗೆಲ್ಲಲಿಲ್ಲ. ಅಲ್ಲದೇ ಪಕ್ಷ ಇವರೇ ಕಟ್ಟಿ ಬೆಳೆಸಿದ್ದಾರೆ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ತನ್ನ ಮೇಲೆ ಪತ್ರಿಕಾ ಹೇಳಿಕೆ ನೀಡಿರುವ ಮುಖಂಡರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. 

ನಾನು ಎಂದು ಸಹ ಬಿಜೆಪಿ ಪಕ್ಷ ಕಟ್ಟಿ ಬೆಳಿಸಿದ್ದೇನೆ ಎಂದು ಎಲ್ಲೂ   ಹೇಳಿಲ್ಲ. ನಾನು ಯಾವತ್ತೂ ಸಹಿತ ಒಬ್ಬ ಸಾಮಾನ್ಯ ಕಾರ್ಯಕರ್ತ.  ನೀವು ಹೇಳುವ ಹಾಗೆ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಎಸ್‌.ಎ. ರವೀಂದ್ರನಾಥ್ ಒಬ್ಬರೇ ಅಂತ ಲಗಾನ್ ಟೀಮ್ ಹೇಳುತ್ತಾ ಬರುತ್ತಿದೆ. ಹಾಗಾದರೆ, ಬಿಜೆಪಿ ಕಟ್ಟಿ ಬೆಳೆಸಿದ ಮಹಾನ್ ನಾಯಕನ ಮನೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿದೆ. ಆದರೂ   ಅವರು ದಕ್ಷಿಣ ಕ್ಷೇತ್ರ ಬಿಟ್ಟು, ಉತ್ತರ ಕ್ಷೇತ್ರಕ್ಕೆ ಏಕೆ ಸ್ಪರ್ಧೆ ಮಾಡುತ್ತಿದ್ದರು.‌ ಅಷ್ಟು ಸುಲಭವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲುವ ಕ್ಷೇತ್ರವಾಗಿದ್ದರೂ ಉತ್ತರದಲ್ಲಿ ಅವರು ಏಕೆ ಸ್ಪರ್ಧೆ ಮಾಡಿದ್ದರು ಎಂದು ಅವರು ಕೇಳಿದ್ದಾರೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆಯಾದ ಸಂದರ್ಭದಲ್ಲಿ ನಮ್ಮ ಮನೆ ದಕ್ಷಿಣ ಕ್ಷೇತ್ರದಲ್ಲಿದೆ. ನಾನು ಇಲ್ಲಿ ಅಭ್ಯರ್ಥಿ ಯಾಗುತ್ತೇನೆ ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ನಿಮ್ಮ ಮನೆಯಲ್ಲಿ ನಡೆಸಿದ್ದೀರಿ. ಅಲ್ಲದೇ  ನಾನು ಈ ಬಾರಿ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು  ಘೋಷಣೆ ಮಾಡಿದ್ದ ಮಹಾನ್ ನಾಯಕರು ದಕ್ಷಿಣ ಕ್ಷೇತ್ರದಿಂದ ಏಕೆ ಸ್ಪರ್ಧೆ ಮಾಡಲಿಲ್ಲ ? ಮತ್ತು  ತಾವೇ ದಕ್ಷಿಣ ಅಭ್ಯರ್ಥಿ ಘೊಷಣೆ ಮಾಡಿ ನಿಲ್ಲಿಸಿದ್ದ ಬಿ. ಲೋಕೇಶ್ ಅವರನ್ನು ಏಕೆ ಮೂರನೇ ಸ್ಥಾನಕ್ಕೆ ಹೋದರು. ಅದನ್ನು ಸಾರ್ವಜನಿಕವಾಗಿ ತಿಳಿಸಿ ಈಗ ಯಾವ ಪಕ್ಷದಲ್ಲಿ ಬಿ. ಲೋಕೇಶ್ ಇದ್ದಾರೆ ಎನ್ನುವುದನ್ನು ತಿಳಿಸಿ ಎಂದು ಅವರು ಕೇಳಿದ್ದಾರೆ.

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆ ಮತ್ತು ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕನ ಊರಿನಲ್ಲಿ ಬಿಜೆಪಿಗೆ ಎಷ್ಟು ಓಟುಗಳ ಲೀಡ್ ಕೊಡಿಸಿದ್ದಾರೆ ? ಎನ್ನುವುದನ್ನು ಸಾರ್ವಜನಿಕವಾಗಿ ಮೊದಲು ತಿಳಿಸಲಿ. ಅನಂತರ ನಾನು ನಾಲ್ಕು ಬಾರಿ ಏಕೆ ಸೋತಿದ್ದೇನೆ ಅನ್ನುವುದನ್ನು ತಿಳಿಸುತ್ತೇನೆ. ನೀವೂ ಸಹ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಯಾವುದಾದರೂ ಒಂದು ವಾರ್ಡ್ ಕಾರ್ಪೊರೇಷನ್, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ನಿಂತು ಗೆದ್ದು ತಮ್ಮ ಶಕ್ತಿ ಏನು ಎನ್ನುವುದು ತೋರಿಸಿ. ನಂತರ  ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ಮಾತನಾಡಲಿ. ಆ ಬಳಿಕ ನಾನು ಚುನಾವಣೆಯಲ್ಲಿ  ಏಕೆ ಸೋಲಾಯಿತು ಎನ್ನುವುದನ್ನು ತಿಳಿಸುತ್ತೇನೆ ಎಂದು  ಯಶವಂತರಾವ್ ಜಾಧವ್ ಹೇಳಿದ್ದಾರೆ.

error: Content is protected !!