ಪಹಣಿಗೆ ಆಧಾರ್ ಲಿಂಕ್: ಜಿಲ್ಲೆಗೆ 3ನೇ ಸ್ಥಾನ

ಪಹಣಿಗೆ ಆಧಾರ್ ಲಿಂಕ್: ಜಿಲ್ಲೆಗೆ 3ನೇ ಸ್ಥಾನ

ಶೇ 80 ರಷ್ಟು ಆಧಾರ್ ಜೋಡಣೆ ಮಾಡಲಾದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. 

ಕಂದಾಯಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್

ದಾವಣಗೆರೆ, ಜೂ.15- ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣವಾಗುತ್ತಿದ್ದು, ಜಮೀನಿನ ಮಾಲೀಕರ ಪಹಣಿಗೆ ಆಧಾರ್ ಜೋಡಣೆ ಮಾಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಶೇ 64.73 ರಷ್ಟು ಖಾತೆದಾರರ ಆಧಾರ್‍ನ್ನು ಪಹಣಿಗೆ ಜೋಡಿಸಿದ್ದ , ಇದು ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು. 

ಅವರು ಶನಿವಾರ ಆನಗೋಡು ಬಳಿಯ ಸೈನ್ಸ್ ಭವನದಲ್ಲಿ ನಡೆದ ಜಿಲ್ಲೆಯ ಕಂದಾಯಾ ಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 4,25,708 ಖಾತೆದಾರರ ಆಧಾರ್ ಜೋಡಣೆ ಮಾಡಲಾಗಿದೆ. ಮರಣ, ಭೂ ಪರಿವರ್ತನೆಯಾದ 1,09,955 ಸೇರಿ 5,35,663 ಆಧಾರ್ ಜೋಡಣೆ ಮಾಡುವ ಮೂಲಕ ಶೇ 64.73 ರಷ್ಟು ಆಧಾರ್ ಜೋಡಣೆ ಮಾಡಲಾಗಿದೆ ಎಂದರು. 

 ಕೆಲವು ಖಾತೆದಾರರ ಮೂಲ ಮಾಲೀಕರು ಮರಣ ಹೊಂದಿದ್ದು, ಅವರ ಹೆಸರಿನಲ್ಲಿಯೇ ಪಹಣಿ ಚಾಲ್ತಿಯಲ್ಲಿರುತ್ತವೆ. ಮುಂದಿನ ದಿನಗಳಲ್ಲಿ ಪೌತಿ ಖಾತೆ ಆಂದೋಲನವನ್ನು ಕೈಗೊಳ್ಳುವ ಮೂಲಕ ಖಾತೆ ಬದಲಾವಣೆ ಮಾಡಿ ಪಹಣಿಗೆ ಆಧಾರ್ ಜೋಡಣೆಯ ಕೆಲಸವನ್ನು ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು. 

ಸರ್ಕಾರಿ ಜಾಗ ತಡೆಗೆ ಲ್ಯಾಂಡ್‍ಬೀಟ್: ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಿ ಜಿಯೋ ಫೆನ್ಸಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದ್ದು ಜಿಲ್ಲೆಯಲ್ಲಿ 19,408 ಸರ್ಕಾರದ ಆಸ್ತಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹರಿಹರ 2,599, ಜಗಳೂರು 2,662, ದಾವಣಗೆರೆ 5,664, ಹೊನ್ನಾಳಿ 2,482, ಚನ್ನಗಿರಿ 3,672, ನ್ಯಾಮತಿ 2,329 ಆಸ್ತಿಗಳಿವೆ. ಇದರಲ್ಲಿ 10,956 ಆಸ್ತಿಗಳನ್ನು ಗುರುತಿಸಿ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಉಳಿದ 8,452 ಆಸ್ತಿಗಳನ್ನು ರಕ್ಷಣೆ ಮಾಡಲು ತಿಳಿಸಿದರು. 

ಕಂದಾಯ ಗ್ರಾಮ: ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಲು 81 ಪ್ರಸ್ತಾವನೆಗಳಿದ್ದು, ಇವುಗಳಲ್ಲಿ ಈಗಾಗಲೇ 35ಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಇನ್ನುಳಿದ ಗ್ರಾಮಗಳನ್ನು ಆದಷ್ಟು ಬೇಗನೆ ಅಧಿಸೂಚನೆ ಹೊರಡಿಸಲು ಕ್ರಮಕೈಗೊಳ್ಳಲು ಸೂಚನೆ ನೀಡಿದರು.  

ಇ-ಆಫೀಸ್: ಕಂದಾಯ ಇಲಾಖೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲಾ ಹಂತದಲ್ಲಿ ಆಡಳಿತವನ್ನು ಇ-ಕಚೇರಿ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ. 

ಜೂನ್ 13 ರವರೆಗೆ 2,25,952 ಅರ್ಜಿಗಳನ್ನು ಸ್ವೀಕರಿಸಿ 2,20,847 ಅರ್ಜಿಗಳನ್ನು ಕ್ರಮಕ್ಕಾಗಿ ಕಳುಹಿಸಿದ್ದು 16,428 ಕಳುಹಿಸಲು ಬಾಕಿ ಮತ್ತು 63,399 ಅರ್ಜಿಗಳನ್ನು
ಇತ್ಯರ್ಥ ಮಾಡಲಾಗಿದೆ. ಕಡತಗಳಲ್ಲಿ 25,391 ಕಡತ ತೆರೆಯಲಾಗಿದ್ದು ಒಟ್ಟು 74,709
ಸ್ವೀಕರಿಸಿ ಮುಂದಿನ ಹಂತಕ್ಕೆ ಕಳುಹಿಸಲಾಗಿದೆ. ಇದರಲ್ಲಿ 9,621 ಬಾಕಿ, 12,643 ಇತ್ಯರ್ಥ ಮಾಡಿದ್ದು 2,062 ಪ್ರಗತಿಯ ಹಂತದಲ್ಲಿವೆ. 

ಕೆರೆಗಳ ಒತ್ತುವರಿ ತೆರವು; ಜಿಲ್ಲೆಯಲ್ಲಿ 538 ಕೆರೆಗಳಿದ್ದು, 23,292 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುತ್ತದೆ. ಇದರಲ್ಲಿ 486 ಕೆರೆಗಳನ್ನು ಅಳತೆ ಮಾಡಿ 16,604.22 ಎಕರೆ ವಿಸ್ತೀರ್ಣ ಗುರುತಿಸಲಾಗಿದೆ. ಅಳತೆ ಮಾಡಲು 52 ಕೆರೆಗಳಿಂದ 6,687.24 ಎಕರೆ ಅಳತೆಗೆ ಬಾಕಿ ಇರುತ್ತದೆ. ಅಳತೆ ಮಾಡಿದ 283 ಕರೆಗಳಲ್ಲಿ 1816.39 ಎಕರೆ ಒತ್ತುವರಿ ಪ್ರದೇಶವೆಂದು ಗುರುತಿಸಿ 37 ಕೆರೆಗಳ 66.38 ಎಕರೆ ವಿಸ್ತೀರ್ಣ ತೆರವು ಮಾಡಲಾಗಿದೆ. ಇನ್ನೂ 246 ಕೆರೆಗಳ 1750 ಎಕರೆ ವಿಸ್ತೀರ್ಣ ತೆರವಿಗೆ ಬಾಕಿ ಇದ್ದು 203 ಕೆರೆಗಳು 14787 ಎಕರೆ ವಿಸ್ತೀರ್ಣದಲ್ಲಿದ್ದು ಯಾವುದೇ ಒತ್ತುವರಿಯಾಗಿರುವುದಿಲ್ಲ. ಒತ್ತುವರಿಯಾದ ಕೆರೆಗಳನ್ನು ಶೀಘ್ರದಲ್ಲಿ ತೆರವು ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. 

 538 ಕೆರೆಗಳಲ್ಲಿ 212 ಪಂಚಾಯತ್ ರಾಜ್ ವಿಭಾಗ, 82 ಸಣ್ಣ ನೀರಾವರಿ, 36 ಜಲಸಂಪನ್ಮೂಲ ಇಲಾಖೆ, 2 ಮಹಾನಗರ ಪಾಲಿಕೆ, 144  ಗ್ರಾಮ ಪಂಚಾಯತ್ ಕೆರೆ, 28 ಅರಣ್ಯ, ಕೆಪಿಸಿಎಲ್ 2, ಎಸ್.ಎಸ್.ಎಲ್.ಆರ್.2 ಹಾಗೂ ಇತರೆ 30 ಸೇರಿವೆ.

ಸಭೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಸಾಧನೆ ಮಾಡಿದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಅಭಿಷೇಕ್, ಆಯಾ ತಾಲ್ಲೂಕಿನ ತಹಶೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

error: Content is protected !!