ಪೂರ್ವ ಮುಂಗಾರಿನಲ್ಲಿ ಬೇಸಾಯ ಕ್ರಮ

ಪೂರ್ವ ಮುಂಗಾರಿನಲ್ಲಿ ಬೇಸಾಯ ಕ್ರಮ

ದಾವಣಗೆರೆ ಜೂ. 11 – ಜಿಲ್ಲೆಯಲ್ಲಿ ತೋಟ ಗಾರಿಕಾ ಬೆಳೆಗಳಿಗೆ ಸಂಬಂಧಿಸಿದ ಹಾಗೆ ಪೂರ್ವ ಮುಂಗಾರಿನಲ್ಲಿ ಕೈಗೊಳ್ಳಬೇಕಾದ ಪ್ರಮುಖ ಬೇಸಾಯ ಕ್ರಮಗಳ ಬಗ್ಗೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಮತ್ತು ತೋಟಗಾರಿಕೆ ವಿಜ್ಞಾನಿ  ಎಂ.ಜಿ. ಬಸವನಗೌಡ ಮಾಹಿತಿ ನೀಡಿದ್ದಾರೆ.

ಅಡಿಕೆ : ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣಾಂಶದಿಂದ ಕೆಲ ತೋಟಗಳಲ್ಲಿ ಗರಿಗಳು ಒಣಗಿರುವುದು ಮತ್ತು ಕೆಂಪು ನುಸಿಯ ಬಾಧೆ  ಹೆಚ್ಚುವುದು ಕಂಡು ಬಂದಿದೆ.  ಅಂತಹ ತೋಟಗಳಲ್ಲಿ ನಿಯಂತ್ರಣಕ್ಕೆ ಹೆಕ್ಸಿತೈಯೋಜಾಕ್ಸ್ 1.5 ಮಿಲೀ ಹಾಗೂ ಲಘು ಪೋಷಕಾಂಶಗಳ ಮಿಶ್ರಣ 5 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಎಲೆಯ ಕೆಳಭಾಗ ಸಿಂಪಡಿಸಲು ಸೂಚಿಸಿದೆ.

ದೊಡ್ಡ ಅಡಿಕೆ ತೋಟಗಳಲ್ಲಿ ಇಂಗಾರ ಕೊಳೆ ರೋಗ ಕಂಡು ಬಂದಿರುವುದರಿಂದ ಅದರ ನಿಯಂತ್ರಣಕ್ಕೆ ಒಣಗಿರುವ ಇಂಗಾರಗಳನ್ನು ಕಿತ್ತು ಸುಡಬೇಕು. ತದನಂತರ ಮುಂಜಾಗೃತವಾಗಿ ಪ್ರೋಪಿ ಕೊನೋಜೋಲ್ 1 ಮಿಲೀ, ತೈಯಾಮೆಥಾಕ್ಸಾನ್ 0.5 ಗ್ರಾಂ, ಲಘು ಪೋಷಕಾಂಶಗಳ ಮಿಶ್ರಣ 5 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಎಲೆ ಮತ್ತು ಸುಳಿಗಳ ಮೇಲೆ ಸಿಂಪರಣೆ ಮಾಡಬೇಕು.

ಮುಂಗಾರು ಹಂಗಾಮಿನಲ್ಲಿ ಅಡಿಕೆ ತೋಟ ಗಳಿಗೆ ಪೋಷಕಾಂಶಗಳನ್ನು ನೀಡುವುದಕ್ಕೆ ಸೂಕ್ತ ಕಾಲವಾಗಿದೆ. ತೋಟಗಳನ್ನು ಸ್ವಚ್ಚಪಡಿಸಿ ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ಜಿಪ್ಸಂ ಪ್ರತಿ ಎಕರೆಗೆ 3-4 ಕ್ವಿಂಟಾಲನ್ನು ಎರಚಿ ಉಳುಮೆ ಮಾಡಬೇಕು.

ಪೋಷಕಾಂಶಗಳ ನಿರ್ವಹಣೆಗೆ 1-5 ವರ್ಷದ ಒಳಗಿನ ತೋಟಗಳಿಗೆ ಸಾವಯವ ಗೊಬ್ಬರ 5-6 ಕೆಜಿ ಪ್ರತೀ ಗಿಡಕ್ಕೆ ಹಾಗೂ 10 ವರ್ಷ ಮೇಲ್ಪಟ್ಟ ಗಿಡಗಳಿಗೆ ಸಾವಯವ ಗೊಬ್ಬರ 10 ಕೆಜಿ ಪ್ರತೀ ಗಿಡಕ್ಕೆ ಹಾಗೂ ಮಣ್ಣು ಪರೀಕ್ಷೆಯ ಆಧಾರದ ಮೇಲೆ 15:15:15-150 ಗ್ರಾಂ., ಪೊಟ್ಯಾಷ್-100 ಗ್ರಾಂ ಮತ್ತು ಲಘು ಪೋಷಕಾಂಶ ಮಿಶ್ರಣ (ಬೀಟಲ್ ಮಿಕ್ಸ್) – 100 ಗ್ರಾಂ ಪ್ರತಿ ಗಿಡಕ್ಕೆ  ಗಿಡದಿಂದ ಎರಡು ಅಡಿ ಅಂತರದಲ್ಲಿ ನೀಡಬೇಕು.

ಮುಂಗಾರು ಪ್ರಾರಂಭವಾಗಿರುವುದರಿಂದ ಪೋಷಕಾಂಶಗಳನ್ನು ನೀಡಿದ ನಂತರ ಹಸಿರೆಲೆ ಗೊಬ್ಬರವಾಗಿ ಸೆಣಬು / ಡಯಾಂಚ (15 ಕೆಜಿ ಪ್ರತೀ ಎಕರೆಗೆ) ಅಥವಾ ವೆಲೆವೆಟ್ ಬೀನ್ಸ್ (4 ಕೆಜಿ ಪ್ರತೀ ಎಕರೆಗೆ) ಬೀಜಗಳನ್ನು ತೋಟಗಳಲ್ಲಿ ಬಳಸಿ ಹೂವಾಗುವುದಕ್ಕಿಂತ ಮುಂಚೆ ಭೂಮಿಯಲ್ಲಿ ಮುಗುಚಬೇಕು.

ತೆಂಗು : ತೆಂಗಿನ ತೋಟಗಳಲ್ಲಿ ಬಿಳಿ ನೋಣದ ಬಾಧೆ ಹೆಚ್ಚಾಗಿರುವ ಕಡೆ ನಿಯಂತ್ರಣಕ್ಕೆ ಬೇವಿನ ಎಣ್ಣೆ (5000 ಪಿಪಿಎಮ್) 2 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಪೋಷಕಾಂಶಗಳ ನಿರ್ವಹಣೆಗೆ ಹತ್ತು ವರ್ಷ ಮೇಲ್ಪಟ್ಟ ತೋಟಗಳಿಗೆ ಸಾವಯವ ಗೊಬ್ಬರ 10-15 ಕೆಜಿ ಪ್ರತೀ ಗಿಡಕ್ಕೆ, ಬೇವಿನ ಪುಡಿ 4 ಕೆಜಿ, 15:15:15 1 ಕೆಜಿ, ಪೊಟ್ಯಾಷ್ 1.5 ಕೆಜಿ, ಲಘು ಪೋಷಕಾಂಶಗಳ ಮಿಶ್ರಣ 200 ಗ್ರಾಂ ಪ್ರತೀ ಗಿಡಕ್ಕೆ ಗಿಡದಿಂದ 6 ಅಡಿ ಅಂತರದಲ್ಲಿ ನೀಡಬೇಕು. ತೋಟಗಳಲ್ಲಿ ಹಸಿರೆಲೆ ಗೊಬ್ಬರದ ಗಿಡಗಳನ್ನು (ಡಯಾಂಚ, ಸೆಣಬು, ವೆಲ್‍ವೆಟ್ ಬೀನ್ಸ್ ಇತರೆ) ಬೆಳೆಯುವುದು ಸೂಕ್ತ.

ಸಾಮಾನ್ಯ ಬೇಸಾಯ ಕ್ರಮಗಳು : ತೋಟಗಳ ಸುತ್ತ ಇರುವ ಬಸಿಗಾಲುವೆಗಳನ್ನು ಸ್ವಚ್ಚಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಮಾಡಿಕೊಡಬೇಕು.

ತೋಟಗಳಲ್ಲಿ ಸತ್ತಿರುವ ಗಿಡಗಳ ಬದಲು ಮರು ನಾಟಿ ಮಾಡುವಾಗ ಗುಂಡಿಗೆ ಟ್ರೈಕೋಡರ್ಮಾ ಮಿಶ್ರಿತ ಬೇವಿನ ಪುಡಿಯನ್ನು 4 ಕೆಜಿ ಪ್ರತಿ ಗುಂಡಿಗೆ ನೀಡಬೇಕು. ತೋಟದ ಗರಿಗಳು ವಿದ್ಯುತ್ ಕಂಬಗಳ ಹತ್ತಿರ ಲೈನ್‍ಗೆ ತಾಕುತ್ತಿದ್ದರೆ ವಿದ್ಯುತ್ ಇಲ್ಲದ ಸಮಯದಲ್ಲಿ ಅವುಗಳನ್ನು ಕತ್ತರಿಸುವುದು. ತೋಟದ ಸುತ್ತ ಇರುವ ಬೇಲಿಗಳ ಸ್ವಚ್ಚತೆಯನ್ನು ಕಾಪಾಡುವುದು ಸೂಕ್ತ.

ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.

error: Content is protected !!