ಹಿಂದೂ ಮಹಿಳೆಯರ ರಕ್ಷಣೆಗೆ ಶ್ರೀರಾಮ ಸೇನೆಯಿಂದ ಸಹಾಯವಾಣಿ

ಲವ್ ಜಿಹಾದ್ ಹಿಂದೂ ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ. ಹಿಂದೂ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಜಾಗೃತಿ ಮೂಡಿಸಲಾಗುವುದು.

– ಗಂಗಾಧರ ಜಿ. ಕುಲಕರ್ಣಿ, ರಾಜ್ಯಾಧ್ಯಕ್ಷರು, ಶ್ರೀರಾಮ ಸೇನೆ


ದಾವಣಗೆರೆ, ಮೇ 29- ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಹಿಂಸಿಸುವ ಕೃತ್ಯವನ್ನು ಕೊನೆಗಾಣಿಸಲು ಹಾಗೂ ಆಪತ್ತಿನಲ್ಲಿ ಸಿಲುಕಿದ ಹಿಂದೂ ಸಹೋದರಿಯರ ರಕ್ಷಣೆಗೆ ಶ್ರೀರಾಮ ಸೇನೆಯಿಂದ ಸಹಾಯವಾಣಿ (9090443444) ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಸಹಾಯವಾಣಿ ಬಿಡುಗಡೆ ಮಾಡಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಜಿ. ಕುಲಕರ್ಣಿ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಶ್ರೀರಾಮ ಸೇನೆ ಲವ್ ಜಿಹಾದ್ ಬಗ್ಗೆ ಹೋರಾಟ ಮಾಡುತ್ತಾ ಬಂದಿದೆ. 2008 ರಲ್ಲಿ ಲವ್ ಜಿಹಾದ್‌ಗೆ ಸಂಬಂಧಪಟ್ಟ ಪುಸ್ತಕವನ್ನು ಬಿಡುಗಡೆ ಮಾಡಲಾಗಿತ್ತು. ಆ ವೇಳೆ ಕೆಲವರು ಲವ್‌ ಜಿಹಾದ್ ಸುಳ್ಳು. ಇದನ್ನು ಹಿಂದೂ ಸಂಘಟನೆಗಳು ಸೃಷ್ಠಿಸಿವೆ ಎಂದಿದ್ದರು. ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.

ಲವ್ ಜಿಹಾದ್‌ನಿಂದ ಹೊರಬರಲು ಶ್ರೀರಾಮ ಸೇನೆಯಿಂದ ಸಹಾಯ ನೀಡುವ ಉದ್ದೇಶ ಇದಾಗಿದ್ದು, ಈ ಸಹಾಯವಾಣಿ 24*7 ಕಾರ್ಯನಿರ್ವಹಣೆ ಮಾಡಲಿದೆ. ರಾಜ್ಯದ ಯಾವುದೇ ಮೂಲೆಯಿಂದಲೂ ಕರೆ ಬಂದರೆ ಸ್ವೀಕರಿಸಲಾಗುವುದು. ಕೂಡಲೇ ಆಯಾ ಜಿಲ್ಲಾ ತಂಡ ಕಾರ್ಯ ಪ್ರವೃತ್ತವಾಗಲಿದೆ. ಈ ಮೂಲಕ ನೆರವು ನೀಡಲಾಗುವುದು ಎಂದು ಹೇಳಿದರು.

ಇದರೊಂದಿಗೆ ಕಾನೂನು ಸಲಹೆ, ಲವ್ ಜಿಹಾದ್‌ನಿಂದ ಹೊರ ಬಂದು ವಿದ್ಯಾಭ್ಯಾಸ ಮಾಡಲು ಇಚ್ಛಿಸಿದವರಿಗೆ ನೆರವು, ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ, ಮಕ್ಕಳ ವಿದ್ಯಾಭ್ಯಾಸ ನೀಡುವುದು ಹಾಗೂ ಕೋರ್ಟ್‌, ಕಚೇರಿ ನೆರವು ನೀಡಲಾಗುವುದು ಎಂದರು.

ರಾಜ್ಯದ ಆರು ಕೇಂದ್ರಗಳಲ್ಲಿ ಸಹಾಯವಾಣಿ ಉದ್ಘಾಟನೆ ಮಾಡಲಾಗಿದೆ.ಕಲ್ಬುರ್ಗಿಯಲ್ಲಿ ಸಿದ್ಧಲಿಂಗ ಶ್ರೀ, ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರು, ಮಂಗಳೂರು, ಬಾಗಲಕೋಟೆಯಲ್ಲೂ ಸಹಾಯವಾಣಿ ಕೇಂದ್ರ ಉದ್ಘಾಟನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವರದಿಗಳ ಪ್ರಕಾರ ಓ ಇಂಡಿಯಾ ಮಾಧ್ಯಮ 2023 ರಲ್ಲಿ ಒಂದು ಸರ್ವೆ ಮಾಡಿದ್ದಾರೆ. ಅದರ ಮಾಹಿತಿಯಂತೆ ಲವ್ ಜಿಹಾದ್ ಕೇಸ್‌ನಲ್ಲಿ 153 ಯುವತಿಯರ ಭಯಾನಕ ಕೊಲೆಗಳಾಗಿವೆ. ಈ ಬಗ್ಗೆ ದಾಖಲೆ ಸಮೇತ ವರದಿ ಬಿಡುಗಡೆ ಮಾಡಿದ್ದಾರೆ. ಶೇ. 27.5 ರಷ್ಟು ಮೈನರ್ ಯುವತಿಯರ ಹತ್ಯೆ ಮಾಡಲಾಗಿದೆ.ಶೇ. 62.3 ರಷ್ಟು ಮುಸ್ಲಿ ಯುವಕರು ತಮ್ಮ ಗುರುತು ಮುಚ್ಚಿಟ್ಟು ಬೇರೆ ಬೇರೆ ಧರ್ಮದ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಹಿಂದೂ ಯುವತಿಯರನ್ನು ಮದುವೆಯಾಗಿದ್ದಾರೆ.

ಅಶ್ಲೀಲ ವಿಡಿಯೋ, ಫೋಟೋ, ಡ್ರಗ್ಸ್ ಜಾಲ, ಭಯೋತ್ಪಾದನೆ ಜಾಲದಲ್ಲಿ ಹಿಂದೂ ಯುವತಿಯರನ್ನು ಸಿಲುಕಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

2014-19 ರವರೆಗೆ ಸುಮಾರು 21,684 ಹಿಂದೂ ಯುವತಿಯರು ಕಾಣೆಯಾಗಿದ್ದಾರೆ. 2019-21 ರ ಅವಧಿಯಲ್ಲಿ ಒಟ್ಟು 13 ಲಕ್ಷ 13 ಸಾವಿರ ಯುವತಿಯರ ಅಪಹರಣ, ಅತ್ಯಾಚಾರ, ಮತಾಂತರದ ಪ್ರಕರಣಗಳು ನಡೆದಿವೆ ಎಂದು ಲೋಕಸಭೆಯಲ್ಲಿ ಗೃಹ ಇಲಾಖೆ ದಾಖಲೆ ನೀಡಿದೆ ಎಂದು ಮಾಹಿತಿ ನೀಡಿದರು.

ದೇಶ ಹಾಗೂ ರಾಜ್ಯದಲ್ಲಿ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಅದಕ್ಕೆ ತರಬೇತಿ ನೀಡಲಾಗುತ್ತಿದೆ. ರಾಕ್ಷಸಿ ಕೃತ್ಯದ ಮೂಲಕ ಹತ್ಯೆ ಘಟನೆ ನಡೆಯುತ್ತಿದೆ. ಇದೆಲ್ಲವೂ ನಿರ್ಮೂಲನೆಯಾಗಬೇಕು ಎಂದು ಹೇಳಿದರು.

ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಮಾತನಾಡಿ, ಜೂನ್ 4  ರಂದು ದಾವಣಗೆರೆಯ ಹೋಟೆಲ್‌ಗಳು, ಶಾಲಾ-ಕಾಲೇಜುಗಳು, ಜ್ಯೂಸ್ ಸ್ಟಾಲ್‌ಗಳಲ್ಲಿ ಪ್ರತಿ ವಾರ್ಡ್, ರಸ್ತೆಗಳಲ್ಲಿ ಸಹಾಯವಾಣಿ ಪೋಸ್ಟರ್ ಅಳವಡಿಸಲಾಗುವುದು. ಕಳೆದೆರಡು ತಿಂಗಳಲ್ಲಿ 2000 ಕಾರ್ಯಕರ್ತರು ಶ್ರೀರಾಮಸೇನೆಗೆ ಸೇರ್ಪಡೆಯಾಗಿದ್ದಾರೆ. ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪರಶುರಾಮ ನಡುಮನಿ, ಸಾಗರ್, ರಾಹುಲ್, ಬಿ.ಜಿ. ಶ್ರೀಧರ್, ಶಿವರಾಜ್, ರಾಜು, ಸಿದ್ಯಾರ್ಥ, ಸುನೀಲ್ ವಾಲಿ, ವಿನಯ್, ಮಂಜು, ಶಶಿಕುಮಾರ್ ಉಪಸ್ಥಿತರಿದ್ದರು.

error: Content is protected !!