ಮದುವೆಗೆ ಬಂದವರ ಆಭರಣ ದೋಚಿದ ಆರೋಪಿಯ ಬಂಧನ

ದಾವಣಗೆರೆ, ಮೇ 30- ಕಲ್ಯಾಣ ಮಂಟಪದ ಕೊಠಡಿ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಬಂದಿಸಿದ್ದಾರೆ.

ಶಾಂತಿ ನಗರದ ಕಿರಣ ನಾಯ್ಕ ಬಂಧಿತ. ಈತನಿಂದ 67 ಸಾವಿರ ರೂ. ಮೌಲ್ಯದ 10.5 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ.

ಈತನ ವಿರುದ್ಧ ಈಗಾಗಲೇ ವಿದ್ಯಾನಗರ, ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಿನ ಎ.ಸೌಮ್ಯ  ಸಂಬಂಧಿಕರ ಮದುವೆಗೆ ನಗರದ ಕೆಇಬಿ ಸಮುದಾಯ ಭವನಕ್ಕೆ ಬಂದು ಕೊಠಡಿಯಲ್ಲಿ ಬ್ಯಾಗ್ ಇಟ್ಟು ಬೀಗ ಹಾಕಿ ಮದುವೆ ಕಾರ್ಯದಲ್ಲಿದ್ದರು. ಮಧ್ಯಾಹ್ನ ಬೀಗ ಮುರಿದು ಬ್ಯಾಗಿನಲ್ಲಿದ್ದ ಆಭರಣ ಹಾಗೂ ನಗದು ಕಳ್ಳತನವಾಗಿತ್ತು. ಈ ಕುರಿತು ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೆಟಿಜೆ ನಗರ ಠಾಣೆಯ ನಿರೀಕ್ಷಕ ಸುನಿಲ್ ಕುಮಾರ್ ಹೆಚ್.ಎಸ್.,  ಪಿಎಸ್‍ಐ  ಸಾಗರ ಅತ್ತರವಾಲಾ, ಎನ್.ಆರ್ ಕಾಟೆ ಹಾಗು ಸಿಬ್ಬಂದಿಗಳಾದ ಶಂಕರ್ ಜಾದವ್, ಪ್ರಕಾಶ ಟಿ, ಎಮ್ ಮಂಜಪ್ಪ, ಶಿವರಾಜ್ ಎಮ್.ಎಸ್, ವೀರೇಶ ಕುಮಾರ್  ಹಾಗೂ  ಗೀತಾ ಸಿ ಕೆ ತಂಡ ಆರೋಪಿ ಪತ್ತೆಯಲ್ಲಿ ಯಶಸ್ವಿಯಾಗಿದೆ.

error: Content is protected !!