ಹಾನಿಗೊಳಗಾದ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಲು ಆಗ್ರಹ

ಕೇಂದ್ರ ಸರ್ಕಾರಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮನವಿ

ದಾವಣಗೆರೆ, ಮೇ 28- ಎನ್‌ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಿ, ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು. ಇಲ್ಲದಿದ್ದರೆ ಬರ, ಅತಿವೃಷ್ಟಿ, ಮಳೆ ಹಾನಿಗೊಳಗಾದ ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ನೀತಿಯನ್ನು ಜಾರಿಗೆ ತರಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಇಂದಿಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆ ನಷ್ಟ ಪರಿಹಾರವನ್ನು ಭಿಕ್ಷೆ ರೂಪದಲ್ಲಿ ನೀಡುತ್ತಾರೆ. ಪರಿಹಾರ ವಿತರಣೆ ಬಗ್ಗೆ ಅಧಿಕಾರದಲ್ಲಿರುವ ಮಂತ್ರಿಗಳು ವೈಭವೀಕರಿಸಿ ಹೇಳುತ್ತಾರೆ. ಇದು ರೈತರ ಕಣ್ಣಿಗೆ ಮಣ್ಣೆರೆಚುವ ತಂತ್ರ ಎಂದು ಕಿಡಿಕಾರಿದರು.

ಹೈನುಗಾರಿಕೆ ಮಾಡುವ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಲೀಟರ್‌ಗೆ ಐದು ರೂ.ಗಳನ್ನು ಎಂಟು ತಿಂಗಳ ಹಣ 750 ಕೋಟಿ ರೂ. ಬಿಡುಗಡೆ ಆಗಿಲ್ಲ. ಕೂಡಲೇ ಬಿಡುಗಡೆ ಮಾಡಿ, ಹೈನುಗಾರಿಕೆ ರೈತರನ್ನು ರಕ್ಷಿಸಬೇಕು. ಪಶುಗಳ ತಿಂಡಿ, ಆಹಾರ ಬೆಲೆ ದುಬಾರಿಯಾಗಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆಂದರು.

ರಾಜ್ಯದಲ್ಲಿ ಶೇ. 30 ರಷ್ಟು ಕಬ್ಬು ಬೆಳೆ ಒಣಗಿ ಹೋಗಿದೆ. ಉತ್ಪಾದನೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬರ ಪರಿಹಾರ ನಷ್ಟದಲ್ಲಿ ಕಬ್ಬಿನ ಬೆಳೆಯನ್ನು ಪರಿಗಣಿಸಬೇಕು. ಕಬ್ಬು ಬೆಲೆ ನಾಶವಾಗಿರುವ ರೈತರಿಗೆ ಬರ ಪರಿಹಾರ ಸಿಗುವಂತಾಗಬೇಕೆಂದು ಹೇಳಿದರು.

ಬರದಿಂದ ತತ್ತರಿಸಿದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಗುಣಮಟ್ಟದ ರಸಗೊಬ್ಬರ, ಬಿತ್ತನೆ ಬೀಜ ಸಿಗುವಂತೆ ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಭದ್ರಾ ಜಲಾಶಯದಿಂದ ನೀರು ಬಿಡುತ್ತೇವೆಂದು ಹೇಳಿ ಹುಸಿಗೊಳಿಸಿದ ಕಾರಣ, ಐದು ಸಾವಿರ ಎಕರೆ ಕಬ್ಬು ಬೆಳೆ ನಾಶವಾಗಿದೆ. ಅಡಿಕೆ ತೋಟದ ಬೆಳೆಗಳಾದ ಮಾವು, ಪಪ್ಪಾಯಿ ಇನ್ನಿತರೆ ಬೆಳೆಗಳು ನಾಶ ವಾಗಿವೆ.ಅಕಾಲಿಕ ಮಳೆಗೆ ಭತ್ತದ ಬೆಳೆ ಕೂಡ ನಾಶವಾಗಿದೆ. ರಾಜ್ಯ ಸರ್ಕಾರ ಮಳೆಯಾಶ್ರಿತ ಪ್ರದೇಶಗಳಿಗೆ ಮಾತ್ರ ಪರಿಹಾರ ನೀಡಿದೆ. ಪಂಪ್‌ಸೆಟ್ ಆಧರಿತ ಹಾಗೂ ಭದ್ರಾ ಕಾಲುವೆ ಆಧರಿತ ಬೆಳೆಗಳು ಹೆಚ್ಚುವರಿಯಾಗಿ ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಎಲ್ಲಾ ಬೆಳೆಗಳಿಗೂ ಕನಿಷ್ಠ 30 ಸಾವಿರ ರೂ. ಪರಿಹಾರ ನೀಡಬೇಕೆಂದರು.

ಗ್ರಾಮೀಣ ಬ್ಯಾಂಕ್, ರೈತರನ್ನು ಭಿಕ್ಷುಕರಂತೆ ಕಾಣುವುದಲ್ಲದೇ, ಕಿರುಕುಳ, ವಂಚನೆ ಮಾಡುತ್ತಿದೆ. ಬ್ಯಾಂಕಿನ ಸಾಲ ನೀತಿ ಬದಲಾಗಬೇಕು.ಕೃಷಿ ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವ ವ್ಯವಸ್ಥೆ ಜಾರಿಗೊಳ್ಳಬೇಕು ಎಂದು ಹೇಳಿದರು.

ರಾಜ್ಯದಲ್ಲಿ 223 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿ, 70 ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ ಮಾತ್ರ ಪರಿಹಾರ ನೀಡಿ, ಶೇ.60 ರಷ್ಟು ರೈತರನ್ನು ರಾಜ್ಯ ಸರ್ಕಾರ ವಂಚಿಸಿದೆ. ಕೂಡಲೇ ಅದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಬಲ್ಲೂರು ರವಿಕುಮಾರ್, ಅಂಜಿನಪ್ಪ ಪೂಜಾರ್, ಮಾಧವ ರೆಡ್ಡಿ ಬಳ್ಳಾರಿ, ಸುರೇಶ್ ಪಾಟೀಲ್, ಬಸವರಾಜ್ ರಾಂಪುರ, ಶಿವಕುಮಾರ್ ಉಪಸ್ಥಿತರಿದ್ದರು.

error: Content is protected !!