ಬಿ.ಐ.ಇ.ಟಿಯ ಎಸ್.ಎಸ್. ಎಮ್. ಸಾಂಸ್ಕೃತಿಕ ಕೇಂದ್ರ ದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ನಿರ್ಮಾಣ 4.0ನೇ ಯೋಜನಾ ಪ್ರದರ್ಶನವನ್ನು ಇಂದು ಬೆಳಿಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
ಮಧ್ಯ ಕರ್ನಾಟಕದಲ್ಲಿ ಅತ್ಯುತ್ತಮ ಮಟ್ಟದ ತಾಂತ್ರಿಕ ಶಿಕ್ಷಣ ನೀಡಿ ಪಾಲಕರ ಪ್ರಥಮ ಆಯ್ಕೆಯಾಗಿರುವ ಬಿ.ಐ.ಇ.ಟಿ. ಪ್ರಸ್ತುತ ವರ್ಷ ಅನೇಕ ಸಾಧನೆಗಳನ್ನು ಮಾಡಿದೆ. ವಿದ್ಯಾರ್ಥಿಗಳು ಅನೇಕ ಸಂಶೋಧನೆಗಳನ್ನು ಕೈಗೊಂಡು ಯೋಜನೆಗಳನ್ನು ಮಂಡಿಸಿದ್ದಾರೆ. ಈ ಯೋಜನೆಗಳ ವಿವಿಧ ಮಾದರಿಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ನಡೆಯಲಿದೆ.
ಅಂತಿಮ ವರ್ಷದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಈ ವೇದಿಕೆಯನ್ನು ಕಲ್ಪಿಸಲಾಗಿದೆ. ಸುಮಾರು 54 ವಿದ್ಯಾರ್ಥಿ ಯೋಜನೆಗಳನ್ನು ಪ್ರದರ್ಶಿಸಲಾಗುವುದು.
ಯೋಜನೆಗಳ ಮೌಲ್ಯಮಾಪನವನ್ನು ಶಿಕ್ಷಣ, ಉದ್ಯಮ ರಂಗದಿಂದ ಬಂದ ತಜ್ಞರು ಮತ್ತು ಪತ್ರಿಕಾ ಮಿತ್ರರು ಮಾಡುವರು. `ಅತ್ಯುತ್ತಮ ನವೀನ ಯೋಜನೆ’, `ಸಾಮಾಜಿಕ ಕಳಕಳಿಯಿರುವ ಅತ್ಯುತ್ತಮ ಯೋಜನೆ `ಮತ್ತು ವಿಭಾಗದ ಅತ್ಯುತ್ತಮ ಯೋಜನೆ’ ಗಳಿಗೆ ಪ್ರಶಸ್ತಿ ನೀಡಲಾಗುವುದು. ಇಂಜಿನಿಯರ್ ಗುರುರಾಜ್ ಕೆ.ಬಿ., ಸಹಸಂಸ್ಥಾಪಕ ಕೊಮೊಫಿ ಮೆಡ್ಟೆಕ್, ಬೆಂಗಳೂರು ಮತ್ತು ಸಂತೋಷ್ ಕುಮಾರ್ ಗುಡ್ಡದ್, ಪ್ರಧಾನ ವ್ಯವಸ್ಥಾಪಕರು, ಬಯೋಕಾನ್ ಬಯೊಲಾಜಿಕ್ಸ್ ಲಿ. ಬೆಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.