ಆಗ್ನೇಯ ಕ್ಷೇತ್ರ ಮತದಾರರ ಪಟ್ಟಿಯಿಂದ ವಂಚಿತರಿಂದ ಪ್ರತಿಭಟನೆ

ಆಗ್ನೇಯ ಕ್ಷೇತ್ರ ಮತದಾರರ ಪಟ್ಟಿಯಿಂದ ವಂಚಿತರಿಂದ ಪ್ರತಿಭಟನೆ

ಜಗಳೂರು, ಮೇ 21 – ಆಗ್ನೇಯ ಶಿಕ್ಷಕರ ಕ್ಷೇತ್ರದ ಹೊಸ ಮತದಾರರ ಸೇರ್ಪಡೆ ನೋಂದಣಿಯಿಂದ ವಂಚಿತರಾದ ಉಪನ್ಯಾಸಕರು ತಹಶೀಲ್ದಾರ್ ಕಛೇರಿ ಮುಂಭಾಗ ಜಮಾಯಿಸಿ  ಚುನಾವಣಾ ಆಯೋಗಕ್ಕೆ ಕಾರಣ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಅತಿಥಿ ಉಪನ್ಯಾಸಕ ಬುಳ್ಳೇನಹಳ್ಳಿ ಮಹೇಶ್ ಮಾತನಾಡಿ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಚುನಾವಣಾ ಆಯೋಗದ ನಿರ್ದೇಶನದಂತೆ  ಅನುದಾನಿತ, ಅನುದಾನರಹಿತ, ಸರ್ಕಾರಿ  ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಸೇವೆಗೈಯ್ಯುತ್ತಿರಬೇಕು. ಅಗತ್ಯ ದಾಖಲೆಗಳೊಂದಿಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂಬ ಮಾನ ದಂಡಗಳಿಗೆ ಒಳಪಟ್ಟು ನಿಗದಿತ ಸಮಯದಲ್ಲಿ ನೂತನ ಸೇರ್ಪಡೆಗೆ ಪಟ್ಟಣದ ಹೋಚಿ ಬೋರಯ್ಯ ಹಾಗೂ ವಿವಿಧ ಕಾಲೇಜು ಪ್ರೌಢ ಶಾಲೆಗಳ ಉಪನ್ಯಾಸಕರು, ಶಿಕ್ಷಕರುಗಳು ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದರೂ ಯಾವುದೇ ಮಾಹಿತಿ ನೀಡದೇ ಚುನಾವಣೆ ಶಾಖೆಯ ನಿರ್ಲಕ್ಷ್ಯದಿಂದ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಮತದಾನದಿಂದ ವಂಚಿತರನ್ನಾಗಿಸಿದೆ ಎಂದು ಆರೋಪಿಸಿದರು.

ಪ್ರಗತಿಪರ ಸಂಘಟನೆ ಮುಖಂಡ ಮಾದಿಹಳ್ಳಿ ಮಂಜುನಾಥ್ ಮಾತ ನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಪುರುಷ 14679, ಮಹಿಳೆಯರು 8835 ಒಟ್ಟು 23514 ಮತದಾರರನ್ನೊಳಗೊಂಡಿದ್ದು.ಜಗಳೂರು ತಾಲ್ಲೂಕಿನಲ್ಲಿ ಒಟ್ಟು 350 ಮತದಾರರಿದ್ದಾರೆ. ಪ್ರಸಕ್ತ ಸಾಲಿನಲ್ಲಿ 60 ಜನ ಮಾತ್ರ   ಹೊಸ ಸೇರ್ಪಡೆಗೊಂಡಿದ್ದಾರೆ. ಸುಮಾರು 1500 ಕ್ಕೂ ಅಧಿಕ ಪ್ರೌಢಶಾಲೆ ಮತ್ತು ಉಪನ್ಯಾಸಕರುಗಳು ಸೇವೆ ಸಲ್ಲಿಸುತ್ತಿದ್ದಾರೆ. ಆಗ್ನೇಯ ಶಿಕ್ಷಕರ ವಿಧಾನ ಪರಿಷತ್ತು ಚುನಾವಣೆಯಲ್ಲಿ ಪವಿತ್ರ ಮತದಾನದಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿ ಎಂದರು.

ಸಂದರ್ಭದಲ್ಲಿ ಉಪನ್ಯಾಸಕರಾದ ಅಶೋಕ ಕುಮಾರ್, ಮಂಜುನಾಥ್, ರಮೇಶ್, ಶಶಿಕುಮಾರ್ ಸೇರಿದಂತೆ ಇತರರು ಇದ್ದರು.

error: Content is protected !!