ಲಿಂಗಾಯತ ಕೇವಲ ಜಾತಿ ಅಲ್ಲ, ಅದೊಂದು ಧರ್ಮ

ಲಿಂಗಾಯತ ಕೇವಲ ಜಾತಿ ಅಲ್ಲ, ಅದೊಂದು ಧರ್ಮ

ಕುಂಬಳೂರು : ಜಾಗತಿಕ ಲಿಂಗಾಯತ ಮಹಾಸಭಾದ ಸಭೆಯಲ್ಲಿ ಆವರಗೆರೆ ರುದ್ರಮುನಿ ಅಭಿಮತ

ಮಲೇಬೆನ್ನೂರು, ಮೇ 20- ಲಿಂಗಾಯತವು ಕೇವಲ ಜಾತಿಯಲ್ಲ. ಅದೊಂ ದು ಧರ್ಮ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ ಅಭಿಮತ ವ್ಯಕ್ತಪಡಿಸಿದರು. 

ಸಮೀಪದ ಬಸವ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಹರಿಹರ ತಾಲ್ಲೂಕು ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು.

ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣ ಮೊದಲು ಶೈವ ಬ್ರಾಹ್ಮಣರಾಗಿದ್ದರು. ವಿದ್ಯೆ, ಗೌರವ ಮತ್ತು ಘನತೆ ಹೊಂದಿದ್ದ ಬಸವಣ್ಣ ಬಿಜ್ಜಳ ರಾಜನ ಆಸ್ಥಾನದಲ್ಲಿ ಐಷಾರಾಮಿ ಜೀವನ ನಡೆಸದೇ ಸಾಮಾನ್ಯರ ಜೀವನ ಉತ್ತಮಗೊಳಿಸಲು ಸಾಮಾಜಿಕ ಕ್ರಾಂತಿ ಮಾಡಿದರು ಎಂದು ಹೇಳಿದರು.

ಬಸವಣ್ಣನವರು ಕಾಯಕ, ದಾಸೋಹ ಮತ್ತು ಮಹಾಮನೆ ಮೂಲಕ ಅಮಾಯಕ ಜನ ಮತ್ತು ದುಡಿಯುವ ವರ್ಗವನ್ನು ಸಂಘಟಿಸಿ, ವಚನದಿಂದ ಬದುಕಿನ ಸಾರ ತಿಳಿಸಿ, ಶೋಷಣೆ ಯಿಂದ ವಿಮೋಚನೆ ಮಾಡಿದರು ಎಂದು ಹೇಳಿದರು. ಅಂದಿನ ಶರಣರು ಪ್ರಾಮಾಣಿಕ ಮತ್ತು ಶ್ರದ್ಧೆಯಿಂದ ಕಾಯಕದಲ್ಲಿ ತೊಡಗಿದ್ದರು. ಅವರಂತೆ ನಾವೆಲ್ಲರೂ ಸಹ ಸಮ ಸಮಾಜ ನಿರ್ಮಿಸಲು  ಶ್ರಮಿಸೋಣ ಎಂದು ಹೇಳಿದರು.

ಮಹಾಸಭಾದ ಮಹಿಳಾ ಜಿಲ್ಲಾಧ್ಯಕ್ಷರಾದ ಕುಸುಮಾ ಲೋಕೇಶ್ ಮಾತನಾಡಿ, ಬಸವಣ್ಣನವರು ಧರ್ಮಗ್ರಂಥ, ಲಾಂಛನ ಮತ್ತು ವಚನಗಳ ಮೂಲಕ ಮೌಲ್ಯಯುತ ವಿಚಾರಗಳನ್ನು ನೀಡಿ ವೀರಶೈವರು ಹಾಗೂ ಲಿಂಗಾಯತರಲ್ಲಿನ ಗೊಂದಲ ದೂರ ಮಾಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಸಮಿತಿ ಸದಸ್ಯ ಕೆ.ಎಂ ಸಿದ್ದಯ್ಯ ಮಾತನಾಡಿ, ಜೀವನದಲ್ಲಿ ವೈದಿಕ ಆಚರಣೆಗಳನ್ನು ಸೇರ್ಪಡೆ ಮಾಡಿಕೊಳ್ಳದೇ ದಿನಕ್ಕೆ ಹತ್ತು ವಚನ ಹೇಳಿಕೊಂಡು ಸಾರ್ಥಕ ಜೀವನ ನಡೆಸಬೇಕಿದೆ ಎಂದ ಅವರು, ಲಿಂಗ ಪೂಜೆಯಿಲ್ಲದೇ ಯೋಗವೂ ಸಹ ಸೂಕ್ತವಲ್ಲ ಎಂದು ಹೇಳಿದರು. ಜಾಗತಿಕ ಲಿಂಗಾಯತ ಮಹಾಸಭಾ ರಚನೆಯ ಉದ್ದೇಶ, ಆಶಯ ಮತ್ತು ಅದರ ಕಾರ್ಯಚಟುಟಿಕೆಗಳ ಬಗ್ಗೆ ಮುಖಂಡ ನಾರೇಶಪ್ಪ ಮಾಹಿತಿ ವಿವರಿಸಿದರು.

ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅಗಡಿ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಮಹೇಶ್ವ ರಪ್ಪ, ಶಿವಯೋಗಿ, ತೀರ್ಥಪ್ಪ, ಯೋಧ ಶಿವಕುಮಾರ್, ದಾವಣಗೆರೆ ಅಕ್ಕನ ಬಳಗದ ಮಮತಾ, ಪೂರ್ಣಿಮಾ, ಶಿವಾಜಿ ಪಾಟೀಲ್, ಸದಾಶಿವ, ಹಳ್ಳಿಹಾಳ್ ಪರಮೇಶ್ವರಪ್ಪ, ಕಸಾಪ ಸಂಘಟನಾ ಕಾರ್ಯದರ್ಶಿ ಸದಾನಂದ, ಕೆ. ಕುಬೇರಪ್ಪ, ಮಂಜುಳಾ ಮತ್ತು ಜಿಗಳಿ, ಹಳ್ಳಿಹಾಳು, ಯಲವಟ್ಟಿ, ನಂದಿತಾವರೆ, ಮಲೇಬೆನ್ನೂರು ಗ್ರಾಮದ ಶರಣರು ಇದ್ದರು.

ಅಕ್ಕನ ಬಳಗದವರು ವಚನ ಗಾಯನ ಮಾಡಿದರು. ಮಂಜುಳಾ ವಂದಿಸಿದರು.

error: Content is protected !!