ಕೈಗಾರಿಕೋದ್ಯಮಗಳ ನಿರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜುಗೊಳ್ಳಬೇಕಿದೆ

ಕೈಗಾರಿಕೋದ್ಯಮಗಳ ನಿರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜುಗೊಳ್ಳಬೇಕಿದೆ

ಬಾಪೂಜಿ ಹೈಟೆಕ್ ಎಜುಕೇಷನ್ ಪದವಿ ಪ್ರದಾನದಲ್ಲಿ ರಿತು ಶರ್ಮ

ದಾವಣಗೆರೆ, ಏ. 21 – ಬದಲಾಗುತ್ತಿರುವ ಔದ್ಯಮಿಕ ಕ್ಷೇತ್ರದ ನಿರೀಕ್ಷೆಗೆ ತಕ್ಕನಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದಲ್ಲಿ ಉದ್ಯೋಗಾವಕಾಶಗಳು ಅರಸಿ ಬರುತ್ತವೆ ಎಂದು ಬೆಂಗಳೂರಿನ ಬ್ರಿಲೋ ಸಂಸ್ಥೆಯ ವಿಶ್ವವಿದ್ಯಾಲಯ ಸಂಪರ್ಕ ಮುಖ್ಯಸ್ಥರಾದ ಶ್ರೀಮತಿ ರಿತು ಶರ್ಮ ಅಭಿಪ್ರಾಯಪಟ್ಟರು. 

ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ  ಕಂಪ್ಯೂಟರ್ ಅಪ್ಲಿಕೇಶನ್ ವಿದ್ಯಾರ್ಥಿಗಳಿಗಾಗಿ ನಿನ್ನೆ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

 ಚಿಮ್ಮಿ ಬರುವ ಉತ್ಸಾಹ – ಸ್ಪೂರ್ತಿ ಕೇವಲ ವಿದ್ಯಾರ್ಥಿ ಹಾಗೂ ಯುವ ದೆಸೆಯಲ್ಲಿ ಮಾತ್ರ ಇದ್ದರೆ ಸಾಲದು ಜೀವನಪೂರ್ತಿ ಇರಬೇಕು ಎಂದು ಹೇಳಿದರು. 

ಭವ್ಯ ಚಿತ್ರಗಳು ಸ್ಮೃತಿ ಪಟಲದಲ್ಲಿ ಬರುತ್ತಿರಬೇಕು. ಅದರ ಸಾಕಾರಕ್ಕೆ ತುಡಿಯಬೇಕು, ದುಡಿಯಬೇಕು. ಇದಕ್ಕಾಗಿ ಕಲಿಕೆಯ ದಾಹ ಯಾವತ್ತೂ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರಲ್ಲದೇ ಆಧುನಿಕ ತಂತ್ರಜ್ಞಾನಗಳ ತಿಳುವಳಿಕೆ ಮತ್ತು ಅಳವಡಿಕೆಗಳೆ ನಿರಂತರ ಕಲಿಕೆ, ಇದರಿಂದ ಮಾತ್ರ ಪದವೀಧರರು ಮಾನವ ಸಂಪನ್ಮೂಲವಾಗಿ ಹೊರಹೊಮ್ಮಲು ಸಾಧ್ಯ. ಇಂತಹ ಮಾನವ ಸಂಪನ್ಮೂಲವು ವೈಯಕ್ತಿಕ ಕೌಟುಂಬಿಕ ಹಿತಗಳಿಗೆ ಸೀಮಿತವಾಗದೇ ರಾಷ್ಟ್ರ ಮತ್ತು ವಿಶ್ವದ ಹಿತಕ್ಕೂ ಕಾರಣವಾಗ ಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಅಧ್ಯಕ್ಷೀಯ ನುಡಿಗಳನ್ನಾಡಿದ ಸಂಸ್ಥೆಯ ಚೇರ್ಮನ್, ಲೆಕ್ಕಪರಿಶೋಧಕ  ಅಥಣಿ
ಎಸ್.ವೀರಣ್ಣ ಮಾತನಾಡಿ, ತೀವ್ರ ಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಗಳ
ತಿಳುವಳಿಕೆ ಪಡೆಯದೇ ಪದವೀಧರರಿಗೆ ಭವಿಷ್ಯವಿಲ್ಲ ಎಂದರು. 

ಕಾಲೇಜಿನ ಪ್ರಾಚಾರ್ಯ ಡಾ. ಬಿ.ವೀರಪ್ಪನವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. 

ಸುಹಾನಾ ಹಾಗೂ ಸೂಫಿಯಾನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಿರಂಜನ್ ಪ್ರಸಾದ್ ಪ್ರಾರ್ಥಿಸಿದರು. ಎಂ.ವಿ.ವಾಗೀಶ್  ಸ್ವಾಗತಿಸಿದರು. ಹೆಚ್.ನವೀನ್ ಹಾಗೂ ಎನ್.ಜ್ಯೋತಿ ಅತಿಥಿಗಳ ಪರಿಚಯ ಮಾಡಿದರು. 

ಪದವೀಧರರಿಗೆ ಪ್ರತಿಜ್ಞಾ ವಿಧಿಯನ್ನು ವಿಜಯ್ ಎನ್.ರಾವ್ ಬೋಧಿಸಿದರು. ಶ್ರೀಮತಿ ಎಸ್.ವಿಂಧ್ಯಾ ಅತಿಥಿಗಳನ್ನು ಸನ್ಮಾನಿ ಸಿದರು. ಎಂ.ಎಸ್.ಪೂಜಾ ವಂದಿಸಿದರು.

error: Content is protected !!