ಮಾಯಕೊಂಡ, ಏ.18- ಸಿಡಿಲು ಬಡಿದು 25 ಮೇಕೆಗಳು ಸಾವನ್ನಪ್ಪಿದ ಘಟನೆ ಸಮೀಪದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಈಚಘಟ್ಟ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗುರುವಾರ ಸಂಜೆ ಮಾಯಕೊಂಡ ಹೋಬಳಿಯ ಸುತ್ತಮುತ್ತ ಭಾರೀ ಗುಡುಗು ಸಹಿತ ಮಳೆಯಾಗಿತ್ತು. ಪಾಪ್ಯಾನಾಯ್ಕ ಅವರು ಮೇಕೆಗಳನ್ನು ಮೇಯಿಸಲು ಹೋಗಿದ್ದು, ಮಳೆ ಹೆಚ್ಚಾದ ಕಾರಣ ಕುರಿಗಳನ್ನು ಮರದ ಕೆಳಗೆ ನಿಲ್ಲಿಸಿದ್ದರು. ಅದೇ ಮರಕ್ಕೆ ಸಿಡಿಲು ಹೊಡೆದು ಮರದ ಕೆಳಗೆ ನಿಂತಿದ್ದ 16 ಮೇಕೆಗಳು 9 ಹೋಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಪಾಪ್ಯಾನಾಯ್ಕ ಉಳಿದ ಕುರಿಗಳನ್ನು ಹೊಡೆದುಕೊಂಡು ಬರಲು ಮರದಿಂದ ಮುಂದಕ್ಕೆ ಹೋಗಿದ್ದರಿಂದ ಸಿಡಿಲು ಬಡಿಯುವ ಅಪಾಯದಿಂದ ಪಾರಾಗಿದ್ದಾರೆ. ಸುಮಾರು 5 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ನಾವು ಸಾಕಿದ ಹಿಂಡು ಮೇಕೆಗಳು ಸಿಡಿಲಿಗೆ ಸತ್ತು ಹೋಗಿ, ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ನಮಗೆ ಪರಿಹಾರ ನೀಡಿ ರಕ್ಷಿಸಬೇಕು ಎಂದು ಪಾಪ್ಯಾನಾಯ್ಕ ಮತ್ತು ಅವರ ಪತ್ನಿ ರೇವಣಿ ಬಾಯಿ ಅಲವತ್ತುಕೊಂಡರು.
ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಮಾಯಕೊಂಡ ಪಿಎಸ್ಐ ಅಜ್ಜಯ್ಯ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.