ಏ.2 ರಿಂದ ಲಕ್ಕಶೆಟ್ಟಿಹಳ್ಳಿ ಶ್ರೀ ಕಾಳಿಕಾದೇವಿ ಜಾತ್ರೆ

ಏ.2 ರಿಂದ ಲಕ್ಕಶೆಟ್ಟಿಹಳ್ಳಿ ಶ್ರೀ ಕಾಳಿಕಾದೇವಿ ಜಾತ್ರೆ

ಹರಿಹರ, ಮಾ. 28-   ಏಪ್ರಿಲ್ 2 ರಿಂದ 5ರವರೆಗೆ ಗ್ರಾಮದೇವತೆ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಹರಿಹರ ತಾಲ್ಲೂಕಿನ ಲಕ್ಕಶೆಟ್ಟಿಹಳ್ಳಿ  ಶ್ರೀ ಕಾಳಿಕಾದೇವಿ ಸೇವಾ ಸಮಿತಿ ತಿಳಿಸಿದೆ.

ಮಾರ್ಚ್ 31ನೇ ರವಿವಾರ ಗ್ರಾಮದೇವತೆ ಶ್ರೀ ಕಾಳಿಕಾದೇವಿ ಮೂರ್ತಿಯನ್ನು ಮೆರವಣಿಗೆ  ಊರಿನ ಪ್ರಮುಖ ಬೀದಿಗಳ ಮೂಲಕ ಸಾಗಿ ಊರಿನ ಗೌಡ್ರ ನಿಂಗಪ್ಪನವರ ಮನೆಯಲ್ಲಿ ಮೂರು ದಿನಗಳವರೆಗೆ ಪ್ರತಿಷ್ಠಾಪಿಸುವುದು. 

ಏಪ್ರಿಲ್ 1ರಂದು ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಗ್ರಾಮದ ಬಣಕಾರರಿಂದ   ದೇವಿಗೆ ಎಣ್ಣಿ ಅರಿಷಿಣದಿಂದ ಪೂಜೆ ಸಲ್ಲಿಸುವುದು. ಏಪ್ರಿಲ್ 2 ರ ಮಂಗಳವಾರ ಗ್ರಾಮದ ರೈತರಿಂದ ಪೂಜೆ ಹಾಗೂ ಧ್ವಜಾರೋಹಣ, ನಂತರ ಬ್ರಾಹ್ಮೀ ಮುಹೂರ್ತ ದಲ್ಲಿ ದೇವಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಂಕುರಾರ್ಪಣ, ನವಗ್ರಹ ಕಲಶ, ಅಷ್ಟಪಾಲಕರನ್ನು ಸ್ಥಾಪಿಸು ವುದು. ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಯುವುದು. 

ನಂತರ ದೇವಿಗೆ ಕುಂಕುಮಾರ್ಚನೆ ಮಾಡುವುದು. ನಂತರ ಮಧ್ಯಾಹ್ನ 12 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ. 

ರಾತ್ರಿ 9-30ಕ್ಕೆ ದೊಡ್ಡಗೌಡ್ರ ಮನೆಯಿಂದ ದೊಡ್ಡಬಂಡಿಯ ರಥವನ್ನು ಹೊರಡಿಸಿ, ನಿಂಗಪ್ಪ ನವರ ಮನೆಗೆ ಹೋಗಿ ಪೂಜೆ ಮಾಡಿಸಿ ನಂತರ ಬಸವೇಶ್ವರ ದೇವಸ್ಥಾನಕ್ಕೆ ಬರುವುದು. ಗೌಡ್ರ ಮನೆಯಿಂದ ದೇವಿಯನ್ನು ಬಸವೇಶ್ವರ ದೇವಸ್ಥಾನಕ್ಕೆ ಕರೆತಂದು ದೊಡ್ಡ ಬಂಡಿ ಮೇಲೆ ಸಿಂಗರಿಸಿದ ರಥದಲ್ಲಿ ಕುಳ್ಳಿರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು.  ರಾತ್ರಿ ಸಮಯದಲ್ಲಿ ಸಣ್ಣಗೌಡ್ರ ಮನೆಯಿಂದ ಘಟ್ಟಿಯನ್ನು ಮೆರವಣಿಗೆ  ಮೂಲಕ ದೇವಸ್ಥಾನಕ್ಕೆ ತಂದು ನೆಲೆಗೊಳಿಸುವುದು. ದೊಡ್ಡಗೌಡ್ರ ಮನೆಯಿಂದ-ಬಣಕಾರ ಮನೆಯಿಂದ ಹುಲಿಸಿನ ಜೋಳವನ್ನು ದೇವಸ್ಥಾನಕ್ಕೆ ತರುವುದು.

ಏಪ್ರಿಲ್ 3 ರ ಬುಧವಾರ ಬೆಳಗಿನ ಜಾವ 4 ರಿಂದ 6 ರವರೆಗೆ ದೇವಿಯ ಘಟ್ಟಿಗಡಿಗೆ ಮತ್ತು ಹಿಟ್ಟಿನ ಕೋಣವನ್ನು ಉತ್ಸವದ ಮೂಲಕ ದೇವಸ್ಥಾನದ ಬಳಿ ತರುವುದು. ನಂತರ ಹಿಟ್ಟಿನಿಂದ ಮಾಡಿದ ಕೋಣವನ್ನು ವಧೆ ಮಾಡಿ  ನಂತರ ಚರಗ ಚೆಲ್ಲಲಾಗುವುದು.

ಏಪ್ರಿಲ್ 4 ರ ಗುರುವಾರ ಸಂಜೆ  ಮೇಳದವರಿಂದ ಚೌಡಕಿ ಕಾರ್ಯಕ್ರಮ ಜರುಗುವುದು. ನಂತರ ರಾತ್ರಿ 9 ಗಂಟೆಗೆ ಗ್ರಾಮದ ಮಾರುತಿ ನಾಟ್ಯ ಸಂಘದವರಿಂದ `ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ’ ನಾಟಕ  ಪ್ರದರ್ಶನವಿದೆ.   

ಏಪ್ರಿಲ್ 5ರ ಶುಕ್ರವಾರ ಬೆಳಿಗ್ಗೆ ಮುತ್ತೈದೆಯರಿಂದ ದೇವಿಗೆ ತಾಳಿ, ಕಡಗ ಹಾಕಿಸಿ ಉಡಿ ತುಂಬುವುದು ನಂತರ ರೈತರಿಂದ ಹುಲಸಿನ ಜೋಳವನ್ನು ಹಂಚುವ ಕಾರ್ಯಕ್ರಮವಿರುತ್ತದೆ.

error: Content is protected !!