ವಚನ ಸಾಹಿತ್ಯದ ಮೂಲಕ ಶರಣರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು

ವಚನ ಸಾಹಿತ್ಯದ ಮೂಲಕ ಶರಣರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು

ಕುರ್ಕಿ ಗ್ರಾಮದಲ್ಲಿನ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಸುಮತಿ ಜಯಪ್ಪ

ದಾವಣಗೆರೆ, ಮಾ. 28- 12ನೇ ಶತಮಾನದಲ್ಲಿ ವಚನ ಸಾಹಿತ್ಯ ಬೆಳೆದು ಬಂದಿದ್ದು, ವಚನ ಸಾಹಿತ್ಯದ ಮೂಲಕ ಹಲವಾರು ಶರಣರು ಜಾತಿ ವ್ಯವಸ್ಥೆಯನ್ನು ಕಿತ್ತೆಸೆದು  ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಶ್ರಮಿಸಿದರು ಎಂದು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ತಿಳಿಸಿದರು.

ಇಲ್ಲಿಗೆ ಸಮೀಪದ ಕುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಚನ ಸಾಹಿತ್ಯ ಕುರಿತಾಗಿ ಅವರು ಉಪನ್ಯಾಸ ನೀಡಿದರು.

ಮಕ್ಕಳಿಗೆ ಪರೀಕ್ಷಾ ಸಿದ್ಧತೆಯನ್ನು ಕುರಿತಾಗಿ ಮಾತನಾಡುತ್ತಾ, ಮಕ್ಕಳೇ ಇಷ್ಟಪಟ್ಟು ಓದಿ ಕಷ್ಟ ಪಟ್ಟು ಓದಬೇಡಿ, ನೀವು ದೊಡ್ಡ ದೊಡ್ಡ ಕನಸು ಗಳನ್ನು ಕಾಣಿ, ಆ ಕನಸುಗಳು ನಿಮ್ಮ ಗುರಿಯನ್ನು ತಲುಪುವಂತೆ, ನಿಮ್ಮನ್ನು ಪ್ರೇರೇಪಿಸುವಂತೆ ಇರಬೇಕು. ಪರೀಕ್ಷೆಗೆ ಭಯ ಪಡಬೇಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಆಗ ಯಶಸ್ಸು ಸಾಧ್ಯ ಎಂದು ತಿಳಿಸಿದರು. ಹಾಗೆ ಓದಿನಲ್ಲಿ ಏಕಾಗ್ರತೆ ಬಹಳ ಮುಖ್ಯ. ಅದನ್ನು ಬೆಳೆಸಿಕೊಳ್ಳಿ ಓದಿನಲ್ಲಿ ನಿರಂತರತೆ ಇರಲಿ, ಓದಿದ್ದನ್ನು ಮನನ ಮಾಡಿಕೊಂಡು ಬರೆಯಬೇಕು. ದೈನಂದಿನ ಪಾಠವನ್ನು ಅಂದೇ ಅಭ್ಯಸಿಸಿದರೆ ಪರೀಕ್ಷೆಗೆ ಯಾವ ಭಯವೂ ಇರಲಾರದು ಎಂದು ತಿಳಿಸಿದರು.

ದತ್ತಿ ದಾನಿ ಕೆ.ಜಿ. ವೇದಮೂರ್ತಿ ಗೌಡ್ರು ಕುರ್ಕಿ ಮಾತನಾಡಿ, ಮಕ್ಕಳು ಕೀಳರಿಮೆ ಬೆಳೆಸಿಕೊಳ್ಳಬಾರದು. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಯಾರೂ ಹುಟ್ಟುತ್ತಲೇ ದೊಡ್ಡವರಾಗುವುದಿಲ್ಲ. ಆದ್ದರಿಂದ ನೀವು ವಿದ್ಯೆ ಮತ್ತು ಶ್ರಮದಿಂದ ಬೆಳೆಯಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.

ಕುರ್ಕಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೆ.ಬಿ. ಮೀರಾ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಇದೇ ಸಂದರ್ಭದಲ್ಲಿ 2022- 23ನೇ ಸಾಲಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ಗ್ರಾಮೀಣ ಸಿರಿ ಪ್ರಶಸ್ತಿಯನ್ನು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ ಗ್ರಾಮೀಣ ಸಾಧಕಿ ಶ್ರೀಮತಿ ಬಿ.ಎಂ.ಪರಿಮಳ ಅಜ್ಜಯ್ಯ ಕುರ್ಕಿ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿದ ಹಿರಿಯರಾದ ಕೆ.ಜಿ ಸಿದ್ದಪ್ಪ ಕುರ್ಕಿ ನಿವೃತ್ತ ಶಿಕ್ಷಣ ಸಂಯೋಜಕರು ಅವರನ್ನೂ ಅಭಿನಂದಿಸಿ ಗೌರವಿಸಲಾಯಿತು.

ದಾವಣಗೆರೆ ತಾಲ್ಲೂಕು ಕಸಾಪ ನಿರ್ದೇಶಕರಾದ ಶ್ರೀಮತಿ ಬಿ.ವಿ. ಪರಿಮಳ ಜಗದೀಶ್  ಗ್ರಾಮೀಣ ಸಿರಿ ಪ್ರಶಸ್ತಿ ಪುರಸ್ಕೃತ ಬಿ. ಎಮ್. ಪರಿಮಳ ಇವರ ಸಾಧನೆ ಕುರಿತಾಗಿ ಮಾತನಾಡಿದರು.

ಮತ್ತೋರ್ವ ನಿರ್ದೇಶಕ  ಎಂ. ಷಡಾಕ್ಷರಪ್ಪ ಬೇತೂರು ಪ್ರಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ನಿರ್ದೇಶಕ ಎ.ಎಂ.  ಸಿದ್ದೇಶ್, ಆಜೀವ  ಸದಸ್ಯರಾದ ಕಳಸಪ್ಪ, ವರ್ಷ ಬೇಕರಿ ಸಿದ್ದೇಶ್, ಎಸ್. ಪಾರ್ವತಮ್ಮ, ಎ.ಆರ್. ರಾಘವೇಂದ್ರ, ಪ್ರಕಾಶ್ ಆರ್, ಎಂ. ನಾಗರಾಜ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಹನುಮಕ್ಕ ಪ್ರಾರ್ಥಿಸಿದರು.  ಎಸ್. ಪಾರ್ವತಮ್ಮ ನಿರೂಪಿಸಿದರು. ಎಚ್. ವಿರೂಪಾಕ್ಷಿ ಸ್ವಾಗತಿಸಿದರು. ಸಿ.ಜಿ. ಜಗದೀಶ್ ಕೂಲಂಬಿ ವಂದಿಸಿದರು.

error: Content is protected !!