ಗಂಗಾಮತ ಸಮಾಜಕ್ಕೆ ಬೇಕಿದೆ ಮೀಸಲಾತಿ

ಗಂಗಾಮತ ಸಮಾಜಕ್ಕೆ ಬೇಕಿದೆ ಮೀಸಲಾತಿ

ನರಸೀಪುರದ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಶಾಲೆಯನ್ನು ಆರಂಭಿಸಿದ್ದೇವೆ, ಸಮಾಜದ ಕಡುಬಡವರು, ಅನಾಥ ಮಕ್ಕಳು ಇದ್ದರೆ ಕಳಿಸಿ ಅಂತಹ ಮಕ್ಕಳಿಗೆ ಶಿಕ್ಷಣ ನೀಡಿ ಸಂಸ್ಕಾರವಂತರಾಗಿ ಮಾಡುತ್ತೇವೆ.

– ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ, ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ

ಹರಪನಹಳ್ಳಿ, ಮಾ. 25 – ಅತ್ಯಂತ ಹಿಂದುಳಿದ ಗಂಗಾಮತ ಸಮಾಜದವರಿಗೆ ರಾಜಕೀಯ ಪ್ರಜ್ಞೆ ಬರಬೇಕಾಗಿದೆ ಎಂದು ಹಾವೇರಿ ಜಿಲ್ಲಾ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಲುವಾಗಲು ಬಳಿಯ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಭಾನುವಾರ ತಾಲ್ಲೂಕು ಗಂಗಾಮತ ಸಮಾಜದವರು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಾಮಾನ್ಯ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಗಂಗಾಮತ ಸಮಾಜ ಕಾಯಕ ಸಮಾಜವಾಗಿದ್ದು, ಶಿಕ್ಷಣದ ಕೊರತೆ ಇದೆ, ರಾಜಕೀಯ ಪ್ರಜ್ಞೆ ಇಲ್ಲವಾಗಿದೆ, ಶಿಕ್ಷಣ ವಂತರಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾಗೃತರಾಗಬೇಕು ಎಂದು ಅವರು ತಿಳಿಸಿದರು.

ಗಂಗಾಮತ ಸಮಾಜಕ್ಕೆ ಮೀಸಲಾತಿ ಸಿಗಬೇಕಿದೆ, ಅದಕ್ಕಾಗಿ ಸಂಘಟಿತರಾಗಿ ಹೋರಾಟ ಮಾಡಬೇಕಿದೆ. ಸಮಾಜದ ಸಂಘಟನೆ ಅಭಿವೃದ್ದಿಯ ಸಂಕೇತ ಎಂದು ಅವರು ನುಡಿದರು.

ಗಂಗಾಮತ ಸಮಾಜದ ನೌಕರರ ಸಂಘದ ಅಧ್ಯಕ್ಷ ಹರಿಯಮ್ಮನಹಳ್ಳಿ ಅಂಜಿನಪ್ಪ ಮಾತನಾಡಿ, ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ಕಲಿಕೆಗೆ ಸಹಾಯ, ಸಹಕಾರ ನೀಡುತ್ತೇವೆ, ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವಕೀಲ ಕಣವಿಹಳ್ಳಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. 

ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಗಂಗಾಧರ ಸಮಾರಂಭದ ಕುರಿತು , ಹಿಂದಿನ ಸಭೆಯ ಲೆಕ್ಕವನ್ನು ಸಭೆಗೆ ತಿಳಿಸಿದರು.

ಗಂಗಾಮತ ಸಮಾಜದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ. ರಾಮಣ್ಣ, ಮುಖಂಡರಾದ ಅಣಜಿಗೇರಿ ನಿಂಗಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಶೇಖರ್‌, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಿ. ಚಂದ್ರಮೌಳಿ, ಜಾಲಗಾರ ಕೊಟ್ರೇಶ, ಪವಾಡಿ ಮಲ್ಲಿಕಾರ್ಜುನ, ಪವಾಡಿ ದೇವೇಂದ್ರಪ್ಪ, ಪವಾಡಿ ಬಸವರಾಜ, ಶಿವಾನಂದಪ್ಪ, ಚಿಗಟೇರಿ ಸುರೇಶ ಬಾರ್ಕಿ, ಸುಧಾ, ಶೇಖರಪ್ಪ, ಆರೋಗ್ಯ ಇಲಾಖೆಯ ನಿವೃತ್ತ ನೌಕರ ಬಸವರಾಜಪ್ಪ, ಸುಣಗಾರ ರಾಮಣ್ಣ ಇತರರು ಹಾಜರಿದ್ದರು.

error: Content is protected !!