ಸಮಾಜದ ಅಂಕು – ಡೊಂಕು ತಿದ್ದಲು ಚುಟುಕು ಅಸ್ತ್ರ

ಸಮಾಜದ ಅಂಕು – ಡೊಂಕು ತಿದ್ದಲು ಚುಟುಕು ಅಸ್ತ್ರ

ಸಾಹಿತಿ ಜೆ. ಕಲೀಂ ಬಾಷಾ

ಹರಿಹರ, ಮಾ. 19 – ಲೇಖನಿಯು ಖಡ್ಗಕ್ಕಿಂತ ಹರಿತ ಎಂಬ ಗಾದೆ ಮಾತಿನಂತೆ ಚುಟುಕು ಕವನ ಗಳು ಸಾಹಿತ್ಯ ಕ್ಷೇತ್ರದ ಪ್ರಭಾವಿ ಪ್ರಾಕಾರವಾಗಿದೆ ಎಂದು ಸಾಹಿತಿ ಜೆ.ಕಲೀಂ ಬಾಷಾ ಹೇಳಿದರು.

ನಗರದ ಸಿದ್ದೇಶ್ವರ ಪ್ಯಾಲೇಸ್‍ನ ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯಲ್ಲಿ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ, ಆಡಳಿತಗಾರರ ಅಂಕು, ಡೊಂಕುಗಳನ್ನು ತಿದ್ದಲು, ಅವರನ್ನು ನಿದ್ದೆಯಿಂದ ಎಚ್ಚರಿಸಲು ಚುಟುಕು ಕವನಗಳು ಉತ್ತಮ ಅಸ್ತ್ರವಾಗಿವೆ. ಚುಟುಕು ಕವನಗಳು ಕೆಂಪು ಇರುವೆ ಕಚ್ಚಿದಂತೆ ಚುರುಕು ಮೂಡಿಸುತ್ತವೆ ಎಂದರು.

ಹಿರಿಯ ಸಾಹಿತಿ ಚಂಪಾರಿಗೆ ಹರಿಹರ ನೆಚ್ಚಿನ ಊರಾಗಿತ್ತು. ಆಗ ಇಲ್ಲಿನ ಬಂಡಾಯ ಸಾಹಿತಿ, ಕವಿಗಳಿಂದ ರಚಿಸಲ್ಪಟ್ಟ ಕವನಗಳು – ಲೇಖನಗಳು ನಾಡಿನಾದ್ಯಂತ ಪ್ರಚಲಿತವಾಗಿದ್ದವು ಎಂದರು.

ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಯುವ ಕವಿಗಳು ಕೃಷಿ ಮಾಡಬೇಕು. ಮಕ್ಕಳಿಗಾಗಿ ಬರೆದರೆ ನಾಳೆಗಾಗಿ ಬರೆದಂತೆ ಎಂದೂ ಅವರು ಹೇಳಿದರು.

ದಾವಣಗೆರೆಯ ಕವಿ ಕೆ.ಪಿ.ತಾರೇಶ್ ಅಣಬೇರು ಆಶಯ ನುಡಿಗಳನ್ನಾಡಿ, ಕವಿತೆಗಳು ಮಾತನಾಡಬೇಕೆ ಹೊರತು, ಕವಿಯಲ್ಲ. ಇನ್ನೊಬ್ಬರನ್ನು ನೋಡಿ ಅಸೂಯೆಯಿಂದ ಕವನ ರಚಿಸುವುದಕ್ಕಿಂತ, ಕವನ ರಚನೆಯು ಮನಸ್ಸಿನಾಳದಿಂದ, ಅನುಭಾವದಿಂದ ಸಹಜವಾಗಿ ಹುಟ್ಟಬೇಕು ಎಂದರು.

ಕವಿಗಳಾದ ಸಿ.ಕೆ.ಪುಟ್ಟನಾಯ್ಕ್, ರಾಧಾ ಹನುಮಂತಪ್ಪ ಟಿ., ಕೆ.ಎಂ.ರೇಣುಕಾ, ಡಿ.ಜಿ.ಆನಂದ್, ಟಿ.ಎಚ್.ಸಾವಿತ್ರಮ್ಮ, ಡಾ.ನಮಿತಾ ಸತೀಶ್, ಪಿ.ಜಯರಾಮನ್, ಸತೀಶ್ ಎ., ಕೆ.ಬಸವರಾಜ್, ಮನೋಜ್ ಕುಮಾರ್ ಬಿ., ನೂರ್ ಜಹಾನ್, ಗಾಯತ್ರಿ ಜಿ.ಎಸ್., ಅಪ್ಪಾಜಿ ಮುಸ್ಟೂರು, ಶಿವಲೀಲಾ ಜಕ್ಕಾಲಿ, ಎ.ಬಿ.ಬಸವರಾಜಪ್ಪ, ಉಷಾ ಇ., ಮಲೆಬೆನ್ನೂರು ಸಾಬಿರ್ ಅಲಿ, ಜಿಗಳಿ ರಂಗನಾಥ್‌, ಜ್ಯೋತಿ ಉಪಾಧ್ಯ, ಕೃಷ್ಣಪ್ಪ ಕವನ ವಾಚಿಸಿದರು.

ಸಮ್ಮೇಳನದ ಅಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಕವಿಗಳಾದ ಹುಲಿಕಟ್ಟಿ ಚನ್ನಬಸಪ್ಪ, ಕುಂದೂರು ಮಂಜಪ್ಪ, ಬಿ.ಹಾಲೇಶಪ್ಪ, ರಹಮತ್ ಉರ್ ರಹಮಾನ್, ಕೆ.ವಿ.ಮೌನೇಶಾಚಾರ್, ಬಿ.ಮಂಜುಳ, ಕಾಂತರಾಜ್ ಎಂ., ಜಿ.ವಿ.ಬಸವರಾಜ್, ಶಾರದ ಕಣಗೊಟಗಿ, ನಾಗರಾಜ್ ಕತ್ತಿಗೆ, ನ್ಯಾಮತಿಯ ಡಿ.ಎಂ.ಹಾಲಾರಾಧ್ಯ, ಚನ್ನಗಿರಿಯ ಎಲ್.ಜಿ.ಮಧುಕುಮಾರ್ ಉಪಸ್ಥಿತರಿದ್ದರು.

error: Content is protected !!