ಒಂದು ನಿಲ್ದಾಣ ಒಂದು ಉತ್ಪನ್ನ ನವೀಕರಣ ಫಲಕದ ಉದ್ಘಾಟನೆ

ಒಂದು ನಿಲ್ದಾಣ ಒಂದು ಉತ್ಪನ್ನ ನವೀಕರಣ ಫಲಕದ ಉದ್ಘಾಟನೆ

ದಾವಣಗೆರೆ, ಮಾ.12- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ದಲ್ಲಿ, ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮಹತ್ತರ ಪ್ರಯತ್ನವು ದೇಶಾದ್ಯಂತ ನಡೆಯುತ್ತಿದ್ದು ರಾಷ್ಟ್ರದ ಇತಿಹಾಸ ದಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದು ಸಂಸದರಾದ ಜಿ.ಎಂ.ಸಿದ್ದೇಶ್ವರ ತಿಳಿಸಿದರು. 

ಮಂಗಳವಾರ ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ನಡೆದ ಒಂದು ನಿಲ್ದಾಣ ಒಂದು ಉತ್ಪನ್ನ ನವೀಕರಣ ಫಲಕದ ಉದ್ಘಾಟನೆಯನ್ನು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ನೆರವೇರಿಸಿ ಮಾತನಾಡಿದರು. 

ಇಂದು ಭಾರತೀಯ ರೈಲ್ವೆಗೆ ಸಂಬಂಧಿಸಿದ 6000 ಕ್ಕೂ ಹೆಚ್ಚು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ದೇಶಾದ್ಯಂತ ನೆರವೇರಿಸಲಾಗುತ್ತಿದೆ. ಇದರ ಮೌಲ್ಯ 85,000 ಕೋಟಿ ರೂ.ಗಳಿಗಿಂತಲೂ ಹೆಚ್ಚಿದೆ. ಇದು ನಮ್ಮ ರಾಷ್ಟ್ರದ ಬೆಳವಣಿಗೆಯ ಭವಿ ಷ್ಯದ ಭರವಸೆಯ ಚಿತ್ರಣವನ್ನು ಮೂಡಿಸಿದೆ ಎಂದರು.

ವಂದೇ ಭಾರತ್ ರೈಲುಗಳು ಈಗ ರಾಜ್ಯದೊಳಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಕರ್ನಾಟಕದ ರೈಲ್ವೆ ನಿಲ್ದಾಣಗಳನ್ನು ಪುನರುಜ್ಜೀವನಗೊಳಿಸುವ ಅಭಿಯಾ ನದ ಭಾಗವಾಗಿ 44 ಕ್ಕೂ ಹೆಚ್ಚು ನಿಲ್ದಾಣಗಳ ಪುನರಾಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಂದೇ ಭಾರತ್ ರೈಲುಗಳು ದೇಶದ ಉದ್ದಗಲಕ್ಕೂ ಸಂಚರಿಸುತ್ತವೆ. ಕಳೆದ ದಶಕದಲ್ಲಿ ದೇಶಾದ್ಯಂತ 30, 000 ಕಿಲೋಮೀಟರ್‌ಗಿಂತ ಹೆಚ್ಚು ಹೊಸ ರೈಲ್ವೆ ಮಾರ್ಗಗಳು, ಗೇಜ್ ಪರಿವರ್ತನೆ ಮತ್ತು ರೈಲ್ವೆ ಮಾರ್ಗ ಗಳ ದ್ವಿಪಥ ಅಭಿವೃದ್ದಿಯನ್ನು ಕೈಗೊಳ್ಳಲಾಗಿದೆ. ಭಾರ ತೀಯ ರೈಲ್ವೆ ‘ಭಾರತ್ ಗೌರವ್’ ನಂತಹ ಥೀಮ್ ಆಧಾರಿತ ಪ್ರವಾಸಿ ರೈಲುಗಳ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ತಾಣಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದೆ. ಹಾಗೂ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ `ಒಂದು ನಿಲ್ದಾಣ ಒಂದು ಉತ್ಪನ್ನ’ (ಒಎಸ್‍ಪಿ) ಮಳಿಗೆಗಳನ್ನು ಸ್ಥಾಪಿಸುವ ಮೂಲಕ, ಭಾರತೀಯ ರೈಲ್ವೆ ಪ್ರಧಾನ ಮಂತ್ರಿ ಯವರ ‘ವೋಕಲ್ ಫಾರ್ ಲೋಕಲ್’ ಅಭಿಯಾನ ವನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ ಎಂದರು.

 ಕಾರ್ಯಕ್ರಮದಲ್ಲಿ ಹರಿಹರ ಶಾಸಕಬಿ.ಪಿ.ಹರೀಶ್, ಹರಿಹರ ನಾಗರಿಕ ಸಲಹಾ ಸಮಿತಿ ಸದಸ್ಯರಾದ ಸಾವಿತ್ರಮ್ಮ,  ರೈಲ್ವೆ ಅಧಿಕಾರಿಗಳಾದ ಉಮೇಶ್ ನಾಯ್ಕ್, ಮುಖಂಡರಾದ ಯಶವಂತ ಜಾಧವ್, ಗಾಯತ್ರಿ ಸಿದ್ದೇಶ್ವರ, ಯಶೋಧ ವೆಂಕಪ್ಪ, ಪ್ರಶಾಂತ ಕುಮಾರ್, ಜಿ.ಎಸ್.ಶ್ಯಾಮ್ ಇನ್ನಿತರರು ಉಪಸ್ಥಿತರಿದ್ದರು.

error: Content is protected !!