ನಗರದಲ್ಲಿ ನಾಡಿದ್ದು ಶ್ರೀ ರಾಘವೇಂದ್ರ ಸಪ್ತಾಹ

ನಗರದಲ್ಲಿ ನಾಡಿದ್ದು ಶ್ರೀ ರಾಘವೇಂದ್ರ ಸಪ್ತಾಹ

ದಾವಣಗೆರೆ, ಮಾ. 8- ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ 31 ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಇದೇ ದಿನಾಂಕ 11 ರಿಂದ 17 ರವರೆಗೆ ನಗರದ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಏಳು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ವಿಶೇಷ ಪೂಜೆ, ಅಭಿಷೇಕ, ಸುಪ್ರಭಾತ, ಹೋಮ, ಲಕ್ಷ ಪುಷ್ಪಾರ್ಚನೆ ಮತ್ತಿತರೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಈವರೆಗೆ ಮುಂಬೈ, ಕೋಲ್ಕತ್ತಾ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ಕಡೆಗಳಲ್ಲಿ ರಾಘವೇಂದ್ರ ಸಪ್ತಾಹ ನಡೆದಿದ್ದು, ಈ ಬಾರಿ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಲಾವಿದರು, ವಿದ್ವಾಂಸರು, ನಾಡಿನ ವಿವಿಧ ಭಜನಾ ಮಂಡಳಿ ಕಲಾವಿದರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ರಸಪ್ರಶ್ನೆ ಸ್ಪರ್ಧೆ, ದಾಸವಾಣಿ, ಶ್ರೀ ಜಗನ್ನಾಥ ದಾಸರು ರಚಿಸಿದ `ಕನ್ನಡ ರಾಘವೇಂದ್ರ ವಿಜಯ’ ಸಾಮೂಹಿಕ ಪಾರಾಯಣ, ದೀಪೋತ್ಸವ ಸಹಿತ ಶ್ರೀ ರಾಘವೇಂದ್ರ ಸರ್ವಾಭಯ ಪ್ರಾರ್ಥನೆ, ಸಾಮೂಹಿಕ ಲಕ್ಷ್ಮೀ ಶೋಭಾನ ಪಾರಾಯಣ ನಡೆಯಲಿದೆ ಎಂದು ಹೇಳಿದರು.

ಇದೇ ದಿನಾಂಕ 11 ರಂದು ಸಂಜೆ 5 ಗಂಟೆಗೆ ಹಮ್ಮಿಕೊಂಡಿರುವ ಉದ್ಘಾಟನಾ ಸಮಾರಂಭದಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದಂಗಳ ವರು ಸಾನ್ನಿಧ್ಯ ವಹಿಸುವರು.  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಪಂಡಿತ ಕೇಸರಿ ಮಂತ್ರಾಲಯದ ಡಾ. ರಾಜಾ ಎಸ್. ಗಿರಿಯಾಚಾರ್ಯರು, ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ನಿರ್ದೇಶಕರಾದ ಕೆ.ಅಪ್ಪಣ್ಣಾಚಾರ್ಯರು, ಡಾ ಕೊರ್ಲಹಳ್ಳಿ ವೆಂಕಟೇಶಾಚಾರ್, ಅಷ್ಟಾವಧಾನಿ ಡಾ. ಸದಾನಂದ ಶಾಸ್ತ್ರೀ,  ಮೇಯರ್ ಬಿ.ಹೆಚ್. ವಿನಾಯಕ, ಜಿಲ್ಲಾಧಿಕಾರಿ ಡಾ.ಎಂ. ವಿ. ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್ ಮತ್ತಿತರರು ಭಾಗವಹಿಸಲಿದ್ದಾರೆ.

ಈ ಮಹೋತ್ಸವದಲ್ಲಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ಆದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು, ಮುಳುಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರು ಸೇರಿದಂತೆ, ವಿವಿಧ ಮಠಾಧೀಶರುಗಳು ಆಗಮಿಸಲಿದ್ದಾರೆಂದರು.

12 ರಂದು ಸಂಜೆ 5 ಗಂಟೆಗೆ ನಗರದ ಲಕ್ಷ್ಮಿಪ್ಲೋರ್ ಮಿಲ್‌ನಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನದವರೆಗೆ ಶ್ರೀ ಗುರುರಾಜರ ಶೋಭಾಯಾತ್ರೆ ನೆರವೇರಲಿದೆ. 

17 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಸಂಜೆ 6 ಗಂಟೆಯಿಂದ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಸದ  ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಡಾ. ಶಶಿಕಾಂತ್, ಸತ್ಯಬೋಧ ಕುಲಕರ್ಣಿ, ಪಲ್ಲಕ್ಕಿ ವಾಸುದೇವಾಚಾರ್, ಗುರುರಾಜ ಕಡ್ಲೇಬಾಳು, ಕೆ. ರಘುನಾಥರಾವ್, ಶೇಷಾಚಲ, ರಮೇಶ್ ಜಹಗೀರ್‌ದಾರ್ ಉಪಸ್ಥಿತರಿದ್ದರು.

error: Content is protected !!