ದಾವಣಗೆರೆ, ಫೆ. 27- ಮಹಾನಗರ ಪಾಲಿಕೆಯ 2024-25ನೇ ಸಾಲಿಗೆ 17.65 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಯಿತು.
ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮೇಯರ್ ಬಿ.ಹೆಚ್. ವಿನಾಯಕ ಅವರು ಬಜೆಟ್ ಪ್ರತಿ ಬಿಡುಗಡೆ ಮಾಡಿದ ನಂತರ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಬಜೆಟ್ ಮಂಡಿಸಿದರು.
ಅಂತರ್ಜಲ ಮರುಪೂರಣ, ಸುಸಜ್ಜಿತ ಕಸಾಯಿ ಖಾನೆ ನಿರ್ಮಾಣ, ಈರುಳ್ಳಿ ಮಾರುಕಟ್ಟೆಯಿಂದ ವಿನೋಬನಗರ 4ನೇ ಮೇನ್ ವರೆಗೆ ಮೇಲ್ಸೇತುವೆ ನಿರ್ಮಾಣ ಬಜೆಟ್ನಲ್ಲಿ ಪ್ರಸ್ತಾಪಿಸಿರುವ ನೂತನ ಯೋಜನೆಗಳಾಗಿವೆ.
ಆಸ್ತಿ ತೆರಿಗೆಯಿಂದ 35 ಕೋಟಿ ಹಾಗೂ ಆಸ್ತಿ ತೆರಿಗೆ ಮೇಲಿನ ಬಡ್ಡಿಯಿಂದಾಗಿ 6 ಕೋಟಿ ರೂ. ಸಂಗ್ರಹಣೆಯ ಗುರಿ ಹೊಂದಿರುವುದರಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಬಹುದಾದ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.
ದೂಡಾದಿಂದ ನಿರ್ಮಿತವಾದ ಜೆ.ಹೆಚ್. ಪಟೇಲ್ ಬಡಾವಣೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿಕೊಂಡು ಆಸ್ತಿ ತೆರಿಗೆ ವ್ಯಾಪ್ತಿ ವಿಸ್ತರಿಸಿ, ಅಂದಾಜು 35 ಕೋಟಿ ರೂ. ಆಸ್ತಿ ತೆರಿಗೆ ನಿರೀಕ್ಷಿಸಲಾಗಿದೆ.
24×7 ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ, ನೀರು ಸರಬರಾಜು ಮಾಡಿ, ಬಾಕಿ ಉಳಿದ ನೀರಿನ ಕಂದಾಯದ ವಸೂಲಾತಿಗೂ ಕ್ರಮ ವಹಿಸಿ 6 ಕೋಟಿ ರೂ. ಕಂದಾಯ ವಸೂಲಿ ಗುರಿ ಹೊಂದಲಾಗಿದೆ.
ನೆನೆಗುದಿಗೆ ಬಿದ್ದಿದ್ದ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಾಕಿ ಬಾಡಿಗೆ ಮೊತ್ತ ವಸೂಲಿ ಮಾಡಿ, ಹರಾಜಿನಲ್ಲಿ ಹೊಸ ದರ ವಿಧಿಸಲಾಗಿದ್ದು. ಮುಂದಿನ ವರ್ಷಕ್ಕೆ 1.25 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಅನುದಾನ ಹಂಚಿಕೆ ತಾರತಮ್ಯ
ನೀವ್ ಮಾಡಿದ್ದೇ ನಾವ್ ಮಾಡಿದ್ದು
15ನೇ ಹಣಕಾಸು ಯೋಜನೆಯಡಿ ಕಾಂಗ್ರೆಸ್ ಸದಸ್ಯರ ವಾರ್ಡ್ಗೆ ಒಂದೊಂದು ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಬಿಜೆಪಿ ಸದಸ್ಯರಿಗೆ ತಾರತಮ್ಯ ಮಾಡಲಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ
ಪ್ರಸನ್ನ ಕುಮಾರ್ ಆರೋಪಿಸಿದರು.
ಈ ಸಂದರ್ಭದಲ್ಲಿ `ನೀವು ಮಾಡಿದ್ದೇ ಮಾಡಲಾಗಿದೆ’ ಎಂದ ಎ.ನಾಗರಾಜ್, ನಿಮ್ಮ ಅಧಿಕಾರವಧಿಯಲ್ಲಿ ಬಿಜೆಪಿ ಸದಸ್ಯರ ವಾರ್ಡ್ಗಳಿಗೆ ಮೂರ್ನಾಲ್ಕು ಕೋಟಿ ರೂ. ಅನುದಾನ ನೀಡಲಾಗಿತ್ತು ಎಂದರು.
ಜವಾಬ್ದಾರಿ ಮರೆತ ಸದಸ್ಯರು
ಮಹಾನಗರ ಪಾಲಿಕೆ ಮಹತ್ವದ ಬಜೆಟ್ ಸಭೆಗೆ ಅನೇಕ ಸದಸ್ಯರು ಗೈರು ಹಾಜರಾಗಿದ್ದರು. ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ 11.30ಕ್ಕೆ ಆರಂಭವಾಯಿತು. 12.30 ಗಂಟೆಯಾದರೂ 45 ಜನ ಸದಸ್ಯರ ಪೈಕಿ
ಹಾಜರಿದ್ದುದು 32 ಸದಸ್ಯರು ಮಾತ್ರ. ಗೈರು ಹಾಜರಿದ್ದವರಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆಯೇ ಹೆಚ್ಚಾಗಿತ್ತು.
ನಾಡಗೀತೆಯನ್ನೂ ಮರೆತರು:
ಮಹಾನಗರ ಪಾಲಿಕೆಯಲ್ಲಿ ನಡೆಯುವ ಸಾಮಾನ್ಯ ಸಭೆ, ಬಜೆಟ್ ಮಂಡನಾ ಸಭೆಗಳಲ್ಲಿ ನಾಡಗೀತೆ ಹಾಡಲಾಗುತ್ತಿತ್ತು. ಆದರೆ ಈ ಬಾರಿ ನಾಡಗೀತೆ ಹಾಡದೆಯೇ ಸಭೆ ಆರಂಭವಾಯಿತು.
ಖಾಲಿ ಡಬ್ಬಾ ಬಜೆಟ್: ಬಿಜೆಪಿ
ಖಾಲಿ ಡಬ್ಬಾ ಪ್ರದರ್ಶಿಸಿದ ಬಿಜೆಪಿ ಸದಸ್ಯರು
ದಾವಣಗೆರೆ, ಫೆ. 27- ಇದೊಂದು ಖಾಲಿ ಡಬ್ಬಾ ಬಜೆಟ್, ಕಾಟಾಚಾರದ ಬಜೆಟ್, ಜನರನ್ನು ತಪ್ಪು ದಾರಿಗೆ ಎಳೆಯುವ ಬಜೆಟ್ ಈ ಬಜೆಟ್ಗೆ ನಮ್ಮ ವಿರೋಧವಿದೆ ಎಂದು ವಿಪಕ್ಷ ಸದಸ್ಯರು ಖಾಲಿ ಡಬ್ಬಿ ಪ್ರದರ್ಶಿಸಿದರು.
ಬಜೆಟ್ ಪ್ರತಿ ಓದುವುದು ಮುಗಿಯುತ್ತಿದ್ದಂತೆ, ಬಿಜೆಪಿ ಸದಸ್ಯರು, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್ ನೇತೃತ್ವದಲ್ಲಿ, ಖಾಲಿ ಡಬ್ಬ ಪ್ರದರ್ಶಿಸಿದರು.
ವಿಪಕ್ಷ ನಾಯಕ ಪ್ರಸನ್ನಕುಮಾರ್ ಮಾತನಾಡುತ್ತಾ, ಕಳೆದ ವರ್ಷಕ್ಕಿಂತ ಈ ವರ್ಷ ಆರಂಭಿಕ ಶಿಲ್ಕು13 ಕೋಟಿ ರೂ. ಕಡಿಮೆ ತೋರಿಸಲಾಗಿದೆ. ಆದಾಯ ಸಂಗ್ರಹಣೆ ಗುರಿಯನ್ನೇ ಕಡಿಮೆ ಮಾಡಲಾಗಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿಲ್ಲ. ಇದೊಂದು ದೂರದೃಷ್ಟಿ ಕೊರತೆಯ ಬಜೆಟ್ ಎಂದು ದೂರಿದರು.
ಇನ್ನೂ ಬಜೆಟ್ ಏನೆಂದೇ ಗೊತ್ತಿಲ್ಲ, ಆಗಲೇ ಖಾಲಿ ಡಬ್ಬಿ ಪ್ರದರ್ಶಿಸುತ್ತಿದ್ದೀರಿ. ಮೊದಲು ಬಜೆಟ್ ವಿಷಯಗಳ ಬಗ್ಗೆ ಚರ್ಚೆ ನಡೆಯಲಿ ಎಂದು ಕಾಂಗ್ರೆಸ್ ಸದಸ್ಯ ಎ.ನಾಗರಾಜ್ ಹೇಳಿದರು. ಹಿರಿಯ ಸದಸ್ಯ ಅಬ್ದುಲ್ ಲತೀಫ್, ನಮ್ಮ ಬಜೆಟ್ ನೋಡಿ ನಿಮಗೆ ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಆರೋಪಿಸುತ್ತಿದ್ದೀರಿ ಎಂದರು.
ನಿಮ್ಮದು ಖಾಲಿ ಡಬ್ಬ, ಆದರೆ ಪಾಲಿಕೆಯಲ್ಲಿ ಹಣ ತುಂಬಿದೆ ಎಂದು ಡಬ್ಬದಲ್ಲಿ ಹಣದ ಕಂತೆ ತೋರಿಸಿ ಪಾಮೇನಹಳ್ಳಿ ನಾಗರಾಜ್ ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು.
ಹಿರಿಯ ಸದಸ್ಯ ಕೆ.ಚಮನ್ ಸಾಬ್, ಅನಗತ್ಯ ಅಭಿವೃದ್ಧಿ ತೋರಿಸಿ ಜನರಿಗೆ ಮೋಸ ಮಾಡದೇ ಉತ್ತಮ ಬಜೆಟ್ ಮಂಡಿಸಲಾಗಿದೆ. ಹಿಂದಿನ ಐದು ವರ್ಷಗಳ ಕಾಲ ಜಿಲ್ಲೆ ಸಚಿವರಿಲ್ಲದೆ ಅನಾಥವಾಗಿತ್ತು. ಈಗ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನಗರ ಅಭಿವೃದ್ಧಿ ಮಾಡುತ್ತೇವೆ.
ನಗರದಲ್ಲಿನ ಪಾರ್ಕ್ಗಳ ಮಾಹಿತಿಯನ್ನು ಸಚಿವ ಮಲ್ಲಿಕಾರ್ಜುನ್ ಕೇಳಿದ್ದಾರೆ. ಶೀಘ್ರವೇ 15-20 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಪಾರ್ಕುಗಳ ಅಭಿವೃದ್ಧಿಯಾಗಲಿವೆ ಎಂದರು. ಬಜೆಟ್ನಲ್ಲಿ ಪಿ.ಪಿ.ಪಿ. ಮಾದರಿ ಶಾಪಿಂಗ್ ಮಾಲ್ ನಿರ್ಮಾಣ ಯೋಜನೆ ಶ್ಲ್ಯಾಘನೀಯ ಎಂದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್, ಕೆ.ಎಂ. ವೀರೇಶ್, ಉಮಾ ಪ್ರಕಾಶ್, ಶಿವಪ್ರಕಾಶ್, ಸೋಗಿ ಶಾಂತಕುಮಾರ್, ಶಿವಾನಂದ್ ಸೇರಿದಂತೆ ಬಿಜೆಪಿ ಸದಸ್ಯರು ಬಜೆಟ್ ಖಾಲಿ ಡಬ್ಬ ಪ್ರದರ್ಶಿಸಿ, ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಉಳಿದಂತೆ ರಸ್ತೆ ಕಡಿತ, ಯುಜಿಡಿ ಶುಲ್ಕ, ಕಟ್ಟಡ ಪರವಾನಗಿ, ಖಾತಾ ವರ್ಗಾವಣೆ ಮುಂತಾ ಶುಲ್ಕಗಳಿಂದ 63 ಕೋಟಿ ರೂ. ರಾಜಸ್ವ ನಿರೀಕ್ಷಿಸಲಾಗಿದೆ.
ರಾಜ್ಯ ಸರ್ಕಾರದಿಂದ 91.38 ಕೋಟಿ ರೂ. ರಾಜ್ಯ ಹಾಗೂ ಕೇಂದ್ರದ ವಿಶೇಷ ಅನುದಾನ 103.75 ಕೋಟಿ ಹಾಗೂ ಶಾಸಕರ ವಿಶೇಷಾನು ದಾನ 50 ಕೋಟಿ ರೂ. ನಿರೀಕ್ಷಿಸಲಾಗಿದೆ.
ಪಿಪಿಪಿ ಮಾದರಿ ಶಾಪಿಂಗ್ ಮಾಲ್: ಪಾಲಿಕೆ ಒಡೆತನದಲ್ಲಿ ಪ್ರಮುಖ ಸ್ಥಳದಲ್ಲಿರುವ ನಿವೇಶನ ಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ದಲ್ಲಿ ಸುಸಜ್ಜಿತ ಶಾಪಿಂಗ್ ಮಾಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಪಾಲಿಕೆ ಮುಂಭಾಗ ಸ್ಕೈವಾಕ್ ನಿರ್ಮಾಣಕ್ಕೆ 1 ಕೋಟಿ ರೂ. ಮೀಸಲಿಡಲಾಗಿದೆ.
ಈರುಳ್ಳಿ ಮಾರುಟ್ಟೆಯಿಂದ ವಿನೋಬ ನಗರದ 4ನೇ ಮೇನ್ವರೆಗೆ ಮೇಲ್ಸೇತುವೆಯನ್ನು ಈ ವರ್ಷವೇ ನಿರ್ಮಾಣ ಮಾಡುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಬಾತಿ ಕೆರೆ ಹಾಗೂ ಆವರಗೆರೆ ಕೆರೆ ಅಭಿವೃದ್ಧಿ, ಸೋಲಾರ್ ವಿದ್ಯುತ್ ದೀಪ ಅಳವಡಿಕೆ, ಹಸಿ ಹಾಗೂ ಒಣ ಕಸ ಬೇರ್ಪಡಿಸಲು ಪ್ಲಾಸ್ಟಿಕ್ ಬುಟ್ಟಿಗಳ ವಿತರಣೆ, ಸುಸಜ್ಜಿತ ಕಸಾಯಿ ಖಾನೆ ನಿರ್ಮಾಣದ ಕಾಮಗಾರಿಗಳು ಬಜೆಟ್ನಲ್ಲಿವೆ.
ಸಭೆಯಲ್ಲಿ ಉಪ ಮೇಯರ್ ಯಶೋಧ ಹೆಗ್ಗಪ್ಪ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾದ ಉದಯ ಕುಮಾರ್, ಅಬ್ದುಲ್ ಲತೀಫ್ ಹಾಗೂ ಸದಸ್ಯರುಗಳು, ಆಯುಕ್ತರಾದ ರೇಣುಕಾ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.