ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ಆಶಯ
ಹರಪನಹಳ್ಳಿ, ಫೆ. 26 – ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ರಾಜಕೀಯ ಕ್ಷೇತ್ರಕ್ಕೆ ಬಂದು ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೂ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾದ್ಯಂತ ಒತ್ತಾಯ ಕೇಳಿ ಬಂದಿದೆ.
ಭವಿಷ್ಯದ ನಿರ್ಧಾರವು ಏನೇ ಆಗಿದ್ದರೂ ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ನಾವು ನೀಡುತ್ತಿರುವ ಆರೋಗ್ಯ ದಾಸೋಹ ಸೇವೆ ಚಿರಂತನವಾಗಿ ಮುಂದುವರೆಯಲಿದೆ ಎಂದು ದಾವಣಗೆರೆಯ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ಹೇಳಿದರು.
ಹರಪನಹಳ್ಳಿ ತಾಲ್ಲೂಕಿನ ಕಮ್ಮತ್ತಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಚಿಕಿತ್ಸೆ 55ನೇ ಉಚಿತ ಶಿಬಿರದಲ್ಲಿ ಮಾತನಾಡಿ, ವೈದ್ಯಕೀಯ ಸೇವೆಯಲ್ಲಿ ಸಂತೃಪ್ತನಾಗಿದ್ದ ನನ್ನನ್ನು ರಾಜಕೀಯಕ್ಕೆ ಕರೆತರುವ ಹಂಬಲ, ಒತ್ತಾಯವನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಜನರೆಲ್ಲರೂ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸ್ಫರ್ಧಿಸುವ ಸಂಪೂರ್ಣ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವರಿಷ್ಠರಿಗೆ ಸೇರಿದೆ ಎಂದರು.
ಆರೋಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ಮತ್ತು ಸವಾಲು ಇಂದು ಎಲ್ಲ ವಯೋಮಾನ ದವರಿಗೂ ಕಾಡುತ್ತಿದ್ದು, ಇದಕ್ಕೆ ಬದಲಾದ ವಾತಾವರಣ, ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರದ ಪಾತ್ರವೂ ಇದೆ. ಯಾವುದೇ ರೀತಿಯ ದೇಹದ ಅಸಹಜತೆಯನ್ನು ನಿರ್ಲಕ್ಷ್ಯ ಮಾಡದೆಯೇ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ. ರವಿಕುಮಾರ್ ಸಲಹೆ ನೀಡಿದರು.
ಆರೋಗ್ಯ ಶಿಬಿರದಲ್ಲಿ ಕಮ್ಮತಹಳ್ಳಿಯ ಮುಖಂಡರಾದ ಜಯಣ್ಣ, ಎನ್. ಸಿದ್ದಪ್ಪ, ಕೆ.ಯು. ಮುರುಗೇಶ್, ಕೆ.ಎಸ್. ತಿಪ್ಪೇಶ್, ಮರುಳ ಸಿದ್ದೇಶ್, ಕೆ.ಎಲ್. ಪಂಪಾಪತಿ, ಸುರೇಶ್ ಸೇರಿದಂತೆ ಸರ್ವ ಸಹಕಾರ ನೀಡಿ ಭಾಗವಹಿಸಿದ್ದರು.
ಆರೈಕೆ ಆಸ್ಪತ್ರೆಯ ವೈದ್ಯಕೀಯ ತಂಡದಿಂದ ಡಾ. ಆನಂದ್, ಡಾ. ಹನುಮಂತಯ್ಯ, ಡಾ.ಸಂದೀಪ್, ಡಾ. ಕೀರ್ತಿ ಚಿಕಿತ್ಸೆ ಮತ್ತು ಸಲಹೆ ನೀಡಿದರು. ನುಂಕೇಶ್, ಟ್ರಸ್ಟ್ ಸಿಬ್ಬಂದಿಗಳಾದ ವಿನೋದ್ ಕುಮಾರ್, ಶರತ್, ಸುದೀಪ್, ಕಿರಣ್ ಆಲೂರ್, ಯುವ ನಾಯಕರಾದ ಹರೀಶ್. ಡಿ.ಎಸ್, ನಿಖಿಲ್ ಭಾಗವಹಿಸಿದ್ದರು.