ಸರ್ವಜ್ಞ ಸಮಸಮಾಜದ ಸಾಕ್ಷಿಪ್ರಜ್ಞೆ

ಸರ್ವಜ್ಞ ಸಮಸಮಾಜದ ಸಾಕ್ಷಿಪ್ರಜ್ಞೆ

ದಾವಿವಿಯಲ್ಲಿ ನಡೆದ ಸರ್ವಜ್ಞ ತ್ರಿಪದಿಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರೊ.ಚಿತ್ತಯ್ಯ ಪೂಜಾರ

ದಾವಣಗೆರೆ, ಫೆ.20- ಮಹಾತ್ಮರ ವಿಚಾರಧಾರೆಗಳು ಸಮಾಜದ ಕನ್ನಡಿ ಇದ್ದಂತೆ. ಅವರ ತತ್ವ, ಆದರ್ಶ, ಸಂದೇಶಗಳ ವಿಚಾರಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿ ಸೂತ್ರಗಳಾಗಿವೆ. ಇದಕ್ಕೆ ಸರ್ವಜ್ಞ ನಮ್ಮೆಲ್ಲರ ನಡುವಿನ ಸಮಸಮಾಜದ ಸಾಕ್ಷಿಪ್ರಜ್ಞೆಯಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಚಿತ್ತಯ್ಯ ಪೂಜಾರ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯ ಸರ್ವಜ್ಞ ಅಧ್ಯಯನ ಕೇಂದ್ರದ ವತಿಯಿಂದ ಸರ್ವಜ್ಞ ಜಯಂತಿ ಪ್ರಯುಕ್ತ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ಸರ್ವಜ್ಞ ತ್ರಿಪದಿಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸರ್ವಜ್ಞ ಬೀಡಾಡಿಯಾಗಿ ರಲಿಲ್ಲ, ನಾಡಾಡಿಯಾಗಿದ್ದರು. ಆಡುಮಾತಿನ ಪದ ಬಳಕೆಯ ಮೂಲಕ ಜನರ ವಿಚಾರಗಳನ್ನು ಜನರಿಗೆ ತಿಳಿಸಿ ಸಮಾಜ ತಿದ್ದುವ ಕೆಲಸ ಮಾಡಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ಸರ್ವಜ್ಞನ ತ್ರಿಪದಿಗಳಲ್ಲಿರುವ ವಿಚಾರಗಳನ್ನು, ಸೂಕ್ಷ್ಮಸಂದೇಶಗಳನ್ನು, ಮುಕ್ತ ಅನಿಸಿಕೆಗಳನ್ನು ಅವಲೋಕಿಸಿ ದಾಗ ಸಮಾಜದ ವಾಸ್ತವದ ಚಿತ್ರಣ ತೆರೆದುಕೊಳ್ಳುತ್ತದೆ. ನೇರವಾಗಿ, ದಿಟ್ಟ ತನದಿಂದ ಯಾರ ಭೀತಿಗೂ ಮಣೆ ಹಾಕದೆ ತನ್ನ ವಿಚಾರವನ್ನು ವ್ಯಕ್ತಪಡಿಸಿ ದ್ದಾರೆ. ದೇಸಿ ಸಾಹಿತ್ಯದಲ್ಲಿ ಇಂತಹ ಪ್ರಭಾವಿ ವ್ಯಕ್ತಿಗಳ ಬಗ್ಗೆ, ಅವರ ವಿಚಾರಗಳ ಬಗ್ಗೆ ಅಧ್ಯಯನಗಳ ಅಗತ್ಯವಿದೆ. ನಮ್ಮ ಸುತ್ತ ಮುತ್ತಲಿರುವ ಸರ್ವಜ್ಞನಂತಹ ವ್ಯಕ್ತಿಗಳ ಕುರಿತು ಅಧ್ಯಯನ, ಸಂಶೋಧನೆಗಳನ್ನು ನಡೆಸಿ ಪ್ರಚಲಿತಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ಅಧ್ಯಯನಗಳು ಸುಳ್ಳು ಇತಿಹಾಸ ವನ್ನು ನಂಬಬಾರದು. ಸಂಶೋಧನೆ, ಅಧ್ಯಯನದ ಮೂಲಕ ವಾಸ್ತವವನ್ನು ತಿಳಿಸುವ ಕೆಲಸವಾಗಬೇಕು. ವಿಶ್ವವಿದ್ಯಾ ಲಯಗಳು ಜ್ಞಾನಿಗಳನ್ನು ಬಿತ್ತಿ ಜ್ಞಾನವನ್ನು ಬೆಳೆಯುವ ಭೂಮಿಕೆಯಾಗ ಬೇಕು. ಉಪನ್ಯಾಸದ ಜೊತೆಗೆ ಸಂಶೋ ಧನಾ ಪ್ರಬಂಧಗಳ ಪ್ರಕಟಣೆಯ ಮೂಲಕ ಮುಂದಿನ ಪೀಳಿಗೆಗೆ ಅಧ್ಯಯನಕ್ಕೆ ಆಕರಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಸಮಾಜದ ಅಂಕುಕೊಂಡು ತಿದ್ದುತ್ತ, ಬಡವರು- ದುರ್ಬಲರ ನೋವಿಗೆ ಸ್ಪಂದಿಸುವ ಧ್ವನಿಯಾಗಿದ್ದ ಸರ್ವಜ್ಞ ದಿಟ್ಟ ನಿಲುವಿನ ಪ್ರಬುದ್ಧ ವ್ಯಕ್ತಿಯಾಗಿದ್ದರು. ಕಬೀರ, ನಾರಾಯಣಗುರು, ತಿರುವಳ್ವಾರ್ ಮಾದರಿಯಲ್ಲಿ ತ್ರಿಪದಿಗಳ ಮೂಲಕ ತಮ್ಮ ತತ್ವ, ವಿಚಾರಗಳನ್ನು ಬೋಧಿಸಿದ ಸರ್ವಜ್ಞನಿಗೂ ಬುದ್ಧ, ಬಸವ, ಅಂಬೇಡ್ಕರ್‌ಗೆ ಸಿಕ್ಕಂತಹ ಮನ್ನಣೆಗಳು ದೊರೆಯಬೇಕಾಗಿದೆ ಎಂದರು.

ಶಾಲಾ ಹಂತದಲ್ಲಿ ಸಂಕ್ಷಿಪ್ತವಾಗಿ ವ್ಯಕ್ತಿ ಪರಿಚಯ ಮಾಡಿಕೊಂಡರೂ, ಪದವಿ ಮತ್ತು ಸ್ನಾತಕ ಪದವಿಯಲ್ಲಿ ಸಮಗ್ರ ಅಧ್ಯಯನಕ್ಕೆ ಪೂರಕವಾದ ಪಠ್ಯಕ್ರಮ ಅಳವಡಿಸಿಕೊಳ್ಳಬೇಕಾಗಿದೆ. ಆ ಮೂಲಕ ವಿದ್ಯಾರ್ಥಿಗಳು ಹೆಚ್ಚು ಸಂಶೋಧ ನಾತ್ಮಕವಾಗಿ ಅಧ್ಯಯನಶೀಲರಾಗಲು, ಚಿಂತನಶೀಲರಾಗಿ ವಿಚಾರ ಮಂಡಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸರ್ವಜ್ಞನ ತ್ರಿಪದಿಗಳನ್ನು ಕುರಿತ ಸಂಶೋಧನಾ ಲೇಖನಗಳ ಪುಸ್ತಕಗಳನ್ನು ಕುಲಪತಿ ಪ್ರೊ.ಕುಂಬಾರ ಅವರು ಬಿಡುಗಡೆ ಮಾಡಿದರು.

ಕನ್ನಡ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ.ಎಚ್.ವಿಶ್ವನಾಥ ಪುಸ್ತಕ ಪರಿಚಯ ಮಾಡಿದರು. ಸರ್ವಜ್ಞ ಅಧ್ಯಯನ ಪೀಠದ ಸಂಯೋಜನಾಧಿಕಾರಿ ಮತ್ತು ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಯರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕುಲಸಚಿವ ಪ್ರೊ.ವೆಂಕಟರಾವ್ ಪಲಾಟೆ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ ಉಪಸ್ಥಿತರಿದ್ದರು. 

ಡಾ.ಜೋಗಿನಕಟ್ಟೆ ಮಂಜುನಾಥ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿ ರುಜುವಾನ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಎಂ.ಎಲ್ ವಂದಿಸಿದರು.

error: Content is protected !!