ಕುಡಿಯುವ ನೀರು ಸಂಸ್ಕರಣಾ ಘಟಕ ಪರಿಶೀಲನೆ, ಇ-ಖಾತಾ ಆಂದೋಲನ

ಕುಡಿಯುವ ನೀರು ಸಂಸ್ಕರಣಾ ಘಟಕ ಪರಿಶೀಲನೆ, ಇ-ಖಾತಾ ಆಂದೋಲನ

ಹರಿಹರದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್

ಹರಿಹರ, ಫೆ.15 – ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಶುದ್ಧೀಕರಣ ಘಟಕದ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಂಗಳವಾರ ಕೈಗೊಂಡರು. 

 ಬೇಸಿಗೆ ಆರಂಭವಾಗುತ್ತಿದ್ದು,  ಕುಡಿಯುವ ನೀರನ್ನು ಶುದ್ಧೀಕರಣ ಮಾಡಿ ಪೂರೈಕೆ ಮಾಡಬೇಕು. ಇಲ್ಲದಿದ್ದಲ್ಲಿ ಹಲವಾರು ಅನಾರೋಗ್ಯಕ್ಕೆ ಕಾರಣವಾಗುವುದರಿಂದ ಶುದ್ಧೀಕರಣ ಘಟಕದಲ್ಲಿ ನೀರಿಗೆ ಕ್ಲೋರಿನೇಷನ್ ಮಾಡುವ ಮೂಲಕ ಪೂರೈಕೆ ಮಾಡಬೇಕು. ಬೇಸಿಗೆ ಆರಂಭವಾಗಿದ್ದು, ಮಿತವಾಗಿ ಹಾಗೂ ನಿರಂತರವಾಗಿ ನೀರು ಪೂರೈಕೆ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿದರು. 

ಇ-ಖಾತಾ ಆಂದೋಲನ : ಜಿಲ್ಲಾಧಿಕಾರಿ ಸೂಚನೆಯಂತೆ `ನಮ್ಮ ಖಾತೆ, ನಮ್ಮ ಹಕ್ಕು, ನಮ್ಮ ದಾಖಲೆ ನಮ್ಮ ಹಕ್ಕು’ ಘೋಷಣೆಯನ್ವಯ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲವಾಗಲು ಇ-ಖಾತೆ ಆಂದೋಲನದ ಮೂಲಕ ಮನೆ ಮನೆಗೂ ಇ-ಸ್ವತ್ತು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. 

ಆಸ್ತಿ ತೆರಿಗೆ ಪಾವತಿಸಿದ ಎಲ್ಲಾ ಖಾತೆದಾರರಿಗೆ ಇ-ಸ್ವತ್ತು ದಾಖಲೆ ನೀಡಲಾಗುತ್ತದೆ. ಇದಕ್ಕಾಗಿ ಗುತ್ತೂರು ಸತ್ಯ ಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಆಂದೋಲನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅವರು ನಾಗರಿಕರಿಗೆ ಇ-ಸ್ವತ್ತು ಪ್ರಮಾಣ ಪತ್ರ ವಿತರಿಸಿದರು. 

 ಹೊಸ ನಗರಸಭೆ ಕಟ್ಟಡ ಪರಿಶೀಲನೆ: ಹರಿಹರ ನಗರಸಭೆ ಹೊಸ ಕಟ್ಟಡವನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗು ತ್ತಿದೆ. ಈ ಕಟ್ಟಡ ಕಾಮಗಾರಿಯ ಪ್ರಗತಿ ಪರಿ ಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ಜೊತೆಗೆ ನಿಗದಿತ ಕಾಲಾವಧಿಯಲ್ಲಿ ಕಟ್ಟಡ ನಿರ್ಮಿಸಿಕೊಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. 

ನೀರಿನ ಹರಿವು ಪರಿಶೀಲನೆ : ಭದ್ರಾ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮೈಲಾರ ಜಾತ್ರಾ ಮಹೋತ್ಸವದ ಉದ್ದೇಶಕ್ಕೆ ತುಂಗಭದ್ರಾ ನದಿಗೆ ನೀರು ಬಿಡಲಾಗಿದ್ದು ನೀರಿನ ಹರಿವು ಬಗ್ಗೆ ಅಧಿಕಾರಿಗಳೊಂದಿಗೆ ಹರಿಹರದ ಸಮೀಪ ಪರಿಶೀಲನೆ ನಡೆಸಿದರು. 

ಈ ವೇಳೆ ನಗರಾಭಿವೃದ್ದಿ ಕೋಶದ ಯೋ ಜನಾ ನಿರ್ದೇಶಕ ಮಹಂತೇಶ್, ತಹಶೀಲ್ದಾರ್ ಗುರುಬಸವರಾಜ್, ನಗರಸಭೆ ಆಯುಕ್ತ ಬಸವರಾಜ್ ಐಗೂರು ಉಪಸ್ಥಿತರಿದ್ದರು. 

error: Content is protected !!